ಕಾರ್ಪೋರೇಶನ್ ಬ್ಯಾಂಕ್ ಕೋಟ್ಯಾಂತರ ರೂ. ವಂಚನೆ:ಆಂಧ್ರದ ಮೂವರು ಸೇರಿದಂತೆ ಐವರ ಸೆರೆ

ಶಿವಮೊಗ್ಗ, ಮೇ. 5: ಶಿವಮೊಗ್ಗ ನಗರದ ಬಿ.ಎಚ್. ರಸ್ತೆಯಲ್ಲಿರುವ ಕಾರ್ಪೋರೇಶನ್ ಬ್ಯಾಂಕ್ ಶಾಖೆಯಲ್ಲಿ ನಡೆದ ಕೋಟ್ಯಾಂತರ ರೂ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶ ಮೂಲದ ಮೂವರು, ಶಿವಮೊಗ್ಗದ ಈರ್ವರು ಸೇರಿದಂತೆ ಐವರನ್ನು ದೊಡ್ಡಪೇಟೆ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿ, ಬ್ಯಾಂಕ್ನಲ್ಲಿ ಕ್ಷೇತ್ರ ಕೃಷಿ ಅಧಿಕಾರಿಯಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದ ಮೂಲತಃ ಆಂಧ್ರಪ್ರದೇಶ ನೆಲ್ಲೂರು ಜಿಲ್ಲೆಯ ಮಧುಸೂಧನ್ (30), ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಕೋಟಯ್ಯ (35), ಅವರ ಪತ್ನಿ ಅರುಣ (27), ಶಿವಮೊಗ್ಗ ನಗರದ ಸೋಮಿನಕೊಪ್ಪದ ನಿವಾಸಿ ಶ್ರೀಧರ್ (32), ತಾಲೂಕಿನ ಹರಮಘಟ್ಟದ ನಿವಾಸಿ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷರೂ ಆದ ಹರೀಶ್ (29) ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ.
ಮಧುಸೂಧನ್ ನಗರದ ಗೋಪಾಳದ ಮನೆಯಲ್ಲಿ ವಾಸಿಸುತ್ತಿದ್ದು, ಇತ್ತೀಚೆಗೆ ಕೋಟಯ್ಯ ದಂಪತಿಯೊಂದಿಗೆ ಆ ಮನೆಯಲ್ಲಿ ತಂಗಿದ್ದ ವೇಳೆ ಸಬ್ ಇನ್ಸ್ಪೆಕ್ಟರ್ ಅಭಯ್ಪ್ರಕಾಶ್ ಸೋಮನಾಳ್ ನೇತೃತ್ವದ ಪೊಲೀಸ್ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದೆ. ವಿಚಾರಣೆಯ ವೇಳೆ ಮಧುಸೂಧನ್ ನೀಡಿದ ಮಾಹಿತಿಯ ಆಧಾರದ ಮೇಲೆ ಶ್ರೀಧರ್ ಹಾಗೂ ಹರೀಶ್ ನನ್ನು ನಗರದ ಖಾಸಗಿ ಬಸ್ ನಿಲ್ದಾಣ ಸಮೀಪ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಿಕೊಂಡ ಪೊಲೀಸರು ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ ಎಂದು ತಿಳಿದುಬಂದಿದೆ.
