ಅತಿಸಾರ ಭೇದಿ ನಿಯಂತ್ರಣ ಕಾರ್ಯಕ್ರಮಕ್ಕೆ ಚಾಲನೆ
ಮಂಗಳೂರು ಜೂ.12: ಪ್ರತಿಯೊಬ್ಬರೂ ಸ್ವಚ್ಛತೆಯನ್ನು ಕಾಪಾಡಿದರೆ ಆರೋಗ್ಯದ ಸಮಸ್ಯೆ ಉಂಟಾಗುವುದಿಲ್ಲ. ಮಕ್ಕಳಲ್ಲಿ ಸ್ವಚ್ಛತೆಯ ಪ್ರಾಮುಖ್ಯತೆಯ ಬಗ್ಗೆ ಅರಿವು ಮೂಡಿಸಬೇಕು, ಅತಿಸಾರ ಭೇದಿ ನಿಯಂತ್ರಣ ಕಾರ್ಯಕ್ರಮದ ಪ್ರಾಮಖ್ಯತೆಯ ಬಗ್ಗೆ ಸಾರ್ವಜನಿಕರಲ್ಲಿ ತಿಳುವಳಿಕೆ ಮೂಡಿಸುವಂತೆ ಮುಲ್ಕಿ ನಗರಸಭೆಯ ಅಧ್ಯಕ್ಷ ಸುನಿಲ್ ಆಳ್ವ ಹೇಳಿದರು.
ಅವರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಮುಲ್ಕಿ ನಗರಸಭೆಯ ಸಹಯೋಗದಲ್ಲಿ ಮುಲ್ಕಿಯ ಲಿಂಗಪ್ಪಯ್ಯನಕಾಡು ಇಲ್ಲಿನ ಮಹಿಳಾ ಸಮುದಾಯ ಭವನದಲ್ಲಿ ಆಯೋಜಿಸಲಾದ ಅತಿಸಾರ ಭೇದಿ ನಿಯಂತ್ರಣ ಕಾರ್ಯಕ್ರಮ ಪಾಕ್ಷಿಕ -2017 ಇದರ ಜಿಲ್ಲಾ ಮಟ್ಟದ ಮಾಹಿತಿ ಕಾರ್ಯಾಗಾರದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.
ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಡಾ.ಅಶೋಕ್ ಎಚ್. ಮಾತನಾಡಿ, ಭಾರತದಲ್ಲಿ ದಿನಕ್ಕೆ ಐದು ವರ್ಷದೊಳಗಿನ 328 ಮಕ್ಕಳು ಅತಿಸಾರ ಭೇದಿಯಿಂದ ಮರಣ ಹೊಂದುತ್ತಿದ್ದು, ಐದು ವರ್ಷದೊಳಗಿನ ಮಕ್ಕಳ ಮರಣದ ಕಾರಣಗಳನ್ನು ವಿಶ್ಲೇಸಿದಾಗ ಮಕ್ಕಳ ಮರಣಕ್ಕೆ ಅತಿಸಾರ ಭೇದಿಯು ಮೂರನೇ ಪ್ರಮುಖ ಕಾರಣವಾಗಿದ್ದು, ಸಾವಿಗೀಡಾದ ಸರಾಸರಿ 100 ಮಕ್ಕಳಲ್ಲಿ 14 ಮಕ್ಕಳು ಅತಿಸಾರ ಭೇದಿಯಿಂದ ಸಾಗೀಡಾಗಿದ್ದಾರೆ ಎಂದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾವುದೇ ಮಕ್ಕಳು ಅತಿಸಾರ ಭೇದಿಯಿಂದ ಸಾವಿಗೀಡಾಗಿಲ್ಲ. ಅತಿಸಾರ ಭೇದಿಯ ನಿಯಂತ್ರಣದಲ್ಲಿ ಓ.ಆರ್.ಎಸ್ ಮತ್ತು ಜಿಂಕ್ ಮಾತ್ರೆಯ ಯಾವ ರೀತಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ವಿವರಿಸಿದರು.
