ನೆಕ್ಕಿಲಾಡಿ: ಮನೆಗೆ ನುಗ್ಗಿ ಬರಿಗೈಯಲ್ಲಿ ವಾಪಸಾದ ಕಳ್ಳರು!
.gif)
ಉಪ್ಪಿನಂಗಡಿ, ಜೂ.5: ಇಲ್ಲಿನ ಉದ್ಯಮಿಯೋರ್ವರ ಮನೆಗೆ ನುಗ್ಗಿದ ಕಳ್ಳರು ಕಳ್ಳತನಕ್ಕೆ ವಿಫಲ ಯತ್ನ ನಡೆಸಿದ ಘಟನೆ ವರದಿಯಾಗಿದೆ.
ಇಲ್ಲಿನ 34ನೇ ನೆಕ್ಕಿಲಾಡಿ ನಿವಾಸಿ ಇಸ್ಮಾಯೀಲ್ ಇಕ್ಬಾಲ್ ಎಂಬವರ ಮನೆ ಬಾಗಿಲಿನ ಬೀಗ ಮುರಿದು ಒಳನುಗ್ಗಿದ ಕಳ್ಳರು, ಮನೆಯೊಳಗಿದ್ದ ಕಪಾಟುಗಳನ್ನು ತೆರೆದು, ಅದರಲ್ಲಿದ್ದ ಬಟ್ಟೆಬರೆಗಳನ್ನು ಚೆಲ್ಲಾಪಿಲ್ಲಿಯಾಗಿಸಿದ್ದಾರೆ. ಅಲ್ಲದೇ, ಡ್ರಾವರ್ ತೆಗೆದು ಅದರಲ್ಲಿದ್ದ ಆಭರಣ ಪೆಟ್ಟಿಗೆಗಳನ್ನೆಲ್ಲಾ ತಡಕಾಡಿದ್ದಾರೆ. ಆದರೆ ಇಸ್ಮಾಯಿಲ್ ಇಕ್ಬಾಲ್ ಅವರು ಮೊದಲಿನಿಂದಲೂ ಚಿನ್ನಾಭರಣವನ್ನು ಬ್ಯಾಂಕ್ ಲಾಕರ್ನಲ್ಲಿಡುತ್ತಿದ್ದು, ನಗದನ್ನು ಕೂಡಾ ಬ್ಯಾಂಕ್ನಲ್ಲಿಯೇ ಇಡುತ್ತಿದ್ದರು. ಹಾಗಾಗಿ ಕಳ್ಳರಿಗೆ ಇಲ್ಲೇನೂ ಸಿಗದೇ ಬರಿಗೈಯಲ್ಲೇ ವಾಪಸಾಗುವಂತಾಗಿದೆ.
ರವಿವಾರ ರಾತ್ರಿ ಇಸ್ಮಾಯಿಲ್ ಇಕ್ಬಾಲ್ ಅವರ ಕುಟುಂಬ ಮನೆಯಲ್ಲಿಲ್ಲದ್ದ ವೇಳೆ ಈ ಕೃತ್ಯ ನಡೆದಿದ್ದು, ರಾತ್ರಿ 11 ಗಂಟೆಗೆ ಇಸ್ಮಾಯಿಲ್ ಇಕ್ಬಾಲ್ ಅವರ ಕುಟುಂಬ ಮನೆಗೆ ಆಗಮಿಸಿದಾಗ ಕಳ್ಳತನ ಕೃತ್ಯ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