ಹಲವಾರು ಬಹುಮುಖಿ ಜನೋಪಯೋಗಿ ಕಾರ್ಯಕ್ರಮ
ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆ

ಬೆಳ್ತಂಗಡಿ, ಜೂ.14: ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಆರೋಗ್ಯ ಭಾಗ್ಯ ಲಭಿಸಬೇಕು, ಹಳ್ಳಿಯ ಬಡ ಜನತೆಗೆ ತಾವಿರುವ ಜಾಗದಲ್ಲಿಯೇ ಆಧುನಿಕ ಸೌಲಭ್ಯಗಳನ್ನೊಳಗೊಂಡ ಚಿಕಿತ್ಸೆ ಪಡೆಯುವ ಅವಕಾಶ ಸಿಗಬೇಕೆಂಬ ಧರ್ಮಾಧಿಕಾರಿ ಡಾ ಡಿ. ವೀರೇಂಂದ್ರ ಹೆಗ್ಗಡೆಯವರ ಚಿಂತನೆಯೊಂದಿಗೆ ನಿರ್ಮಾಣಗೊಂಡ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮೆಡಿಕಲ್ ಟ್ರಸ್ಟ್ ವತಿಯಿಂದ ನಡೆಸಲ್ಪಡುತ್ತಿರುವ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆಯು ಹಲವಾರು ಬಹುಮುಖೀ ಜನೋಪಯೋಗಿ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಆಸ್ಪತ್ರೆಯ ಕಾರ್ಯನಿರ್ವಹಣಾಧಿಕಾರಿ ಮನ್ಮಥ್ ಕುಮಾರ್ ಎನ್ ತಿಳಿಸಿದರು.
ಅವರು, ಬುಧವಾರ ಉಜಿರೆ ಆಸ್ಪತ್ರೆಯಲ್ಲಿ ಪತ್ರಕಾಗೋಷ್ಠಿ ನಡೆಸಿ ವಿವರಗಳನ್ನು ನೀಡಿದರು. 2013 ಮೇ, 1ರಂದು ಪ್ರಾರಂಭಗೊಂಡ ಈ ಆಸ್ಪತ್ರೆ, 200 ಹಾಸಿಗೆಗಳೊಂದಿಗೆ ಸುಸಜ್ಜಿತ ಆಸ್ಪತ್ರೆಯಾಗಿ ಕಾರ್ಯಾಚರಿಸುತ್ತಿದೆ. ಆಸ್ಪತ್ರೆಯಲ್ಲಿ 16 ಮಂದಿ ತಜ್ಞ ವೈದ್ಯರು, 7 ಮಂದಿ ಸಹಾಯಕ ವೈದ್ಯರು ತಂಡದಿಂದ ರೋಗಿಗಳಿಗೆ ವೈದ್ಯಕೀಯ ಸೇವೆ ಲಭಿಸುತ್ತಿದೆ. 7 ಮಂದಿ ಸಂದರ್ಶನ ವೈದ್ಯರು ನಿಗದಿತ ದಿನಗಳಲ್ಲಿ ಚಿಕಿತ್ಸೆಗೆ ಲಭ್ಯವಿರುತ್ತಾರೆ. ಬೆಳ್ತಂಗಡಿ ತಾಲೂಕು ಮಾತ್ರವಲ್ಲದೆ ಹತ್ತಿರದ ಎಲ್ಲಾ ತಾಲೂಕಿನ ರೋಗಿಗಳಿಗೆ ಈ ಆಸ್ಪತ್ರೆಯು ವರದಾನವಾಗಿದೆ.