ನಂತರ ಆಹಾರ ಸಂಗ್ರಹಣೆ, ನೀರಿನ ಶೇಖರಣೆಯ ಬಗ್ಗೆ ಸರಿಯಾದ ಮಾಹಿತಿ, ವಿವಿಧ ನೀರಿನ ಮೂಲಗಳಲ್ಲಿ ಸ್ವಚ್ಛತೆಯನ್ನು ಕಾಪಾಡಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡುವ ಬಗ್ಗೆ ಪಂಚಾಯತ್ಗಳಿಗೆ, ನಗರ ಸಭೆಗಳಿಗೆ, ಮಹಾನಗರಪಾಲಿಕೆಗೆ ಈಗಾಗಲೇ ಮಾಹಿತಿ ನೀಡಲಾಗಿದೆ. ಆಶಾ ಕಾರ್ಯಕರ್ತೆ, ಅಂಗನವಾಡಿ ಕಾರ್ಯಕರ್ತೆ, ಕಿರಿಯ ಮಹಿಳಾ ಆರೋಗ್ಯ ಸಹಾಯಕಿ, ರಾಷ್ಟ್ರೀಯ ಬಾಲ ಸ್ವಾಥ್ಯ ಕಾರ್ಯಕ್ರಮದ ತಂಡದ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಅವರು ಹೇಳಿದರು.
ಮಂಗಳೂರು ತಾಲೂಕು ಆರೋಗ್ಯಾಧಿಕಾರಿಯಾದ ಡಾ.ನವೀನ್ ಕುಲಾಲ್, ಲಿಂಗಪ್ಪಯ್ಯಕಾಡು ಪ್ರದೇಶದಲ್ಲಿ ಸಾಂಕ್ರಾಮಿಕ ರೋಗಗಳು ಅತೀ ಹೆಚ್ಚಿದ್ದು, ಜನರು ಸ್ವಚ್ಛತೆಯ ಬಗ್ಗೆ ಕಾಳಜಿ ವಹಿಸಬೇಕು. ಸಾಂಕ್ರಾಮಿಕ ರೋಗಗಳ ನಿಯಂತ್ರಣ, ಸ್ವಚ್ಛತೆಯ ಬಗ್ಗೆ, ಕೈತೊಳೆಯುವ ವಿಧಾನಗಳ ಶಾಲಾ ಮಕ್ಕಳು ಮತ್ತು ಮಕ್ಕಳ ಹೆತ್ತವರೊಂದಿಗೆ ಸಂವಹನ ನಡೆಸಿದರು.
ಅಧ್ಯಕ್ಷತೆಯನ್ನು ಸ್ಥಳೀಯ ನಗರ ಪಂಚಾಯತ್ ಸದಸ್ಯ ಬಶೀರ್ ಕುಳಾಯಿ ವಹಿಸಿದ್ದರು. ವೇದಿಕೆಯಲ್ಲಿ ಸ್ಥಳೀಯ ಶಾಲೆಗಳ ಮುಖ್ಯೋಪಾಧ್ಯಾಯರಾದ ಸಂಧ್ಯಾ ಹೆಗಡೆ ಮತ್ತು ಸುಮತಿ ಭಾಯಿ ಉಪಸ್ಥಿತರಿದ್ದರು. ಜಿಲ್ಲಾ ಉಪ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ ವಂದಿಸಿದರು.
ಇದೇ ಸಂದರ್ಭದಲ್ಲಿ 5 ವರ್ಷದೊಳಗಿನ ಮಕ್ಕಳ ತಾಯಂದಿರಿಗೆ ಸಾಂಕೇತಿಕವಾಗಿ ಓ.ಆರ್.ಎಸ್ ಪ್ಯಾಕೇಟ್ ವಿತರಿಸಲಾಯಿತು. ಕಿರಿಯ ಆರೋಗ್ಯ ಸಹಾಯಕ ಕೃಷ್ಣಮೂರ್ತಿ, ಮಹಿಳಾ ಆರೋಗ್ಯ ಸಹಾಯಕಿ ನಾಗರತ್ನ ಕಾರ್ಯಕ್ರಮವನ್ನು ನಿರೂಪಿಸಿದರು.