ಕಾಡಾನೆ ಹಾವಳಿ ತಡೆಯಲು ಸೂಕ್ತ ಕ್ರಮ: ರಮಾನಾಥ ರೈ
ಬೆಂಗಳೂರು, ಜೂ. 5: ಕಾಡಾನೆ ಹಾವಳಿ ತಪ್ಪಿಸಲು ಆನೆ ನಿರೋಧಕ ಕಂದಕ ನಿರ್ಮಾಣ ಹಾಗೂ ರೈಲು ಕಂಬಿ ತಡೆಬೇಲಿ ನಿರ್ಮಾಣ ಕಾಮಗಾರಿಯನ್ನು ಕೈಗೊಳ್ಳಲಾಗಿದ್ದು, ಸದರಿ ಕಾಮಗಾರಿಗಳಿಗೆ 2016-17ನೆ ಸಾಲಿನಲ್ಲಿ 2.90 ಕೋಟಿ ರೂ.ಬಿಡುಗಡೆ ಮಾಡಲಾಗಿತ್ತು ಎಂದು ಅರಣ್ಯ ಸಚಿವ ಬಿ.ರಮಾನಾಥ ರೈ ತಿಳಿಸಿದ್ಧಾರೆ.
ಸೋಮವಾರ ವಿಧಾನ ಸಭೆಯಲ್ಲಿ ಕೊಡಗು ಜಿಲ್ಲೆಯಲ್ಲಿ ಕಾಡಾನೆ ಹಾವಳಿ ತಡೆಯುವ ಸಂಬಂಧ ಸರಕಾರ ಕೈಗೊಂಡ ಕ್ರಮಗಳ ಬಗ್ಗೆ ಬಿಜೆಪಿ ಹಿರಿಯ ಸದಸ್ಯ ಕೆ.ಜಿ.ಬೋಪಯ್ಯ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೊಡಗು ಜಿಲ್ಲೆಯಲ್ಲಿ ಮೂರು ವರ್ಷಗಳಲ್ಲಿ ಒಟ್ಟು 68.59 ಕಿ.ಮೀ ಆನೆ ನಿರೋಧಕ ಕಂದಕಗಳನ್ನು ನಿರ್ಮಾಣ ಮಾಡಲಾಗಿದೆ. 2016-17ನೆ ಸಾಲಿನಲ್ಲಿ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಎರಡೂವರೆ ಕಿ.ಮೀ ರೈಲ್ವೇ ತಡೆ ಬೇಲಿ ನಿರ್ಮಾಣ ಕಾಮಗಾರಿ ನಡೆದಿದ್ದು, ಇನ್ನೂ 600 ಮೀ.ಕಾಮಗಾರಿ ಪ್ರಗತಿಯಲ್ಲಿದೆ. ಈ ಕಾಮಗಾರಿಗಳಿಗೆ ನಿಯಮಾನುಸಾರ ಟೆಂಡರ್ ಕರೆದಿದ್ದು, ವಿಫಲವಾದ ಟೆಂಡರ್ ಪ್ರಕರಣಗಳಲ್ಲಿ ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆಯಲು ಇಲಾಖಾ ಮುಖಾಂತರ ಕಾಮಗಾರಿ ಕೈಗೊಳ್ಳಲಾಗುವುದು ಎಂದರು.