ಬಾಹ್ಯಾಕಾಶ ಕ್ಷೇತ್ರದಲ್ಲಿ ದಾಖಲೆ ಬರೆದ ಇಸ್ರೋ
ಜಿಸ್ಯಾಟ್–19 ಉಪಗ್ರಹವನ್ನು ಉಡಾವಣೆ

ಶ್ರೀಹರಿಕೋಟಾ, ಜೂ.5: ಮೇಕ್ ಇನ್ ಇಂಡಿಯಾದಲ್ಲಿ ನಿರ್ಮಿಸಲಾದ ಜಿಸ್ಯಾಟ್–19 ಉಪಗ್ರಹವನ್ನು ಇಂದು ಉಡಾಯಿಸಲಾಯಿತು.
4 ಟನ್ ತೂಕದ ಉಪಗ್ರಹವನ್ನು ಶ್ರೀಹರಿ ಕೋಟಾದ ಸತೀಶ್ ಧವನ್ ಸ್ಪೇಸ್ ಸೆಂಟರ್ ನಿಂದ ಉಡಾಯಿಸಲಾಯಿತು. ಇದರೊಂದಿಗೆ ಇಸ್ರೋ ಐತಿಹಾಸಿಕ ಸಾಧನೆ ಮಾಡಿದೆ.
ಸೋಮವಾರ ಸಂಜೆ 5.28ಕ್ಕೆ ಜಿಸ್ಯಾಟ್–19 ಉಪಗ್ರಹವನ್ನು ಹೊತ್ತು, ಭಾರತದ ಅತ್ಯಂತ ದೈತ್ಯ ರಾಕೆಟ್ ಜಿಎಸ್ಎಲ್ವಿ ಮಾರ್ಕ್ 3 ಬಾಹ್ಯಾಕಾಶದತ್ತ ಜಿಗಿಯಿತು.
ಜಿಸ್ಯಾಟ್–19 ಈವರೆಗಿನ ಭಾರತದ ಅತ್ಯಂತ ದೊಡ್ಡ ಉಪಗ್ರಹವಾಗಿದೆ. ಸಂಪೂರ್ಣ ದೇಶೀಯವಾಗಿ ಅಭಿವೃದ್ಧಿಪಡಿಸಿದ ಹಲವು ತಂತ್ರಜ್ಞಾನ ಮತ್ತು ಉಪಕರಣಗಳನ್ನು ಒಳಗೊಂಡಿವೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಯು ತನ್ನ ಅತ್ಯಂತ ಬಲಶಾಲಿ ರಾಕೆಟ್,‘ಫ್ಯಾಟ್ ಬಾಯ್’ ಜಿಎಸ್ಎಲ್ವಿ ಎಂಕೆ 3-ಡಿ1 ಅನ್ನು ಸ್ವದೇಶಿ ನಿರ್ಮಿತ ಕೃಯೊಜೆನಿಕ್ ಇಂಜಿನ್ ಅನ್ನು ಬಳಸಿ ಯಶಸ್ವಿಯಾಗಿ ಉಡಾವಣೆಗೊಳಿಸುವ ಮೂಲಕ ಹೊಸ ಇತಿಹಾಸವನ್ನು ಬರೆಯಿತು. ಮೊದಲ ಬಾರಿಗೆ ನಭಕ್ಕೆ ಚಿಮ್ಮಿದ ‘ಫ್ಯಾಟ್ ಬಾಯ್’ ದೇಶದ ಅತ್ಯಂತ ಭಾರದ ಸಂವಹನ ಉಪಗ್ರಹ ಜಿಸ್ಯಾಟ್-19ನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದೆ.