ಆಸ್ಪತ್ರೆಯ ಕ್ಯಾಂಪಸ್ ಒಳಗೆ ವೈದ್ಯರ ವಸತಿ ನಿಲಯಗಳಿದ್ದು, ತುರ್ತು ಸಮಯದಲ್ಲಿ ದಿನದ 24 ಗಂಟೆಯೂ ವೈದ್ಯರುಗಳು ಚಿಕಿತ್ಸೆಗೆ ಲಭ್ಯವಿರುತ್ತಾರೆ. ಇದುವರೆಗೆ 2,22,000 ಕ್ಕೂ ಮೇಲ್ಪಟ್ಟು ರೋಗಿಗಳು ನಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಕಣ್ಣಿನ ತಜ್ಞರು ಪ್ರತಿ ಗುರುವಾರ ಹಾಗೂ ಮಕ್ಕಳ ಚಿಕಿತ್ಸಾ ತಜ್ಞರು ದಿನದ 24 ಗಂಟೆಯೂ ಲಭ್ಯವಿರುತ್ತಾರೆ. ಮಹಿಳೆಯರಲ್ಲಿ ಅತೀ ಹೆಚ್ಚು ಕಾಡುತ್ತಿರುವ ಗೆಡ್ಡೆಯ ಸಮಸ್ಯೆಯಂತಹ ಖಾಯಿಲೆಗಳಿಗೆ ತಜ್ಞ ವೈದ್ಯರಿಂದ ಸೂಕ್ತ ಚಿಕಿತ್ಸೆ ದೊರೆಯುತ್ತಿದೆ.ಇದುವರೆಗೆ ಸುಮಾರು 300 ಕ್ಕಿಂತಲೂ ಹೆಚ್ಚು ಗೆಡ್ಡೆಯ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಅಸ್ತಮಾ, ಕೆಮ್ಮು, ದಮ್ಮು ಶ್ವಾಸಕೋಶದ ಸಮಸ್ಯೆಗಳಿಗೆ, ಹೃದಯ ಸಂಬಂಧಿ ಖಾಯಿಲೆಗಳಿಗೆ ತಜ್ಞ ವೈದ್ಯರು ಸದಾ ಸೇವೆಗೆ ಲಭ್ಯವಿರುತ್ತಾರೆ ಕಿಡ್ನಿಕಲ್ಲು, ಪ್ರೊಸ್ಟೇಟ್ ಮತ್ತು ಮೂತ್ರಕೋಶದ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ತಜ್ಞ ವೈದ್ಯರಿದ್ದು, ಇದುವರೆಗೆ ಹಲವಾರು ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದರು.
ಹೊರರೋಗಿ ವಿಭಾಗ:ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗ, ಮೆಡಿಸಿನ್ ವಿಭಾಗ, ಮಕ್ಕಳ ಚಿಕಿತ್ಸಾ ವಿಭಾಗ, ಸರ್ಜರಿ ವಿಭಾಗ, ಎಲುಬು ಮತ್ತು ಕೀಲು ವಿಭಾಗ, ಕಿವಿ-ಮೂಗು-ಗಂಟಲು ವಿಭಾಗ, ಪೆಥಾಲಜಿ ವಿಭಾಗ, ಅನಸ್ತೇಶಿಯಾ, ಭೌತಚಿಕಿತ್ಸಾ ವಿಭಾಗ (ಫಿಸಿಯೋಥೆರಫಿ)ಗಳಲ್ಲಿ ವೈದ್ಯಕೀಯ ಸೇವೆ ದೊರೆಯುತ್ತದೆ. ಇದಲ್ಲದೆ ಕಣ್ಣಿನ ಚಿಕಿತ್ಸಾ ವಿಭಾಗ, ಮನೋರೋಗ, ಹೃದಯರೋಗ, ಮೂತ್ರರೋಗ, ಚರ್ಮರೋಗ, ನರರೋಗ ವಿಭಾಗಗಳಲ್ಲಿ ಸಂದರ್ಶನ ವೈದ್ಯರುಗಳು ನಿಗದಿತ ದಿನಗಳಲ್ಲಿ ಸೇವೆಗೆ ಲಭ್ಯವಿರುತ್ತಾರೆ.
24 ಗಂಟೆಯ ಸೇವೆಗಳು: ಅಪಘಾತ ಮತ್ತು ತುರ್ತು ಚಿಕಿತ್ಸಾ ಘಟಕ, ತೀವ್ರ ನಿಗಾ ಘಟಕ, ಸುಸಜ್ಜಿತ ಶಸ್ತ್ರಚಿಕಿತ್ಸಾ ಕೊಠಡಿ, ಔಷಧಾಲಯ (ಫಾರ್ಮಸಿ), ಡಯಾಗ್ನಾಸ್ಟಿಕ್ ಸೌಲಭ್ಯಗಳಾದ ಅತ್ಯಾಧುನಿಕ ಮೆಡಿಕಲ್ ಲ್ಯಾಬೋರೇಟರಿ, ಸಿಟಿ ಸ್ಕ್ಯಾನಿಂಗ್, ಎಕ್ಸ್-ರೇ , ಹೃದಯರೋಗಿಗಳಿಗೆ ಟಿಎಂಟಿ ಟೆಸ್ಟ್ ದಿನದ 24 ಗಂಟೆಯೂ ಲಭ್ಯವಿರುತ್ತದೆ. ಪ್ರತಿ ಆದಿತ್ಯವಾರ ಅಲ್ಟ್ರಾಸೌಂಡ್ ವ್ವವಸ್ಥೆ ಇದೆ.
