ಮಂಜೇಶ್ವರ: ನೀರಿನ ಕೊಳಕ್ಕೆ ಬಿದ್ದು ಮೂವರು ಬಾಲಕರು ಮೃತ್ಯು

ಮಂಜೇಶ್ವರ, ಜೂ.10: ಇಲ್ಲಿನ ಬಿ.ಎಸ್. ನಗರದ ಕೊಳಕಂಡ ಎಂಬಲ್ಲಿ ಗದ್ದೆ ಸಮೀಪದ ನೀರಿನ ಕೊಳಕ್ಕೆ ಬಿದ್ದು ಮೂವರು ಬಾಲಕರು ಮೃತಪಟ್ಟ ಬಗ್ಗೆ ವರದಿಯಾಗಿದೆ.
ಮೃತ ಬಾಲಕರನ್ನು ಪಿ.ಟಿ. ಮುಹಮ್ಮದ್ ಎಂಬವರ ಪುತ್ರ ಮುಹಮ್ಮದ್ ಶರೀಫ್ (7), ಮುಹಮ್ಮದ್ ಎಂಬವರ ಪುತ್ರ ಅಸ್ಲಂ (8) , ಅಹ್ಮದ್ ಹಸ್ಸನ್ ಕುಂಙಿ ಎಂಬವರ ಪುತ್ರ ಆಬ್ದುಲ್ ಅಫ್ರೀದ್ (12) ಎಂದು ಗುರುತಿಸಲಾಗಿದೆ.
ಘಟನೆ ವಿವರ: ಮೃತ ಬಾಲಕರು ಮಧ್ಯಾಹ್ನ 12 ಘಂಟೆ ಸುಮಾರಿಗೆ ಮನೆಯಿಂದ ತೆರಳಿದ್ದರು. ಸಂಜೆ ಉಪವಾಸ ಬಿಡುವ ಸಮಯವಾದರೂ ಮನೆಗೆ ತಲುಪದ ಹಿನ್ನೆಲೆಯಲ್ಲಿ ಹುಡುಕಾಟ ನಡೆಸಿದಾಗ ಮೂವರು ಇಲ್ಲಿನ ಕೊಳಕಂಡ ಎಂಬಲ್ಲಿ ನೀರಿನಲ್ಲಿ ಮುಳುಗಿರುವ ಬಗ್ಗೆ ತಿಳಿದುಬಂದಿದೆ.
ಘಟನೆ ತಿಳಿದು ತಲುಪಿದ ಸ್ಥಳೀಯರು ಹಾಗೂ ಮಂಜೇಶ್ವರ ಪೋಲೀಸರು ಕೆಳ ಹೊತ್ತು ಹುಡುಕಾಟದ ಬಳಿಕ ಮೃತದೇಹ ವನ್ನು ನೀರಿನಿಂದ ಮೇಲಕ್ಕೆತ್ತಲಾಯಿತು.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಂಗಲ್ಪಾಡಿ ಶವಾಗಾರದಲ್ಲಿಡಲಾಗಿದೆ.
ಮೂವರು ಬಾಲಕರ ಅಕಾಲಿಕ ಮೃತ್ಯು ಇಡೀ ಮಂಜೇಶ್ವರವನ್ನೇ ಶೋಕ ಸಾಗರದಲ್ಲಿ ಮುಳುಗಿಸಿದೆ. ಈ ಬಗ್ಗೆ ಮಂಜೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





