ರಿಯಾದ್ ಕೆಸಿಎಫ್ ವತಿಯಿಂದ ಇಫ್ತಾರ್ ಕೂಟ

ರಿಯಾದ್, ಜೂ. 10: ಗೋ ಹತ್ಯೆ ನಿಷೇಧ, ತ್ರಿವಳಿ ತಲಾಕ್ ರದ್ದತಿ, ದಲಿತರ ವಿರುದ್ಧದ ಹಲ್ಲೆಗಳು, ಇತ್ಯಾದಿಗಳ ಮೂಲಕ ದೇಶದ ಜನರಲ್ಲಿ ಭಯದ ವಾತಾವರಣ ಮೂಡಿಸಿ ಆ ಮೂಲಕ ದೇಶದಲ್ಲಿ ಮನು ಸಂಸ್ಕೃತಿಯನ್ನು ಹೇರಲು ಬಿಜೆಪಿ ಸರ್ಕಾರ ವ್ಯವಸ್ಥಿತವಾಗಿ ಸಂಚನ್ನು ರೂಪಿಸುತ್ತಿದೆ ಹಾಗೂ ಇಫ್ತಾರ್ ಅಥವಾ ಇನ್ನಿತರ ಸಮಯದಲ್ಲಿ ಮಾಂಸಾಹಾರ ಆರೋಗ್ಯಕ್ಕೆ ಆಪತ್ತು ಎಂಬ RSS ನಾಯಕ ಇಂದ್ರೇಶ್ ಕುಮಾರ್ ನ ಹೇಳಿಕೆ ಬಾಲಿಷ ಹಾಗೂ ಅವಿವೇಕಿತನವಾಗಿದೆ, ನಾವೇನು ತಿನ್ನಬೇಕೆಂದು ತೀರ್ಮಾನಿಸಲು ನಾವು ಸ್ವತಂತ್ರರಾಗಿದ್ದೇವೆ ಎಂದು ಕರ್ನಾಟಕ ಸರಕಾರದ ವಕ್ಫ್ ಮಂಡಳಿ ಸದಸ್ಯ ಹಾಗೂ ಮಾಜಿ ಎಸ್ಎಸ್ಎಫ್ ರಾಜ್ಯಾದ್ಯಕ್ಷ ಶಾಫಿ ಸಅದಿ ಹೇಳಿದರು.
ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆ.ಸಿ.ಎಫ್) ರಿಯಾದ್ ಝೋನಲ್ ವತಿಯಿಂದ ಇಲ್ಲಿನ ನೋಫಾ ಇಸ್ತಿರಾಹ ದಲ್ಲಿ ನಡೆದ ಇಫ್ತಾರ್ ಕೂಟದಲ್ಲಿ ಮುಖ್ಯ ಅಥಿತಿಯಾಗಿ ಅವರು ಮಾತನಾಡುತ್ತಿದ್ದರು.
ನಮ್ಮ ದೇಶವು ಬಹು ಸಂಸ್ಕೃತಿಯನ್ನು ಪ್ರತಿಪಾದಿಸುವ, ವಿವಿಧ ಜಾತಿ, ಮತ, ಪಂತಗಳನ್ನೊಳಗೊಂಡ ಒಂದು ಸುಂದರ ದೇಶವಾಗಿದ್ದು ಇಡೀ ಜಗತ್ತಿಗೇ ಮಾದರಿಯಾಗಿದೆ. ಈ ಸಂಸ್ಕೃತಿಯನ್ನು ಅಳಿಸುವ ಮೂಲಕ ದೇಶದಲ್ಲಿ ಏಕರೂಪದ ಕಾನೂನನ್ನು ಜಾರಿಗೆ ತರುವುದೇ ಬಿಜೆಪಿಯ ಉದ್ದೇಶ. ಈ ಷಡ್ಯಂತರವನ್ನು ತಡೆಗಟ್ಟಲು ದೇಶದ ಜಾತ್ಯತೀತ ಶಕ್ತಿಗಳು ಒಗ್ಗಟ್ಟಾಗಬೇಕಾದ ಅಗತ್ಯವಿದೆ ಎಂದು ಅವರು ಹೇಳಿದರು.
