ಸರಕಾರದಿಂದ ಬೆಳೆ ನಷ್ಟಕ್ಕೆ 1 ರೂಪಾಯಿ ಪರಿಹಾರ
.jpg)
ತುಮಕೂರು.ಜೂ.9: ಸತತ ಬರದಿಂದ ತತ್ತರಿಸಿರುವ ರೈತರ ಪರಿಸ್ಥಿತಿ ಸುಧಾರಣೆಯ ದೃಷ್ಟಿಯಿಂದ ಕೇಂದ್ರ ಸರಕಾರ ರಾಜ್ಯ ಸರಕಾರದ ಮೂಲಕ ಇನ್ಪುಟ್ ಸಬ್ಸಿಡಿ ನೀಡುತ್ತಾ ಬಂದಿದೆ.ಕೇಂದ್ರ ಸರಕಾರದ ಪ್ರಕೃತಿ ವಿಕೋಪ ಪರಿಹಾರ ನಿಧಿ ನಿಯಮಗಳ ಅಡಿಯಲ್ಲಿ ಜೂನ್ 6 ರಂದು ಜಿಲ್ಲೆಯ ರೈತರೊಬ್ಬರಿಗೆ 1 ರೂ. ಪರಿಹಾರ ಧನ ಆರ್.ಟಿ.ಜಿ.ಎಸ್. ಮೂಲಕ ರೈತರ ಖಾತೆಗೆ ಜಮಾ ಆಗಿದ್ದು, ಆಚ್ಚರಿ ಜೊತೆಗೆ, ನೆಗೆಪಾಟಲಿಗೀಡಾಗಿದೆ.
ತುಮಕೂರು ತಾಲೂಕು ಹೆಬ್ಬೂರು ಹೋಬಳಿ ಸಿರಿವರ ಗ್ರಾಮದ ಶಿವರಾಮಯ್ಯ ಎಂಬ ನಿವೃತ್ತ ಸರಕಾರಿ ನೌಕರರಿಗೆ 1.30 ಗುಂಟೆ ಜಮೀನು,ಸಿರಿವರ ಸರ್ವೆ ನಂ 111/3 ಎ ನಲ್ಲಿ 22 ಗುಂಟೆ, 111/4 ರಲ್ಲಿ 31ಗುಂಟೆ ಹಾಗೂ 138/1ಎ1 6 ಗುಂಟೆ ಭೂಮಿ ಇದ್ದು, ಇಷ್ಟು ಭೂಮಿಗೆ ರಾಗಿಯನ್ನು ಬಿತ್ತನೆ ಮಾಡಿದ್ದು,ಮಳೆಯಿಲ್ಲದ ಕಾರಣ ಸಂಪೂರ್ಣ ಬೆಳೆ ಹಾಳಾಗಿತ್ತು.ಬೆಳೆ ನಷ್ಟ ಅಂದಾಜಿಗೆ ಬಂದ ಜಿಲ್ಲೆಯ ಕಂದಾಯ ಇಲಾಖೆಯ ಅಧಿಕಾರಿಗಳು ಕಂಪ್ಯೂಟರ್ ಅಫ್ ನಲ್ಲಿ ಬೆಳೆ ನಷ್ಟ ನಮೂದಿಸಿ ಸರಕಾರಕ್ಕೆ ಕಳುಹಿಸಿದ್ದರು.
ಕೇಂದ್ರ ಸರಕಾರ ಎನ್.ಡಿ.ಆರ್.ಎಫ್ ನಿಯಮದ ಪ್ರಕಾರ ಒಂದು ಎಕರೆಗೆ ತಲಾ 6000 ರೂ ಪರಿಹಾರ ನೀಡಬೇಕು. ಆದರೆ ಒಂದು ಎಕರೆ 30 ಗುಂಟೆಯಲ್ಲಿ ಬೆಳೆದಿದ್ದ ರಾಗಿ ಬೆಳೆ ಸಂಪೂರ್ಣ ಒಣಗಿದ್ದರೂ ಸದರಿ ರೈತರ ಖಾತೆಗೆ ಕಂದಾಯ ಇಲಾಖೆಯಿಂದ ಬಂದಿರುವುದು ಕೇವಲ 1 ರೂ ಮಾತ್ರ. ಜೂನ್ 6ರ ಶಿವರಾಮಯ್ಯ ಅವರ ಇಂಡಿಯನ್ ಬ್ಯಾಂಕ್ ಖಾತೆ ನಂ 916122044ಗೆ ಸರಕಾರದ ಕಂದಾಯ ಇಲಾಖೆಯ 96102011640 ನಂಬರ್ನಿಂದ ಆರ್.ಟಿ.ಜಿ.ಎಸ್. ಮೂಲಕ ಹಣ ಸಂದಾಯವಾಗಿದೆ.
ಈ ಬಗ್ಗೆ ಸಂಬಂಧಪಟ್ಟ ಸಿರಿವರ ವೃತ್ತದ ಗ್ರಾಮ ಲೆಕ್ಕಿಗರನ್ನು ಈ ಬಗ್ಗೆ ವಿಚಾರಿಸಿದರೆ ಹಣ ಹಂಚುವಾಗ ಏನೋ ತಾಂತ್ರಿಕ ಕಾರಣಗಳಿಂದ ಹೀಗಾಗಿದೆ.ಸರಿಪಡಿಸಿ ಸರಿಯಾದ ಪರಿಹಾರವನ್ನು ಕಳುಹಿಸುತ್ತಾರೆ ಎಂದು ಸಬೂಬು ಹೇಳುತ್ತಿದ್ದಾರೆ. ಸರಕಾರದ ಕಂದಾಯ ಇಲಾಖೆಯಲ್ಲಿ ಒಂದು ರೂ. ಪರಿಹಾರ ಬಂದಿರುವುದು ಶಿವರಾಮಯ್ಯ ಅವರಿಗೆ ಮಾತ್ರವಲ್ಲ. ಇದೇ ವೃತ್ತದ ಹಲವರಿಗೆ ಒಂದು ರೂ, ಎರಡು ರೂ, ಎಂಟು ರೂ ಹೀಗೆ ತರಾವರಿ ಪರಿಹಾರದ ಹಣ ಬಂದಿದೆ.
ಈ ಹಿಂದಿನ ವರ್ಷ ಇನ್ಪುಟ್ ಸಬ್ಸಿಡಿಯನ್ನು ಜಿಲ್ಲಾ ಮಟ್ಟದಲ್ಲಿ ರೈತರ ಖಾತೆಗೆ ಆರ್.ಟಿ.ಜಿ.ಎಸ್.ಮೂಲಕ ಹಾಕಲಾಗಿತ್ತು.ಆದರೆ ಈ ಬಾರಿ ಬೆಂಗಳೂರಿನಿಂದ ಹಣ ಸಂದಾಯ ಮಾಡುತ್ತಿದ್ದು,ಹಲವು ಅವಾಂತರಗಳಿಗೆ ಕಾರಣವಾಗಿದೆ.ಸ್ಥಳೀಯ ಅಧಿಕಾರಿಗಳು ನಮಗೂ ಇದಕ್ಕೂ ಸಂಬಂಧವೇ ಇಲ್ಲವೆಂಬಂತೆ ವರ್ತಿಸುತ್ತಿದ್ದು, ರೈತರ ಮಾತ್ರ ಪರಿಹಾರ ಹಣಕ್ಕಾಗಿ ಜಾತಕ ಪಕ್ಷಿಗಳಂತೆ ಕಾಯುವುದು ತಪ್ಪಿಲ್ಲ.