43.43 ಮೀ.ಎತ್ತರದ ಜಿಎಸ್ಎಲ್ವಿ ಎಂಕೆ3-ಡಿ1 3,136 ಕೆಜಿ ತೂಕದ ಜಿಸ್ಯಾಟ್-19 ಉಪಗ್ರಹವನ್ನು ಹೊತ್ತುಕೊಂಡು ಸೋಮವಾರ ಸಂಜೆ 5:28ಕ್ಕೆ ಇಲ್ಲಿಯ ಸತೀಶ ಧವನ್ ಅಂತರಿಕ್ಷ ಕೇಂದ್ರದ ಉಡಾವಣಾ ನೆಲೆಯಿಂದ ನಭಕ್ಕೆ ಚಿಮ್ಮಿದ ಸರಿಯಾಗಿ 16 ನಿಮಿಷಗಳ ಬಳಿಕ ಅದನ್ನು ನಿಗದಿತ ಕಕ್ಷೆಗೆ ಸೇರಿಸುವಲ್ಲಿ ಯಶಸ್ವಿಯಾಗಿದೆ.
ಉಡಾವಣೆ ಯಶಸ್ವಿಯಾದ ಹರ್ಷದಿಂದ ಬೀಗುತ್ತಿದ್ದ ಇಸ್ರೋ ಅಧ್ಯಕ್ಷ ಎ.ಎಸ್.ಕಿರಣ್ ಕುಮಾರ್ ಅವರು ಇದೊಂದು ‘ಐತಿಹಾಸಿಕ ದಿನ ’ಎಂದು ಬಣ್ಣಿಸಿದರು. ತನ್ನ ಮೊದಲ ಪ್ರಯತ್ನದಲ್ಲಿಯೇ ಮುಂದಿನ ಪೀಳಿಗೆಯ ಉಪಗ್ರಹ ವಾಗಿರುವ ಜಿಸ್ಯಾಟ್-19ನ್ನು ಅಪೇಕ್ಷಿತ ಕಕ್ಷೆಯಲ್ಲಿ ಸೇರಿಸುವ ಮೂಲಕ ಅದು ಯಶಸ್ವಿ ಯಾಗಿ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಿದೆ ಎಂದರು.
‘‘ಇಂದಿನ ಉಡಾವಣೆಗಾಗಿ 2002ರಿಂದಲೂ ಪ್ರತಿದಿನ ಪಟ್ಟು ಹಿಡಿದು ಶ್ರಮಿಸಿರುವ ಇಡೀ ತಂಡಕ್ಕೆ ನನ್ನ ಅಭಿನಂದನೆಗಳು ’’ಎಂದು ಕುಮಾರ್ ಹೇಳಿದರು.
ಪ್ರಧಾನಿ ನರೇಂದ್ರ ಮೋದಿಯವರು ತನಗೆ ಕರೆ ಮಾಡಿ ಈ ಯಶಸ್ವಿ ಅಭಿಯಾನಕ್ಕಾಗಿ ಇಸ್ರೋ ತಂಡದ ಪ್ರತಿಯೊಬ್ಬ ಸದಸ್ಯರನ್ನೂ ಅಭಿನಂದಿಸಿದರು ಎಂದು ಕುಮಾರ್ ತಿಳಿಸಿದರು.
ಜಿಸ್ಯಾಟ್-19 ಭಾರತದ ಸಂವಹನ ಸಂಪನ್ಮೂಲಗಳಿಗೆ ಇನ್ನಷ್ಟು ಬಲ ತುಂಬಲಿದೆ.
2,300 ಕೆ.ಜಿ.ಗೂ ಅಧಿಕ ಭಾರದ ಉಪಗ್ರಹಗಳ ಉಡಾವಣೆಗೆ ಇಸ್ರೋ ವಿದೇಶಿ ಉಡಾವಣಾ ವಾಹನಗಳನ್ನೇ ಅವಲಂಬಿಸಬೇಕಾಗಿದ್ದರಿಂದ ಸೋಮವಾರದ ಜಿಎಸ್ಎಲ್ವಿ ಅಭಿಯಾನವು ಭಾರತದ ಪಾಲಿಗೆ ಮಹತ್ವದ್ದಾಗಿದೆ. ಜಿಎಸ್ಎಲ್ವಿ ಎಂಕೆ3-ಡಿ1 ರಾಕೆಟ್ ಭೂಸ್ಥಿರ ವರ್ಗಾವಣೆ ಕಕ್ಷೆಗೆ 4,000 ಕೆ.ಜಿ. ಮತ್ತು ಕೆಳ ಭೂ ಕಕ್ಷೆಗೆ 10,000 ಕೆ.ಜಿ.ಗಳಷ್ಟು ತೂಕದ ಸರಕುಗಳು ಅಥವಾ ಉಪಗ್ರಹಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ.
