38 ಕೋಟಿ ರೂ. ವೆಚ್ಚದಲ್ಲಿ ವಿವಿಧ ಯೋಜನೆಗಳ ಅನುಷ್ಠಾನ
ಕಾಪು ಪುರಸಭೆ ವರ್ಷಾಚರಣೆ ಸಂಭ್ರಮ

ಕಾಪು, ಜೂ.4: ಪುರಸಭೆ ರಚನೆಯಾಗಿ ಒಂದು ವರ್ಷದ ಅವಧಿಯಲ್ಲಿ ಸರಕಾರದಿಂದ ಬಿಡುಗಡೆಯಾದ ವಿವಿಧ ಅನುದಾನಗಳನ್ನು ಬಳಸಿಕೊಂಡು ಸುಮಾರು 38 ಕೋಟಿ ರೂ. ವೆಚ್ಚದಲ್ಲಿ ವಿವಿಧ ಯೋಜನೆಯನ್ನು ಅನುಷ್ಠಾನ ಗೊಳಿಸಲಾಗಿದೆ ಎಂದು ಕಾಪು ಪುರಸಭಾ ಅಧ್ಯಕ್ಷೆ ಸೌಮ್ಯಾ ಹೇಳಿದ್ದಾರೆ.
ಕಾಪು ಪುರಸಭಾ ಸಭಾಂಗಣದಲ್ಲಿ ಶನಿವಾರ ನಡೆದ ವರ್ಷಾಚರಣೆ ಸಂಭ್ರಮದಲ್ಲಿ ಮಾತನಾಡಿದಅವರು, 14ನೆ ಹಣಕಾಸು ಯೋಜನೆಯಡಿ ಸಕ್ಕಿಂಗ್ ಯಂತ್ರ ಖರೀದಿಸಲು ತೀರ್ಮಾನಿಸಲಾಗಿದೆ.ಮನೆ-ಮನೆಯಲ್ಲಿ ಕಸ ಬೇರ್ಪಡಿಸಿ ಸಂಗ್ರಹಣೆ ಮಾಡಲು ಬಕೆಟ್ಗಳನ್ನು ವಿತರಿಸಲಾಗುವುದು. ಪುರಸಭಾ ವ್ಯಾಪ್ತಿಯ ರಸ್ತೆಗಳಿಗೆ ಪಾದಾಚಾರಿ ಮಾರ್ಗ ನಿರ್ಮಾಣ, ಮಳೆ ನೀರು ಚರಂಡಿ ರಚನೆ, ಸಮಗ್ರ ನೀರು ಸರಬರಾಜು ಯೋಜನೆಯಲ್ಲಿ 70 ಕೋಟಿ ರೂ. ಮೀಸಲಿರಿಸಲಾಗಿದೆ ಎಂದು ಹೇಳಿದರು.
ಕಳೆದ ಒಂದು ವರ್ಷದ ಅವಧಿಯಲ್ಲಿ ಜನರ ಸಮಸ್ಯೆಗಳನ್ನು ಪರಿಹರಿಸಲು ದೂರು ನೀಡಲು ಆನ್ಲೈನ್ ತಂತ್ರಾಂಶವನ್ನು ಅಳವಡಿಸಿ ಕೊಳ್ಳಲಾಗಿದೆ. ಪುರಸಭಾ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಲಾಗಿದ್ದು, ಬಟ್ಟೆ ಚೀಲ ಗಳನ್ನು ವಿತರಿಸಲಾಗಿದೆ. ಹಸಿ ಹಾಗೂ ಒಣ ಕಸವನ್ನು ವಿಂಗಡಿಸಿ ಮನೆ ಮನೆಯಿಂದ ಸಂಗ್ರಹಿಸ ಲಾಗುತ್ತಿದೆ ಎಂದರು.
*ದ್ವಿಪಥ ರಸ್ತೆ ಯೋಜನೆ: ಶಾಸಕ ವಿನಯಕುಮಾರ್ ಸೊರಕೆ ಮಾತನಾಡಿ, ಕಾಪು ಪುರಸಭೆ ವ್ಯಾಪ್ತಿಯ ಪ್ರಮುಖ ರಸ್ತೆಗಳನ್ನು ದ್ವಿಪಥಗೊಳಿಸಲಾಗುವುದು. ಹಸಿರೀಕರಣ, ಸಂಪರ್ಕ ರಸ್ತೆಗಳ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಪುರಸಭಾ ವ್ಯಾಪ್ತಿಯಲ್ಲಿ ಸಮಗ್ರ ಒಳಚರಂಡಿ ಯೋಜನೆಗೆ ಕ್ರಿಯಾ ಯೋಜನೆ ರೂಪಿಸಲಾಗಿದೆ. ಕೊಳಚೆ ನೀರಿನ ಸಂಸ್ಕರಣಾ ಘಟಕ ನಿರ್ಮಾಣಕ್ಕೆ ಸ್ಥಳ ಗುರುತಿಸಲಾಗಿದ್ದು, ಶೀಘ್ರ ಕಾಮಗಾರಿ ಆರಂಭಿಸಲಾಗುವುದು ಎಂದರು.
ಹೊಸದಾಗಿ ರಚನೆಯಾಗಿರುವ ಪುರಸಭೆಯಲ್ಲಿ ಪ್ರಥಮ ಸ್ಥಾನದಲ್ಲಿರುವ ಕಾಪು ಪುರಸಭೆ ಈ ವರ್ಷ ಸುಮಾರು ಒಂದು ಕೋಟಿ ರೂ. ತೆರಿಗೆ ಸಂಗ್ರಹ ಮಾಡಿದೆ. ಹಿಂದೆ ಗ್ರಾಪಂ ಆಗಿದ್ದಾಗ 50 ಲಕ್ಷ ರೂ. ತೆರಿಗೆ ಸಂಗ್ರಹವಾಗಿತ್ತು ಎಂದರು.
ಕಾಪು ಪುರಸಭೆ ವ್ಯಾಪ್ತಿಯ ಮಲ್ಲಾರಿನಲ್ಲಿ ಶೌಚಾಲಯ ತ್ಯಾಜ್ಯದಿಂದ ಬಯೋಗ್ಯಾಸ್ ಉತ್ಪಾದನೆ ಮಾಡುವ ಗುರಿಯನ್ನು ಮುಂದಿನ ಅವಧಿಯಲ್ಲಿ ಹೊಂದಲಾಗಿದೆ. ಪುರಸಭಾ ವ್ಯಾಪ್ತಿಯ ಶಾಲಾ ಆವರಣ, ರಸ್ತೆ ಬದಿ ಹಾಗೂ ಸರಕಾರಿ ಜಾಗದಲ್ಲಿ ಹಸಿರೀಕರಣ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು. ಪುರಸಭಾ ಉಪಾಧ್ಯಕ್ಷ ಕೆ.ಎಚ್.ಉಸ್ಮಾನ್, ಸ್ಥಾಯಿ ಸಮಿತಿಯ ಅಧ್ಯಕ್ಷ ಅಬ್ದುಲ್ ಹಮೀದ್ ಮೂಳೂರು, ವಿರೋಧ ಪಕ್ಷದ ನಾಯಕ ಅರುಣ್ ಶೆಟ್ಟಿ ಪಾದೂರು, ಮುಖ್ಯಾಧಿಕಾರಿ ರಾಯಪ್ಪ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ದಿವಾಕರ ಶೆಟ್ಟಿ ಕಾಪು ಉಪಸ್ಥಿತರಿದ್ದರು.