ವಿಮಾ ಸೌಲಭ್ಯಗಳು: ಸಂಪೂರ್ಣ ಸುರಕ್ಷಾ, ಯಶಸ್ವಿನಿ, ಸ್ಟಾರ್ ಹೆಲ್ತ್, ಬಿಎಸ್ಸೆನ್ನೆಲ್, ರೆಲಿಗೇರ್ ಹೆಲ್ತ್ ಇನ್ಶ್ಯೂರೆನ್ಸ್, ಎಂಡೋಸಲ್ಫಾನ್, ಸಿ.ಎಂ ಸಾಂತ್ವಾನ, ವಿಪುಲ್ ಮೆಡ್ಕಾರ್ಪ್, ರಾಷ್ಟ್ರೀಯ ಸ್ವಾಸ್ತ್ಯ ಭೀಮಾ ಯೋಜನೆ ಮೊದಲಾದ ಆರೋಗ್ಯ ವಿಮೆಯಡಿಯಲ್ಲಿ ನಗದು ರಹಿತ ಚಿಕಿತ್ಸಾ ಸೌಲಭ್ಯವಿದ್ದು, ರೋಗಿಗಳು ಇದರ ಪ್ರಯೋಜನ ಪಡೆಯುತ್ತಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಯಾತ್ರಿಕರಿಗೆ ಅರೋಗ್ಯ ಅವಘಡಗಳು ಸಂಭವಿಸಿದಲ್ಲಿ ಅಂತಹ ಯಾತ್ರಿಕರಿಗೆ ನಮ್ಮ ಆಸ್ಪತ್ರೆಯಲ್ಲಿ ಉಚಿತ ಔಷಧ ಮತ್ತು ಚಿಕಿತ್ಸೆಯನ್ನು ನೀಡಲಾಗುತ್ತದೆ.
ಬಡ ರೋಗಿಗಳಿಗೆ ನಮ್ಮ ಆಸ್ಪತ್ರೆಯಲ್ಲಿ ರೂ. 2,52,95,000 ಮೌಲ್ಯದ ರೋಗ ತಪಾಸಣೆ, ಔಷಧ ಮೊದಲಾದ ವೈದ್ಯಕೀಯ ಸೇವೆಯನ್ನು ಉಚಿತವಾಗಿ ನೀಡಲಾಗಿದೆ. ವಿವಿಧ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಆಸ್ಪತ್ರೆಯಲ್ಲಿ 60ಕ್ಕಿಂತಲೂ ಮಿಕ್ಕಿ ಉಚಿತ ಶಿಬಿರಗಳನ್ನು ಆಯೋಜಿಸಲಾಗಿದೆ. ಕಳೆದ 3 ವರ್ಷಗಳಿಂದ ವಿವಿಧ ಸಂಘ-ಸಂಸ್ಥೆಯ ಸಹಯೋಗದಲ್ಲಿ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ ನಡೆಸುತ್ತಿದ್ದು, ಈವರೆಗೆ 1572 ಯೂನಿಟ್ ರಕ್ತ ಸಂಗ್ರಹಿಸಿ ರೋಗಿಗಳ ಉಪಯೋಗಕ್ಕೆ ಸದ್ಬಳಕೆ ಮಾಡಲಾಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಮಹಾಶಿವರಾತ್ರಿ ಸಂದರ್ಭದಲ್ಲಿ ಆಗಮಿಸುವ ಪಾದಯಾತ್ರಾರ್ಥಿಗಳಿಗೆ ಕಳೆದ 3 ವರ್ಷಗಳಿಂದ ಉಚಿತ ವೈದ್ಯಕೀಯ ಸೇವೆ ನೀಡಲಾಗುತ್ತಿದ್ದು, ಆಸ್ಪತ್ರೆ ಸೇರಿದಂತೆ 5 ಕಡೆಗಳಲ್ಲಿ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಿ 44,242 ಪಾದಯಾತ್ರಾರ್ಥಿಗಳಿಗೆ ಉಚಿತ ವೈದ್ಯಕೀಯ ಸೇವೆ ನೀಡಲಾಗಿದೆ. 1654 ವಿದ್ಯಾರ್ಥಿನಿಯರ ರಕ್ತಪರೀಕ್ಷೆ ನಡೆಸಿ ರಕ್ತಹೀನತೆ ಇರುವವರಿಗೆ ಸೂಕ್ತವಾದ ವೈದ್ಯಕೀಯ ಸಲಹೆ ನೀಡಲಾಗಿದ್ದು, 550 ಮಂದಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ನಡೆಸಿ ಸೂಕ್ತವಾದ ವೈದ್ಯಕೀಯ ಸಲಹೆ ನೀಡಲಾಗಿದೆ.







