ಫ್ರೆಂಚ್ ಓಪನ್ ಚಾಂಪಿಯನ್ ಬೋಪಣ್ಣ ಅರ್ಜುನ ಪ್ರಶಸ್ತಿಗೆ ಶಿಫಾರಸು

ಹೊಸದಿಲ್ಲಿ, ಜೂ.9: ಕನ್ನಡಿಗ ರೋಹನ್ ಬೋಪಣ್ಣ ಅವರನ್ನು ಈ ವರ್ಷದ ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಲು ಅಖಿಲ ಭಾರತ ಟೆನಿಸ್ ಸಂಸ್ಥೆ(ಎಐಟಿಎ) ನಿರ್ಧರಿಸಿದೆ.
ಪ್ಯಾರಿಸ್ನಲ್ಲಿ ಈಗ ನಡೆಯುತ್ತಿರುವ ವರ್ಷದ ಎರಡನೆ ಗ್ರಾನ್ಸ್ಲಾಮ್ ಟೂರ್ನಮೆಂಟ್ ಫ್ರೆಂಚ್ ಓಪನ್ನಲ್ಲಿ ಗುರುವಾರ ಕೆನಡಾದ ಗ್ಯಾಬ್ರಿಯೆಲಾ ಡಾಬ್ರೊಸ್ಕಿ ಜೊತೆಗೂಡಿ ಮಿಶ್ರ ಡಬಲ್ಸ್ ಪ್ರಶಸ್ತಿ ಜಯಿಸಿದ್ದ ಬೋಪಣ್ಣ ಚೊಚ್ಚಲ ಗ್ರಾನ್ಸ್ಲಾಮ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದರು.
‘‘ ನಾವು ಇಂದು ರೋಹನ್ ಹೆಸರನ್ನು ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಲು ನಿರ್ಧರಿಸಿದ್ದೇವೆ. ಈ ಹಿಂದೆಯೂ ಅವರ ಹೆಸರನ್ನು ಹಲವು ಬಾರಿ ಶಿಫಾರಸು ಮಾಡಿದ್ದೆವು. ಆದರೆ, ಈ ಹಿಂದಿನ ಸಮಿತಿಯು ಅವರಿಗೆ ಪ್ರಶಸ್ತಿಯನ್ನು ನೀಡಲಿಲ್ಲ. ಈಗ ಅವರು ಆ ಪ್ರಶಸ್ತಿಗೆ ಅರ್ಹರಿದ್ದಾರೆ. ಈ ಬಾರಿ ಅವರಿಗೆ ಅರ್ಜುನ ಪ್ರಶಸ್ತಿಯನ್ನು ನೀಡಲೇಬೇಕು’’ ಎಂದು ಎಐಟಿಎ ಪ್ರಧಾನ ಕಾರ್ಯದರ್ಶಿ ಹಿರೋನ್ಮಯ್ ಚಟರ್ಜಿ ತಿಳಿಸಿದ್ದಾರೆ.
‘‘ಅರ್ಜುನ ಪ್ರಶಸ್ತಿಗೆ ಅರ್ಜಿ ಸಲ್ಲಿಸುವ ಅಂತಿಮ ದಿನಾಂಕ ಈಗಾಗಲೆ ಕೊನೆಗೊಂಡಿದೆ ಎಂದು ನಮಗೆ ಗೊತ್ತಿದೆ. ನಾವು ಈಗಲೂ ಪ್ರಶಸ್ತಿಗಾಗಿ ಪ್ರಯತ್ನಿಸಲಿದ್ದೇವೆ. ರಶ್ಮಿ ಚಕ್ರವರ್ತಿಯ ಹೆಸರನ್ನೂಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಿದ್ದೇವೆ’’ ಎಂದು ಚಟರ್ಜಿ ಹೇಳಿದ್ದಾರೆ.
ಬೋಪಣ್ಣ ಅವರು ಗ್ರಾನ್ಸ್ಲಾಮ್ ಪ್ರಶಸ್ತಿ ಜಯಿಸಿದ ಭಾರತದ ನಾಲ್ಕನೆ ಟೆನಿಸ್ ಪಟು ಎನಿಸಿಕೊಂಡಿದ್ದಾರೆ. ಲಿಯಾಂಡರ್ ಪೇಸ್, ಮಹೇಶ್ ಭೂಪತಿ ಹಾಗೂ ಸಾನಿಯಾ ಮಿರ್ಝಾ ಈ ಸಾಧನೆ ಮಾಡಿದ್ದರು.
‘‘ಬೋಪಣ್ಣ ಪ್ಯಾರಿಸ್ನಲ್ಲಿ ಅರ್ಹ ಗೆಲುವು ದಾಖಲಿಸಿದ್ದಾರೆ. ಭವಿಷ್ಯದಲ್ಲಿ ಅವರಿಗೆ ಇನ್ನಷ್ಟು ಯಶಸ್ಸು ಸಿಗಲಿ ಎಂದು ಹಾರೈಸುತ್ತೇವೆ. ಬೋಪಣ್ಣ ಅವರ ಗೆಲುವು ದೇಶದ ಯುವ ಹಾಗೂ ಸುಪ್ತ ಟೆನಿಸ್ ಪ್ರತಿಭೆಗಳಿಗೆ ನೈತಿಕ ಸ್ಥೈರ್ಯ ತುಂಬಿದೆ. ಫ್ರೆಂಚ್ ಓಪನ್ ಪ್ರಶಸ್ತಿಯು ಬೋಪಣ್ಣಗೆ ಅರ್ಜುನ ಪ್ರಶಸ್ತಿ ಗೆಲುವಿಗೆ ಪೂರಕವಾಗಲಿದೆಯೆಂಬ ಖಚಿತ ವಿಶ್ವಾಸ ನಮಗಿದೆ’’ಎಂದು ಚಟರ್ಜಿ ಅಭಿಪ್ರಾಯಪಟ್ಟರು