ಕೆ.ಸಿ.ಎಫ್ ರಿಯಾದ್ ಝೋನಲ್ ಅಧ್ಯಕ್ಷ ಹನೀಫ್ ಬೆಳ್ಳಾರೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಕೆ.ಸಿ.ಎಫ್ ಸೌದಿ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಯೂಸುಫ್ ಸಖಾಫಿ ಬೈತಾರ್ ಸಭೆಯನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ 25 ವರ್ಷಗಳ ಅನಿವಾಸಿ ಜೀವನಕ್ಕೆ ವಿದಾಯ ಹೇಳಿ ತಾಯ್ನಾಡಿಗೆ ತೆರಳತ್ತಿರುವ ಪ್ರಮುಖ ಸಂಘಟಕ, ಸಮಾಜ ಸೇವಕ, ಕೆ.ಸಿ.ಎಫ್. ರಿಯಾದ್ ಝೋನಲ್ ಮಾಜಿ ಕಾರ್ಯದರ್ಶಿ ಫಾರೂಕ್ ಅಬ್ಬಾಸ್ ಉಳ್ಳಾಲ್ ರನ್ನು ಸನ್ಮಾನಿಸಿ, ಗೌರವಿಸಲಾಯಿತು.
ಜೊತೆಗೆ ಕಾರ್ಯಕ್ರಮದ ಮುಖ್ಯ ಅಥಿತಿ ಮೌಲಾನಾ ಶಾಫಿ ಸಅದಿ ಹಾಗೂ ಕೆ.ಸಿ.ಎಫ್ ಗ್ರಾಂಡ್ ಇಫ್ತಾರ್ ಕಾರ್ಯಕ್ರಮದ ಸ್ವಾಗತ ಸಮಿತಿ ಅಧ್ಯಕ್ಷ ಹಂಝ ಮೈಂದಾಳ ಇವರನ್ನೂ ಸನ್ಮಾನಿಸಲಾಯಿತು.
ಕೆ.ಸಿ.ಎಫ್. ಸೌದಿ ರಾಷ್ಟ್ರೀಯ ಸಮಿತಿ ಉಪಾಧ್ಯಕ್ಷ ನಝೀರ್ ಕಾಶಿಪಟ್ಣ, ಕೆ.ಸಿ.ಎಫ್ ರಿಯಾದ್ ಝೋನಲ್ ಕೋಶಾಧಿಕಾರಿ ಹಾಗೂ "ಅಲ್ ಖಾದಿಸ" ಕಾವಳಕಟ್ಟೆ ರಿಯಾದ್ ಸಮಿತಿ ಅಧ್ಯಕ್ಷ ಇಸ್ಮಾಯಿಲ್ ಕಣ್ಣಂಗಾರ್, "ಮಲ್ಜಅ್ "ಉಜಿರೆ ರಿಯಾದ್ ಸಮಿತಿ ಅಧ್ಯಕ್ಷ , ಉದ್ಯಮಿ ಇಸ್ಮಾಯಿಲ್ ಸಫಾರಿ, ಉದ್ಯಮಿ ಲತೀಫ್ ಯೂನಿವರ್ಸಲ್, ಅಬ್ದುಲ್ ವಾಹಿದ್ ಮಂಗಳೂರು, ದಾರುಲ್ ಇರ್ಶಾದ್ ಮಾಣಿ ಇದರ ರಿಯಾದ್ ಸಮಿತಿ ಅಧ್ಯಕ್ಷ ಹಾಗೂ ಕೆ.ಸಿ.