‘ಫ್ಯಾಟ್ ಬಾಯ್’ ಉಡಾವಣೆಯೊಂದಿಗೆ ಇಸ್ರೋ ವರ್ಷಗಳಿಂದಲೂ ತನ್ನ ಪಾಲಿಗೆ ಗಗನ ಕುಸುಮವಾಗಿದ್ದ ಕೃಯೊಜೆನಿಕ ಇಂಜಿನ್ ಅಭಿವೃದ್ಧಿಗೊಳಿಸುವಲಿ ತನ್ನ ಸಾಮರ್ಥ್ಯ ವನ್ನು ಮೆರೆದಿದೆ. ಜೊತೆಗೆ ಈ ಅಭಿಯಾನವು ಚಂದ್ರಯಾನ-2, ಮಾನವ ಸಹಿತ ಬಾಹ್ಯಾಕಾಶ ಯಾತ್ರೆ ಸೇರಿದಂತೆ ಇಸ್ರೋದ ಭವಿಷ್ಯದ ಮಹತ್ವಾಕಾಂಕ್ಷಿ ಯೋಜನೆಗಳಿಗೆ ಸುಭದ್ರ ಬುನಾದಿಯನ್ನು ನಿರ್ಮಿಸಿದೆ.
ಭಾರತದ ಸ್ವದೇಶಿ ನಿರ್ಮಿತ ಕೃಯೊಜೆನಿಕ್ ಇಂಜಿನ್ ರಷ್ಯನ್ ವಿನ್ಯಾಸದ ಇಂಜಿನ್ಗಳಿಗೆ ಹೋಲಿಸಿದರೆ ಕಡಿಮೆ ಸಂಕೀರ್ಣ ತಂತ್ರಜ್ಞಾನವನ್ನು ಹೊಂದಿದೆ ಮತ್ತು ಅದು ಕಳೆದ ಕೆಲವು ವರ್ಷಗಳಲ್ಲಿ 200ಕ್ಕೂ ಅಧಿಕ ಬಾರಿ ಪರೀಕ್ಷೆಗೊಳಗಾಗಿತ್ತು.
"ಇಸ್ರೋದ ಈ ಮಹತ್ವದ ಸಾಧನೆ ಇಡೀ ದೇಶಕ್ಕೆ ಹೆಮ್ಮೆಯನ್ನು ತಂದಿದೆ."
ರಾಷ್ಟ್ರಪತಿ ಪ್ರಣವ್ ಮುಖರ್ಜಿ
"ಜಿಎಸ್ಎಲ್ವಿ-ಎಂಕೆ 3-ಡಿ1/ಜಿಸ್ಯಾಟ್-19 ಅಭಿಯಾನವು ಭಾರತವನ್ನು ಮುಂದಿನ ಪೀಳಿಗೆಯ ಉಡಾವಣಾ ವಾಹನ ಮತ್ತು ಉಪಗ್ರಹದ ಸನಿಹಕ್ಕೆ ಒಯ್ದಿದೆ. ಈ ಸಾಧನೆಗೆ ಇಡೀ ದೇಶವೇ ಹೆಮ್ಮೆ ಪಟ್ಟುಕೊಂಡಿದೆ."
ಪ್ರಧಾನಿ ನರೇಂದ್ರ ಮೋದಿ







