ನಾನು ಜನರ ಗಾಯಗಳನ್ನು ಗುಣಪಡಿಸಲು ಇರುವವನೇ ಹೊರತು ಕೊಲ್ಲಲು ಅಲ್ಲ - ಟಿಪ್ಪುಸುಲ್ತಾನ್
ಇತಿಹಾಸ-ವರ್ತಮಾನ
![ನಾನು ಜನರ ಗಾಯಗಳನ್ನು ಗುಣಪಡಿಸಲು ಇರುವವನೇ ಹೊರತು ಕೊಲ್ಲಲು ಅಲ್ಲ - ಟಿಪ್ಪುಸುಲ್ತಾನ್ ನಾನು ಜನರ ಗಾಯಗಳನ್ನು ಗುಣಪಡಿಸಲು ಇರುವವನೇ ಹೊರತು ಕೊಲ್ಲಲು ಅಲ್ಲ - ಟಿಪ್ಪುಸುಲ್ತಾನ್](/images/placeholder.jpg)
ಟಿಪ್ಪು ಸುಲ್ತಾನ್ 18ನೆ ಶತಮಾನದಲ್ಲಿ ಭಾರತ ಕಂಡ ಅತ್ಯಾಧುನಿಕ ರಾಜ. ಕೇವಲ 49 ವರ್ಷಗಳ ಕಾಲ ಬದುಕಿದ್ದ ಟಿಪ್ಪು ತನ್ನ ಸಮಕಾಲೀನರಿಗಿಂತ ಪ್ರಬುದ್ಧನಾಗಿದ್ದ ರಾಜ. ಟಿಪ್ಪುವನ್ನು ಬಿಡಿಬಿಡಿ ಘಟನೆಗಳಿಂದ ಮತ್ತು ಈಗಿನ ಸೈದ್ಧಾಂತಿಕ ಮತ್ತು ಚಾರಿತ್ರಿಕ ಮಾನದಂಡಗಳಿಂದ ಅಳೆಯಲು ಪ್ರಯತ್ನಿಸಲಾಗುತ್ತಿದೆ. ಕೆಲವರು ಟಿಪ್ಪುವನ್ನು ಮತಾಂಧನಂತೆ ಬಿಂಬಿಸಿದ್ದಾರೆ.
ಭಾರತೀಯ ಘನತೆ ಮತ್ತು ಸ್ವಾತಂತ್ರ್ಯವನ್ನು ಎತ್ತಿಹಿಡಿಯಲು ತನ್ನ ಮಕ್ಕಳನ್ನೇ ಬ್ರಿಟಿಷರಿಗೆ ಒತ್ತೆಯಿಟ್ಟ ಧೀರೋದಾತ್ತ ರಾಜನ ನೆನಪನ್ನು ಜನಮಾನಸ ದಿಂದ ಅಳಿಸಿ ಹಾಕಲು ಪ್ರಯತ್ನಿಸುತ್ತಿದ್ದಾರೆ. ಅಂತಾರಾಷ್ಟ್ರೀಯ ಸಂಬಂಧ, ವ್ಯಾಪಾರ, ಕೃಷಿ, ಯುದ್ಧ ಮತ್ತು ಆಡಳಿತ ಪ್ರತಿಯೊಂದರ ಬಗೆಗೂ ಆಧುನಿಕವಾಗಿ ಯೋಚಿಸಬಲ್ಲ ವನಾಗಿದ್ದ ಟಿಪ್ಪು ಆಳದಲ್ಲಿ ಕವಿ ಮತ್ತು ತತ್ವಜ್ಞಾನಿ ಯಾಗಿದ್ದ. ಇದನ್ನು ಅರಿತುಕೊಳ್ಳಲು ಟಿಪ್ಪುವಿನ ಪತ್ರವ್ಯವಹಾರವನ್ನು ಗಮನಿಸಬೇಕು. ಆತನ ಪತ್ರಗಳನ್ನು ನ್ಯಾಶನಲ್ ಆರ್ಕೈವ್ಸ್ ಆಫ್ ಇಂಡಿಯ, ಕೋಲ್ಕತಾ, ಮದರಾಸು ಮತ್ತು ಪಾಂಡಿಚೇರಿ ಲೈಬ್ರರಿಗಳಿಂದ ಸಂಗ್ರಹಿಸಿ, ಮತ್ತಷ್ಟು ದಾಖಲೆಗಳನ್ನು ಇಂಗ್ಲೆಂಡಿನಿಂದ ತರಿಸಿಕೊಂಡ ವಿದ್ವಾಂಸ ಭಗವಾನ್, ಎಸ್.ಗಿದ್ವಾನಿಯವರು ತಮ್ಮ ‘ದಿ ಸ್ವೋರ್ಡ್ ಆಫ್ ಟಿಪ್ಪುಸುಲ್ತಾನ್’ ಎಂಬ ಕೃತಿಯಲ್ಲಿ ಕಡೆದಿಟ್ಟಿದ್ದಾರೆ. ಆ ಪುಸ್ತಕದಲ್ಲಿ ಪ್ರಕಟವಾಗಿರುವ ಟಿಪ್ಪುಸುಲ್ತಾನನ ಪತ್ರಗಳು ಆತನೊಳಗಿರುವ ಕವಿ ಮತ್ತು ತತ್ವಜ್ಞಾನಿಯನ್ನು ತೆರೆದಿಡುತ್ತದೆ.
