ದೇಶದ ಮೂಲನಿವಾಸಿಗಳ ಪರಿಸ್ಥಿತಿ ಶೋಚನೀಯವಾಗಿದೆ: ತಲ್ಹಾ ಇಸ್ಮಾಯೀಲ್
ಇಫ್ತಾರ್ ಕೂಟ, ಕೌನ್ಸೆಲಿಂಗ್ ಕಾರ್ಯಕ್ರಮ

ಮಂಗಳೂರು, ಜೂ. 8: ಇಂದಿನ ಸಮಾಜದಲ್ಲಿ ಪ್ರಮುಖ ವ್ರತ್ತಿಗಳು, ನಾಗರಿಕ ಸೇವೆಗಳು ದೇಶದ ಒಂದು ಚಿಕ್ಕ ಸಮುದಾಯದ ಹಿಡಿತದಲ್ಲಿದೆ. ಭಾರತ ದೇಶದ ಮೂಲ ನಿವಾಸಿಗಳಾದ ದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರ ಸಾಮಾಜಿಕ ಮತ್ತು ಆರ್ಥಿಕ, ರಾಜಕೀಯ ಸ್ಥಾನಮಾನ ತೀರಾ ಶೋಚನೀಯ ಮತ್ತು ನಿರ್ಲಕ್ಷ್ಯಕ್ಕೆ ಒಳಗಾಗಿದೆ, ಹೀಗಿರುವಾಗ ಸಮುದಾಯಗಳ ಸಬಲೀಕರಣವನ್ನು ಮುಂದಿಟ್ಟುಕೊಂಡು ಎಸ್ ಐ ಒ 'ಹಲವು ಧರ್ಮಗಳು ಒಂದು ಭಾರತ' ಅಭಿಯಾನವು ಅರ್ಥ ಪೂರ್ಣವಾಗಿದೆ ಎಂದು ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಆಫ್ ಇಂಡಿಯಾ (ಎಸ್ ಐ ಒ) ದ.ಕ. ಜಿಲ್ಲಾಧ್ಯಕ್ಷ ತಲ್ಹಾ ಇಸ್ಮಾಯೀಲ್ ಅಭಿಪ್ರಾಯಿಸಿದರು.
'ಹಲವು ಧರ್ಮಗಳು ಒಂದು ಭಾರತ' ಎಂಬ ವಾರ್ಷಿಕ ಅಭಿಯಾನದ ಅಂಗವಾಗಿ ನಗರದ ಜೆಪ್ಪುವಿನಲ್ಲಿರುವ ಅಂಬೇಡ್ಕರ್ ಭವನದಲ್ಲಿ ಎಸ್ ಐ ಒ ಮಂಗಳೂರು ಹಾಗೂ ಅಂಬೇಡ್ಕರ್ ಫ್ರೆಂಡ್ಸ್ ಕ್ಲಬ್ ಜಂಟಿಯಾಗಿ ಆಯೋಜಿಸಿದ್ದ ಇಫ್ತಾರ್ ಕೂಟ ಹಾಗೂ ಕೌನ್ಸೆಲಿಂಗ್ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಇದೇ ವೇಳೆ ಕೌನ್ಸೆಲಿಂಗ್ ಕಾರ್ಯಕ್ರಮ ಮಾಡಿದ ಡಾ.ಮಿಸ್ ಅಬ್ ಮಾತನಾಡಿ, ದಲಿತ ಸಮುದಾಯದ ಸಭಲೀಕರಣ ಬಗ್ಗೆ ಚರ್ಚೆಯಾಗುವಾಗ ಅವರ ಭವಿಷ್ಯದ ಬಗ್ಗೆ ಉತ್ತಮ ಯೋಜನೆಗಳನ್ನು ಇಟ್ಟುಕೊಂಡು ಸರ್ಮಪಕವಾದ ನೆಲೆಯಲ್ಲಿ ಕೆಲಸ ಮಾಡಿದರೆ ಅಭಿವೃದ್ಧಿ ಮಾಡಬಹುದು ಎಂದು ಹೇಳಿದರು.
ಇನ್ನೊರ್ವ ಮುಖ್ಯ ಅತಿಥಿ ಹಿರಿಯ ನಾಯಕರಾದ ರಾಮದಾಸ ಅವರು ಸಮುದಾಯದ ಸಭಲೀಕರಣ ಕಾರ್ಯಕ್ರಮಗಳನ್ನು ನಿರಂತರ ಮಾಡುತ್ತಾ ಬಂದಿರುವ ಅಂಬೇಡ್ಕರ್ ಫ್ರೆಂಡ್ಸ್ ಕ್ಲಬ್ ಸಂಘಟನೆಯ ಕೆಲಸಗಳು ಅತ್ಯಂತ ಶ್ಲಾಘನೀಯ ಎಂದರು.
ಈ ಸಂದರ್ಭ ಎಸೆಸೆಲ್ಸಿ ಹಾಗೂ ಪಿಯುಸಿಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶೀ ವಸಂತ ಕುಮಾರ ವಹಿಸಿದ್ದರು. ಮುಬೀನಾ ಬೆಂಗ್ರೆ ಸ್ವಾಗತಿಸಿ, ವಂದಿಸಿದರು. ಎ ಎಫ್ ಸಿ ಅಧ್ಯಕ್ಷೆ ಶ್ವೇತಾ ಕಾರ್ಯ ಕ್ರಮ ನಿರೂಪಿಸಿದರು. ವೇದಿಕೆಯಲ್ಲಿ ಸಂಶೋಧನಾ ವಿದ್ಯಾರ್ಥಿ ವರುಣ, ಎಸ್ ಐ ಒ ಜಿಲ್ಲಾ ಕಾರ್ಯದರ್ಶಿ ನಿಝಾಮ್ ಉಪಸ್ಥಿತರಿದ್ದರು.