ಎಫ್ ರಿಯಾದ್ ಝೋನಲ್ ಸಾಂತ್ವನ ವಿಭಾಗದ ಕಾರ್ಯದರ್ಶಿ ಇಸ್ಮಾಯಿಲ್ ಜೋಗಿಬೆಟ್ಟು , ಡಿಕೆಎಸ್ಸಿ ರಿಯಾದ್ ಝೋನಲ್ ಅಧ್ಯಕ್ಷ ದಾವೂದ್ ಕಜೆಮಾರ್ , ಡಿಕೆಎಸ್ಸಿ ಸೌದಿ ರಾಷ್ಟ್ರೀಯ ಸಮಿತಿ ಕೋಶಾಧಿಕಾರಿ ಹಮೀದ್ ಸುಳ್ಯ , ಸಅದಿಯಾ ಫೌಂಡೇಶನ್ ಬೆಂಗಳೂರು, ತಲಕ್ಕಿ ತಾಜುಲ್ ಉಲಮಾ ಇಸ್ಲಾಮಿಕ್ ಅಕಾಡೆಮಿ, ಅಲ್ ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್ ಮಂಜನಾಡಿ ಮುಂತಾದ ಸಂಸ್ಥೆಗಳ ರಿಯಾದ್ ಸಮಿತಿ ಅಧ್ಯಕ್ಷ ಫಾರೂಕ್ ಅಬ್ಬಾಸ್ ಉಳ್ಳಾಲ್, ಕೊಡಗು ಮುಸ್ಲಿಂ ಅಸೋಸಿಯೇಷನ್ ಸೌದಿ ರಾಷ್ಟ್ರೀಯ ಅಧ್ಯಕ್ಷ ಅಬ್ದುಲ್ ಖಾದರ್ ತಂಙಳ್ , RSC ರಿಯಾದ್ ಸಮಿತಿ ಪ್ರತಿನಿಧಿಗಳು ಹಾಗೂ ಮುಂತಾದ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅಸಯ್ಯದ್ ಸಲಾಹುದ್ದೀನ್ ಅಲ್ ಬುಖಾರಿ ವರನಕ್ಕರ ತಂಙಳ್ ಪ್ರಾರ್ಥನೆ ನಡೆಸಿದರು. ಕೆ.ಸಿ.ಎಫ್ ರಿಯಾದ್ ಝೋನಲ್ ಕಾರ್ಯದರ್ಶಿ ಬಶೀರ್ ತಲಪ್ಪಾಡಿ ಸ್ವಾಗತಿಸಿದರು. ಕೆ.ಸಿ.ಎಫ್ ಸೌದಿ ರಾಷ್ಟ್ರೀಯ ಸಮಿತಿ ಸಂಘಟನಾ ವಿಭಾಗದ ಅಧ್ಯಕ್ಷ ಸಿದ್ದೀಕ್ ಸಖಾಫಿ ಪೆರುವಾಯಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಕೆ.ಸಿ.ಎಫ್ ರಿಯಾದ್ ಝೋನಲ್ ಸಂಘಟಾ ವಿಭಾಗದ ಅಧ್ಯಕ್ಷ ರಶೀದ್ ಮದನಿ ಉರುವಾಲು ಪದವು ಕಿರಾಅತ್ ನಡೆಸಿದರು. ಕಾರ್ಯಕ್ರಮದಲ್ಲಿ ಆಧ್ಯಾತ್ಮಿಕ ಮಜ್ಲಿಸ್ ಹಾಗೂ ತರಾವೀಹ್ ನಮಾಝ್ ನಡೆಯಿತು.
ಕೆ.ಸಿ.ಎಫ್ ನೆರವಿನೊಂದಿಗೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ನಡೆದುಕೊಂಡು ಬರುತ್ತಿರುವ "ಇಹ್ಸಾನ್" ಚಟುವಟಿಕೆಗಳನ್ನು ಪರದೆಯ ಮೂಲಕ ಸಾರ್ವಜನಿಕರಿಗಾಗಿ ಪ್ರದರ್ಶಿಸಲಾಯಿತು.







