ಜೂ.12: ಮೊವಾಡಿ ಸ್ವಾಭಿಮಾನಿ ಸಮಾವೇಶ
ಕುಂದಾಪುರ, ಜೂ.10: ಮೊವಾಡಿ ಗೋಹತ್ಯೆ ಪ್ರಕರಣವನ್ನು ತಿರುಚಿ ಹಲ್ಲೆ ಪ್ರಕರಣದಲ್ಲಿ ಅಮಾಯಕ ವಿದ್ಯಾರ್ಥಿಗಳ ವಿರುದ್ಧ ದೂರು ನೀಡಿದ ಕ್ರಮದ ವಿರುದ್ದ ಮೊವಾಡಿ ಸ್ವಾಭಿಮಾನಿ ಸಮಾವೇಶವನ್ನು ಜೂ.12ರಂದು ಬೆಳಗ್ಗೆ 10ಗಂಟೆಗೆ ಮೊವಾಡಿಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ವಾಸುದೇವ ಮುದೂರು ತಿಳಿಸಿದ್ದಾರೆ.
ಕುಂದಾಪುರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾವೇಶವನ್ನು ಜಯನ್ ಮಲ್ಪೆ ಉದ್ಘಾಟಿಸಲಿರುವರು. ಮೊವಾಡಿಯಲ್ಲಿ ನಡೆದ ಕೊರಗರ ಮೇಲಿನ ದೌರ್ಜನ್ಯ ಪ್ರಕರಣ ಮುಗಿದ ಅಧ್ಯಾಯವಾಗಿದೆ. ಮೊವಾಡಿ ಚಲೋ ಕಾರ್ಯಕ್ರಮದಿಂದಾಗಿ ದಲಿತರ ಕೇರಿಗಳಿಗೆ ಪ್ರತಿದಿನ ಪೊಲೀಸರು ಬರುತ್ತಿದ್ದು, ಇದರಿಂದ ಮುಗ್ಧ ದಲಿತ ಕುಟುಂಬಗಳು ಭಯ ಭೀತವಾಗಿವೆ ಎಂದರು.
ಮೊವಾಡಿ ದಲಿತರ ಮೇಲಿನ ಹಲ್ಲೆ ಪ್ರಕರಣ ಖಂಡನೀಯ. ಆದರೆ ಅಮಾಯಕ ಮೂವರು ದಲಿತ ವಿದ್ಯಾರ್ಥಿಗಳ ಮೇಲೆ ಕೇಸು ದಾಖಲಿಸಿ ಬಲಿ ಪಶುಗಳನ್ನಾಗಿ ಮಾಡಲಾಗಿದೆ. ಆದುದರಿಂದ ಯಾವುದೇ ತಪ್ಪು ಮಾಡದ ಅಮಾಯಕ ದಲಿತ ವಿದ್ಯಾರ್ಥಿಗಳ ಮೇಲಿನ ಸುಳ್ಳು ಕೇಸುಗಳನ್ನು ಹಿಂದೆಗೆಯ ಬೇಕು ಎಂದು ಆಗ್ರಹಿಸಿ ಈ ಸಮಾವೇಶ ನಡೆಸಲಾಗುತ್ತಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ದಲಿತ ಮುಖಂಡರಾದ ಮಂಜುನಾಥ ಗಿಳಿಯಾರು, ರಾಜು ಕೆ.ಸಿ ಬೆಟ್ಟಿನಮನೆ, ಪ್ರಭಾಕರ, ಗೋಪಾಲ ಕಳಿಂಜೆ, ಗೋಪಾಲಕೃಷ್ಣ ನಾಡ ಉಪಸ್ಥಿತರಿದ್ದರು.