ಕಲ್ಲಡ್ಕ ಘಟನೆ: ಕಟ್ಟು ನಿಟ್ಟಿನ ಕ್ರಮಕ್ಕೆ ಸಿಪಿಎಂ ಆಗ್ರಹ
ಮಂಗಳೂರು, ಜೂ.15: ಬಂಟ್ವಾಳ ತಾಲೂಕಿನ ಕಲ್ಲಡ್ಕದಲ್ಲಿ ಮಂಗಳವಾರ ನಡೆದ ಘಟನೆಗಳು ಮರುಕಳಿಸದಂತೆ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಜರಗಿಸಬೇಕು ಎಂದು ಸಿಪಿಎಂ ದ.ಕ.ಜಿಲ್ಲಾ ಸಮಿತಿ ಒತ್ತಾಯಿಸಿದೆ.
ಕೋಮುವಾದಿಗಳು ಜನರ ಪ್ರಾಣ, ಆಸ್ತಿಗಳ ಮೇಲೆ ದಾಳಿ ಮಾಡುತ್ತಾ ತಮ್ಮ ರಾಜಕೀಯ ಬೇಳೆ ಬೇಯಿಸುತ್ತಿರುವುದು ಖಂಡನೀಯ. ಕೋಮುಗಲಭೆಯ ಕಿಡಿ ಹಚ್ಚುವ ಪ್ರಯತ್ನ ನಡೆಯುತ್ತಲೇ ಇದೆ. ವಿಧಾನಸಭಾ ಕ್ಷೇತ್ರದ ಮೇಲೆ ಕಣ್ಣಿಟ್ಟಿರುವ ಸಂಘ ಪರಿವಾರ ಹಾಗೂ ಅದರ ನಾಯಕರು ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡುತ್ತಾ ಬೇಳೆ ಬೇಯಿಸುತ್ತಿದ್ದಾರೆ. ಅದಕ್ಕೆ ಪೂರಕವಾಗಿ ಅಲ್ಪಸಂಖ್ಯಾತ ಕೋಮುವಾದಿಗಳು ಕೂಡಾ ನರ್ತಿಸುತ್ತಿದ್ದಾರೆ. ಶಾಂತಿಪ್ರಿಯ ಜನತೆ ಈ ಕೋಮುವಾದಿಗಳ ಕೃತ್ಯಕ್ಕೆ ಬಲಿ ಬೀಳದೆ ಜಿಲ್ಲೆಯ ಶಾಂತಿಗೆ ಮುಂದಾಗಬೇಕೆಂದು ಸಿಪಿಎಂ ಜನತೆಯಲ್ಲಿ ಮನವಿ ಮಾಡಿದೆ.
ಧಾರ್ಮಿಕ ಕೇಂದ್ರಗಳ ಮೇಲೆ ಕಲ್ಲೆಸೆದು ಜನತೆಯನ್ನು ಕೆರಳಿಸಿ ರಾಜಕೀಯ ಮಾಡುತ್ತಿರುವ ಕ್ರಿಮಿನಲ್ಗಳ ಮೇಲೆ ಹಾಗೂ ಅವರ ನಾಯಕರ ಮೇಲೆ ಕಾನೂನು ಕ್ರಮ ಜರಗಿಸಬೇಕೆಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿ ಒತ್ತಾಯಿಸಿದ್ದಾರೆ.