ಕವಿ ಹೃದಯದ ರಾಜನೊಬ್ಬನ ಎದೆಯ ದನಿಯನ್ನು ಓದುಗರು ಆಲಿಸ ಲೆಂದು ಈ ಅನುವಾದವನ್ನು ನೀಡುತ್ತಿದ್ದೇವೆ.
‘‘ನನ್ನ ಜೀವನವನ್ನು ಪ್ರಶಾಂತವಾಗಿ ನನ್ನ ಪ್ರೀತಿಯ ಪುಸ್ತಕಗಳೊಡನೆ ಮತ್ತು ನನ್ನದೇ ಕನಸುಗಳೊಡನೆ ಕಾಲ ಕಳೆಯುವುದಕ್ಕಿಂತ ಖಡ್ಗ ಹಿಡಿದು ನಡೆಯುವುದು ನಿಜವಾಗಿಯೂ ಒಳ್ಳೆಯದೇ?
ನನ್ನ ಹೆಂಡತಿ ಮಕ್ಕಳೊಡನೆ ಸ್ವಲ್ಪ ಸಮಯವಾದರೂ ಸುಂದರವಾಗಿ ಕಾಲಕಳೆಯಲು ಹಂಬಲಿಸುವ ನಾನು, ಸದಾಕಾಲ ಯುದ್ಧವನ್ನು ಬೆಂಬತ್ತಿ ಕುದುರೆಯ ಮೇಲೆ ಕುಳಿತು ಕಾಲ ಕಳೆಯಬೇಕೇ? ಪ್ರಾರ್ಥನೆಯ ಕರೆಗಿಂತ ಕತ್ತಿಯ ಕರೆಯೇ ಪ್ರಬಲವಾಗಿ ಹೋಯಿತೇ? ಗುಡಿಗೋಪುರ ಅಥವಾ ಸಂತನಿಗಿಂತ ಯುದ್ಧ ಮೈದಾನವೇ ಪ್ರಧಾನವೇ?
ಪೂರ್ಣಯ್ಯ
ಸುತ್ತ ಇರುವ ಬೆಟ್ಟಗುಡ್ಡಗಳನ್ನು ಚಿತ್ರಿಸಲು ಇಷ್ಟಪಡುತ್ತೇನೆ. ಪೂರ್ಣಯ್ಯ ನನಗೆ ಹೇಳು ನನ್ನಿಂದ ಕೊಲ್ಲಲ್ಪಟ್ಟವರ ರಕ್ತದಿಂದ ಚಿತ್ರ ಬಿಡಿಸಲಾಗುವುದೇ? ನಾನು ಸೂರ್ಯೋದಯವನ್ನು, ಆಗ ತಾನೇ ಬೀಸುತ್ತಿರುವ ಹೊಚ್ಚಹೊಸ ತಂಗಾಳಿಯನ್ನು ಹೂ ತುಂಬಿರುವ ಮರಗಳನ್ನು, ನೀಲಿ ಸಮುದ್ರವನ್ನು ಚಿತ್ರಿಸಲು ಬಯಸುವೆ.
ಆದರೆ ಅದು ರಕ್ತದ ಬಣ್ಣಗಳಿಂದಲ್ಲ.
ವಿಶ್ವಾಸದಿಂದ ಹೊರಹೊಮ್ಮುವ ಪ್ರಾರ್ಥನಾ ಕರೆಯಿಂದ. ಚಿತ್ರಬಿಡಿಸುವೆ, ಆದರೆ ಯುದ್ಧದಲ್ಲಿ ಗಾಯಗೊಂಡವರ ಆರ್ತನಾದದಿಂದಲ್ಲ.
ಕ್ಯಾನ್ವಾಸ್ನ ಮೇಲೆ ಮನುಷ್ಯನ ಗಾಢ ಹಂಬಲ ಮತ್ತು ಕನಸುಗಳನ್ನು ಚಿತ್ರಿಸಲು ಬಯಸುವೆನೇ ಹೊರತು ಅವನ ಸಾವು ಮತ್ತು ಅವನತಿಯನ್ನಲ್ಲ.
ನಾನು ಜನರ ಗಾಯಗಳನ್ನು ಗುಣಪಡಿಸಲು ಇರುವವನೇ ಹೊರತು ಕೊಲ್ಲಲು ಅಲ್ಲ’’.