ಉಡುಪಿ ಜಿಲ್ಲಾ ವರ್ತಕರ ಸಮಾವೇಶ

ಉಡುಪಿ, ಜೂ.15: ಉಡುಪಿ ಜಿಲ್ಲಾ ವರ್ತಕರ ಸಂಘದ ವತಿಯಿಂದ ವರ್ತಕರ ಸಮಾವೇಶವನ್ನು ಇತ್ತೀಚೆಗೆ ಅಂಬಲಪಾಡಿ ದೇವಸ್ಥಾನದ ಭವಾನಿ ಮಂಟಪದಲ್ಲಿ ಆಯೋಜಿಸಲಾಗಿತ್ತು.
ಸಮಾವೇಶವನ್ನು ಅಂಬಲಪಾಡಿ ದೇವಸ್ಥಾನದ ಧರ್ಮದರ್ಶಿ ನಿ.ಬೀ.ವಿಜಯ ಬಲ್ಲಾಳ್ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿದರು. ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಐರೋಡಿ ಸಹನಶೀಲ ಪೈ ವಹಿಸಿದ್ದರು.
ಸಿಐಟಿಯು ಮುಖಂಡ ವಿಶ್ವನಾಥ ರೈ, ತೋನ್ಸೆ ದೇವದಾಸ ಪೈ, ಜನತಾದಳದ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ, ಕಡಿಯಾಳಿ ಸುಪ್ರಭಾ, ಮಿತ್ರಪ್ರಿಯ ಆಸ್ಪತ್ರೆಯ ಮುಖ್ಯಸ್ಥ ಶ್ರೀಧರ ಹೊಳ್ಳ, ರಾಮಕೃಷ್ಣ, ಕೆನರಾ ಬಸ್ ಮಾಲಕರ ಸಂಘದ ಅಧ್ಯಕ್ಷ ಸುರೇಶ್ ನಾಯಕ್ ಕುಯಿಲಾಡಿ, ಪ್ರೈಮ್ ಟಿವಿಯ ನಿರ್ದೇಶಕ ದಿನೇಶ್ ಕಿಣಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಉಚಿತ ಪುಸ್ತಕ ವಿತರಣೆ, ಮದುವೆ, ಉಪನಯನ, ಗೃಹ ಪ್ರವೇಶ ಹಾಗೂ ಅನಾರೋಗ್ಯದವರಿಗೆ ಸಹಾಯಧನ ವಿತರಿಸಲಾಯಿತು. ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು. ಸಂಘದ ಕಾರ್ಯದರ್ಶಿ ಪಾದೆಮಠ ನಾಗರಾಜ್ ಅಡಿಗ ಸ್ವಾಗತಿಸಿದರು. ಉಪಾಧ್ಯಕ್ಷ ಎಂ.ವಸಂತ ವಂದಿಸಿದರು. ಕೊಂಡಕೂರು ದೇವರಾಜ ಮೂರ್ತಿ ಕಾರ್ಯಕ್ರಮ ನಿರೂಪಿಸಿದರು.





