ಸಮಾಜದ ಸಮಸ್ಯೆಗಳಿಗೆ ವಚನಗಳಲ್ಲಿ ಪರಿಹಾರ : ರಾಮಚಂದ್ರ

ಚಾಮರಾಜನಗರ, ಜೂ. 13 : ದಲಿತ ವಚನಕಾರರು ಆಡುಭಾಷೆಯಲ್ಲಿ ಜೀವನದ ಮೌಲ್ಯಯುತ ವಿಷಯಗಳನ್ನು ಒಳಗೊಂಡ ವಚನಗಳನ್ನು ರಚಿಸುವ ಮೂಲಕ ತಮ್ಮದೇ ಆದ ವೈಶಿಷ್ಟ್ಯವನ್ನು ಮೆರೆದಿದ್ದಾರೆ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ಎಂ. ರಾಮಚಂದ್ರ ತಿಳಿಸಿದರು.
ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ದಲಿತ ವಚನಕಾರರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜನಸಾಮಾನ್ಯರಿಗೆ ಅರ್ಥವಾಗುವ ಭಾಷೆಯಲ್ಲಿ ವಚನಗಳನ್ನು ರಚಿಸುವ ಮುಖೇನ ಸಮಾಜದ ಸಮಸ್ಯೆ ಪರಿಹಾರಕ್ಕೆ ಹಲವು ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರವನ್ನು ದಲಿತ ವಚನಕಾರರು ನೀಡಿದ್ದಾರೆ. ಅವರ ವಚನಗಳು ಇಂದಿಗೂ ಎಲ್ಲರಿಗೂ ಮಾರ್ಗದರ್ಶನ ಮಾಡುವಂತಹ ಮೌಲ್ಯಗಳನ್ನು ಒಳಗೊಂಡಿದೆ ಎಂದರು. ದಲಿತ ವಚನಕಾರರಿಗೆ ಬಸವಣ್ಣ ಅವರು ವೇದಿಕೆ ಕಲ್ಪಿಸಿಕೊಡುವ ಮೂಲಕ ಎಲ್ಲರೂ ಒಂದೇ ಎಂಬ ಸಂದೇಶ ಸಾರಿದರು. ವಚನಕಾರರಲ್ಲಿ ಮಹಿಳೆಯರೂ ಇದ್ದಾರೆ. ಇಂತಹವರನ್ನು ಗುರುತಿಸುವ ಕೆಲಸ ಆಗಬೇಕಿದೆ. ಈ ದಿಸೆಯಲ್ಲಿ ಹೆಚ್ಚು ಆಸಕ್ತಿ ವಹಿಸಬೇಕಿದೆ ಎಂದು ರಾಮಚಂದ್ರ ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಬಿ. ರಾಮು ಅವರು ಜಾತಿ, ವರ್ಗ, ಅಂತಸ್ತು ಸಂಘರ್ಷದ ಪರಾಕಾಷ್ಠೆ ಅವಧಿಯಲ್ಲಿ ವಚನಕಾರರು ಮಿಂಚಿನಂತೆ ತಮ್ಮದೇ ಆದ ದಾಟಿಯಲ್ಲಿ ಬೆಳಕು ಚೆಲ್ಲಿದರು. ಈ ಅರಿವು ಇಂದಿನ ಪೀಳಿಗೆಗೂ ಮನವರಿಕೆ ಮಾಡಿಕೊಡಬೇಕೆಂಬ ಉದ್ದೇಶದಿಂದ ವಚನಕಾರರ ಜಯಂತಿ ಕಾರ್ಯಕ್ರಮ ಆಚರಣೆಯಾಗುತ್ತಿದೆ. ವಚನಕಾರರ ಸಂದೇಶ, ಆದರ್ಶ ಪ್ರಸ್ತುತ ಸಂದರ್ಭಕ್ಕೂ ಅವಶ್ಯವಾಗಿದೆ ಎಂದರು.
ಮುಖ್ಯ ಉಪನ್ಯಾಸ ನೀಡಿದ ಮೈಸೂರಿನ ಸಿದ್ದಾರ್ಥನಗರ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಕನ್ನಡ ವಿಾಗದ ಸಹಾಯಕ ಪ್ರಾಧ್ಯಾಪಕ
ಡಾ. ಡಿ. ಪುರುಷೊತ್ತಮ್ ಅವರು ದಲಿತ ವಚನಕಾರರು ದಮನಿತ ವರ್ಗಗಳ ಪ್ರತಿನಿಧಿಗಳಾಗಿ ಅವರ ಘನತೆ ಶ್ರೇಷ್ಠತೆಯನ್ನು ವಚನಗಳ ಮೂಲಕ ತೋರಿಸಿಕೊಟ್ಟಿದ್ದಾರೆ. ಇನ್ನೂ ಹಲವಾರು ದಲಿತ ವಚನಕಾರರ ಬಗೆಗೆ ಹೆಚ್ಚು ವಿಚಾರಗಳು ಹೊರಬರಬೇಕಿದೆ ಎಂದರು.
ಜಿಲ್ಲಾ ಪಂಚಾಯತ್ ಸದಸ್ಯರಾದ ಜಯಂತಿ ಅವರು ಮಾತನಾಡಿ ದಲಿತ ವಚನಕಾರರು ಸಮಾಜದ ಮುನ್ನಡೆಗೆ ಅಗತ್ಯ ಮಾರ್ಗದರ್ಶನ ಮಾಡಿದ್ದಾರೆ. ಅಜ್ಞಾನ ಹೋಗಲಾಡಿಸಿ ಅರಿವು ಉಂಟುಮಾಡುವ ಕಾರ್ಯವನ್ನು ಸಹ ನಿರ್ವಹಿಸಿದ್ದಾರೆ. ವಚನಗಳ ಅಧ್ಯಯನದಿಂದ ಜ್ಞಾನ ಲಭಿಸಲಿದೆ ಎಂದರು.
ಇದೇ ವೇಳೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹೊರತಂದಿರುವ ನಮ್ಮ ಹೆಮ್ಮೆಯ ವಚನಕಾರರು ಎಂಬ ಮಡಿಕೆ ಪತ್ರವನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ ಬಿಡುಗಡೆ ಮಾಡಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕರಾದ ಎ. ರಮೇಶ್ ಸಹಕರಿಸಿದರು.
ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ.ಪಿ. ಸದಾಶಿವಮೂರ್ತಿ, ತಾಲೂಕು ಪಂಚಾಯತ್ ಸದಸ್ಯರಾದ ಬಸವಣ್ಣ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್ ಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗೀತಾ ಪ್ರಸನ್ನ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಮುನಿರಾಜಪ್ಪ, ಕನ್ನಡ ಮತ್ತು ಸಂಸ್ಕತಿ ಇಲಾಖೆ ಸಹಾಯಕ ನಿರ್ದೇಶಕಿ ಡಿ. ನಾಗವೇಣಿ, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.