ಜಿಲ್ಲಾ ರಕ್ಷಣಾಧಿಕಾರಿ ಅಭಿನವ್ ಖರೆ, ಹೆಚ್ಚುವರಿ ರಕ್ಷಣಾಧಿಕಾರಿ ಮುತ್ತುರಾಜ್, ಡಿವೈಎಸ್ಪಿ ಮಂಜುನಾಥ ಶೆಟ್ಟಿ, ಇನ್ಸ್ಪೆಕ್ಟರ್ ಗುರುರಾಜ್ರವರ ಮಾರ್ಗದರ್ಶನದಲ್ಲಿ ಸಬ್ ಇನ್ಸ್ಪೆಕ್ಟರ್ ಅಭಯ್ ಪ್ರಕಾಶ್ ಸೋಮನಾಳ್ ಮತ್ತವರ ಸಿಬ್ಬಂದಿಗಳು ಈ ಎಲ್ಲ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಪಾತ್ರವೇನು?: ಆರೋಪಿ ಮಧುಸೂಧನ್ ರೈತರ ಹೆಸರಿನಲ್ಲಿ ಮಂಜೂರು ಮಾಡಿದ ಸಾಲವನ್ನು ಕೋಟಯ್ಯ, ಅವರ ಪತ್ನಿ ಅರುಣ, ಶ್ರೀಧರ್ ಹಾಗೂ ಹರೀಶ್ ನ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡುತ್ತಿದ್ದ ವಿಷಯ ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ. ಕೋಟ್ಯಾಂತರ ರೂ. ವರ್ಗಾವಣೆ ಮಾಡಿದ್ದ ಅಂಶ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಏನಿದು ಪ್ರಕರಣ?: ಆರೋಪಿ ಮಧುಸೂಧನನು ರೈತರ ಹೆಸರಿನಲ್ಲಿ ಮಂಜೂರಾಗುತ್ತಿದ್ದ ಬೆಳೆ ಸಾಲ ಹಾಗೂ ಇತರೆ ಕೃಷಿ ಸಂಬಂಧಿತ ಸಾಲಗಳನ್ನು ರೈತರ ಖಾತೆಗೆ ಜಮಾ ಮಾಡದೆ ತನಗೆ ಪರಿಚಯವಿದ್ದ ವ್ಯಕ್ತಿಗಳ ಖಾತೆಗೆ ಜಮಾ ಮಾಡುತ್ತಿದ್ದ. ತದನಂತರ ಅವರ ಖಾತೆಯಿಂದ ಹಣ ಬಿಡಿಸಿಕೊಳ್ಳುತ್ತಿದ್ದ. ಈ ವಿಷಯ ರೈತರಿಗೆ ಗೊತ್ತಾಗುತ್ತಿರಲಿಲ್ಲ. ಇತ್ತೀಚೆಗೆ ಕೆಲ ರೈತರು ತಮಗೆ ಸಾಲ ಮಂಜೂರಾತಿಯಲ್ಲಿ ವಿಳಂಬವಾಗುತ್ತಿರುವುದರ ಬಗ್ಗೆ ಅಸಮಾಧಾನಗೊಂಡು ಬ್ಯಾಂಕ್ ಮ್ಯಾನೇಜರ್ ಭೇಟಿಯಾಗಿ ಚರ್ಚೆ ನಡೆಸಿದ್ದರು. ಮತ್ತೆ ಕೆಲ ರೈತರು ಪಾಸ್ ಬುಕ್ಗಳನ್ನು ಎಂಟ್ರಿ ಮಾಡಿಸಿದ್ದರು.
ಈ ವೇಳೆ ಲಕ್ಷಾಂತರ ರೂ. ಸಾಲ ಮಂಜೂರಾಗಿರುವುದನ್ನು ಗಮನಿಸಿ ಹೌಹಾರಿದ್ದರು. ತಕ್ಷಣವೇ ಬ್ಯಾಂಕ್ನ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ರೈತ ಸಂಘಟನೆಯು ಬ್ಯಾಂಕ್ ಆವರಣದಲ್ಲಿ ಪ್ರತಿಭಟನೆ ಕೂಡ ನಡೆಸಿತ್ತು. ಪರಿಶೀಲನೆಯ ವೇಳೆ ರೈತರಿಗೆ ಕೋಟ್ಯಾಂತರ ರೂ. ವಂಚನೆ ಮಾಡಿದ್ದು ಬೆಳಕಿಗೆ ಬಂದಿತ್ತು. ಈ ಸಂಬಂಧ ಬ್ಯಾಂಕ್ನವರು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಮಧುಸೂಧನ್ ವಿರುದ್ದ ದೂರು ದಾಖಲಿಸಿದ್ದರು. ಎಫ್ಐಆರ್ ದಾಖಲಿಸಿಕೊಂಡಿದ್ದ ಸಬ್ ಇನ್ಸ್ಪೆಕ್ಟರ್ ಅಭಯ್ಪ್ರಕಾಶ್ ಸೋಮನಾಳ್ರವರು ಮುಖ್ಯ ಆರೋಪಿ ಸೇರಿದಂತೆ ಹಲವರನ್ನು ಬಂಧಿಸಿ ಜೈಲಿಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. 6 ಕೋಟಿ ರೂ.ಗೂ ಅಧಿಕ ವಂಚನೆ...!!







