150 ಚುನಾವಣೆ ಸ್ಪರ್ಧಿಸಿದ 'ಎಲೆಕ್ಷನ್ ಕಿಂಗ್ ' ರಾಷ್ಟ್ರಪತಿ ಚುನಾವಣಾ ಅಖಾಡಕ್ಕೆ
ಹೊಸದಿಲ್ಲಿ, ಜೂ.15: ರಾಷ್ಟ್ರಪತಿ ಚುನಾವಣೆಗೆನಾಮಪತ್ರ ಸಲ್ಲಿಕೆಗೆ ಮೊದಲ ದಿನವಾದ ಇಂದು ಆರು ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ರಾಷ್ಟ್ರಪತಿ ಚುನಾವಣೆಗೆ ಸಂಬಂಧಿಸಿ ಇಂದು ಅಧಿಸೂಚನೆಯನ್ನು ಹೊರಡಿಸಿದ್ದು, ಜುಲೈ 17ರಂದು ಚುನಾವಣೆ ನಡೆಯಲಿದೆ ಎಂದಿತ್ತು.
ಆದರೆ ಇಂದು ನಾಮಪತ್ರ ಸಲ್ಲಿಸಿದವರಲ್ಲಿ ವಿಶೇಷವಾಗಿ ಗಮನಸೆಳೆದದ್ದು, ತಮಿಳುನಾಡಿನ ಸೇಲಂನ ಕೆ.ಪದ್ಮರಾಜನ್. ಸುಮಾರು 150ಕ್ಕೂ ಹೆಚ್ಚು ಚುನಾವಣೆಗಳಲ್ಲಿ ಸ್ಪರ್ಧಿಸಿರುವ ಪದ್ಮರಾಜನ್ “ಎಲೆಕ್ಷನ್ ಕಿಂಗ್” ಎಂದೇ ಪ್ರಸಿದ್ಧರು.
“ಅತ್ಯಂತ ವಿಫಲ ಅಭ್ಯರ್ಥಿ” ಎನ್ನುವ ಗುರುತಿನೊಂದಿಗೆ ಅವರ ಹೆಸರು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ನಲ್ಲೂ ದಾಖಲಾಗಿದೆ. ಈ ಹಿಂದೆ ಪದ್ಮರಾಜನ್ ಅವರು ಪ್ರಬಲ ರಾಜಕಾರಣಿಗಳಾದ ಜೆ.ಜಯಲಲಿತಾ, ಎಂ.ಕರುಣಾನಿಧಿ, ಎ.ಕೆ.ಆ್ಯಂಟನಿ, ಪಿ.ವಿ. ನರಸಿಂಹರಾವ್, ಎಸ್.ಎಂ.ಕೃಷ್ಣ, ಮನಮೋಹನ್ ಸಿಂಗ್ ಹಾಗೂ ಪ್ರಣವ್ ಮುಖರ್ಜಿಯವರ ವಿರುದ್ಧ ಸ್ಪರ್ಧಿಸಿದ್ದರು.
ಗ್ವಾಲಿಯರ್ ನ ಆನಂದ್ ಸಿಂಗ್ ಕುಶ್ವಾಹಾ, ತೆಲಂಗಾಣದ ಎ.ಬಾಲ ರಾಜ್, ಮುಂಬೈಯ ಸಾಯಿರಾ ಬಾನೊ ಪಟೇಲ್, ಮುಂಬೈಯ ಅಬ್ದುಲ್ ಹಮೀದ್ ಪಟೇಲ್ ಹಾಗೂ ಮಹಾರಾಷ್ಟ್ರದ ಕೊಂಡೆಕರ್ ವಿಜಯ್ ಪ್ರಕಾಶ್ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಇತರರು.