ಸಾರ್ವಜನಿಕರು ಎಚ್ಚೆತ್ತುಕೊಂಡಾಗ ಬಾಲ್ಯ ವಿವಾಹ ತಡೆಯಲು ಸಾಧ್ಯ: ನ್ಯಾ. ಎಮ್.ರಾಮಚಂದ್ರ

ಪುತ್ತೂರು,ಜು.16: ಬಾಲ್ಯ ವಿವಾಹ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದಂತೆ ಸರಕಾರದ ಇಲಾಖೆಗಳು ಜಾಗೃತಿ ಮಾತ್ರ ಮೂಡಿಸಬಹುದು. ಆದರೆ ಸಾರ್ವಜನಿಕರು ಎಚ್ಚೆತ್ತುಕೊಂಡಾಗ ಬಾಲ್ಯ ವಿವಾಹ ತಡೆಯಲು ಸಾಧ್ಯ ಎಂದು 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಎಮ್.ರಾಮಚಂದ್ರ ಹೇಳಿದರು.
ಜಿಲ್ಲಾ ಮತ್ತು ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ, ನ್ಯಾಯವಾದಿಗಳ ಸಂಘ, ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ನೆಹರುನಗರ ಸುದಾನ ವಸತಿಯುತ ಶಾಲೆಯಲ್ಲಿ ನಡೆದ ಬಾಲ್ಯ ವಿವಾಹ ಜಾಗೃತಿ ಮತ್ತು ಶಾಲೆ ಕಡೆ ನನ್ನ ನಡೆ ಕುರಿತು ಜಾಗೃತಿ ಆಂದೋಲನ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ಕಾನೂನಾತ್ಮಕ ದೃಷ್ಟಿಯಲ್ಲಿ ಮದುವೆ ಮಾಡಲು ಹುಡುಗಿಗೆ 18, ಹುಡುಗನಿಗೆ 21 ವರ್ಷ ವಯಸ್ಸಾಗಿರಬೇಕು. ಬಡತನ, ಅನಕ್ಷರತೆ, ಸಂಪ್ರದಾಯ, ಆರ್ಥಿಕ ಹಿನ್ನಡೆಯಿಂದಾಗಿ ಬಾಲ್ಯವಿವಾಹದ ಅನಿಷ್ಠ ಪದ್ಧತಿ ಬೆಳೆದು ಬಂದಿದೆ. ಇಂದಿಗೂ ಕೆಲವು ಕಡೆ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಬಾಲ್ಯವಿವಾಹಕ್ಕೆ ಪ್ರಚೋದನೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಸಮುದಾಯ ಭವನ, ಮದುವೆ ಹಾಲ್ನಲ್ಲಿ ಬಾಲ್ಯವಿವಾಹ ಮಾಡದಂತೆ ಫಲಕ ಹಾಕಬೇಕು. ಮದುವೆ ದಿನಾಂಕ ನಿಶ್ಚಯ ಮಾಡುವ ಅರ್ಚಕರು ಬಾಲ್ಯವಿವಾಹದ ಕುರಿತು ಜಾಗೃತಿ ವಹಿಸಬೇಕು. ಸಾರ್ವಜನಿಕರು ಕೈ ಜೋಡಿಸಿದಾಗ ಬಾಲ್ಯವಿವಾಹ ಪಿಡುಗನ್ನು ಸಮಾಜದಿಂದ ತೊಡೆದು ಹಾಕಬಹುದು ಎಂದರು.
ವಕೀಲರ ಸಂಘದ ಅಧ್ಯಕ್ಷ ಭಾಸ್ಕರ್ ಕೋಡಿಂಬಾಳ ಮಾತನಾಡಿ ಮೌಲ್ಯಾಧರಿತ ಶಿಕ್ಷಣದಲ್ಲಿ ಮಾನಾವೀಯ ಮೌಲ್ಯ ಬೇಕಾಗಿದೆ. ಈ ನಿಟ್ಟಿನಲ್ಲಿ ದೇಶಕ್ಕೆ ಪೂರಕವಾದ ಕೆಲಸ ಶಿಕ್ಷಣ ಉದೇಶವಾಗಿರಬೇಕು. ಶಿಕ್ಷಣವನ್ನು ತಳಸ್ಪರ್ಶದಿಂದ ಅಳೆಯಬೇಕು. ನಾನು ಬದಲಾವಣೆ ಆದಾಗ ಸಮಾಜದ ಬದಲಾವಣೆಯನ್ನು ಕಾಣಲು ಸಾಧ್ಯ ಎಂಬ ಭಾವನೆ ನಮ್ಮಲ್ಲಿರಬೇಕೆಂದು ಹೇಳಿದರು.
ಸುದಾನ ವಸತಿಯುತ ಶಾಲೆಯ ಸಂಚಾಲಕ ರೆ. ವಿಜಯ ಹಾರ್ವಿನ್ ಮಾತನಾಡಿ, ಕಾನೂನು ಸುವ್ಯವಸ್ಥೆಯಲ್ಲಿ ಜಾಗೃತಿಗೆ ಸಂಬಂಧಿಸಿ ವಿದ್ಯಾರ್ಥಿಗಳು ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ಸಮಾಜದಲ್ಲಿರುವ ಕೇಡುಗಳನ್ನು ಆರೋಗ್ಯದ ದೃಷ್ಟಿಯಿಂದ ಸಾಮಾಜಿಕ ಸುವಸ್ಥೆಗಾಗಿ ಮಾಡುವ ಕಾರ್ಯಕ್ರಮವನ್ನು ದೇವರು ಮೆಚ್ಚುತ್ತಾರೆ ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ನ್ಯಾಯವಾದಿ ಹರೀಶ್ ಬಳಕ್ಕ ಮತ್ತು ಮಕ್ಕಳ ಕಲ್ಯಾಣ ಸಮಿತಿ ಸದಸ್ಯೆ ಕಸ್ತೂರಿ ಬೊಳುವಾರು ಮಾಹಿತಿ ನೀಡಿದರು.
ವೇದಿಕೆಯಲ್ಲಿ ಪ್ರಧಾನ ಹಿರಿಯ ವ್ಯವಹಾರಿಕ ನ್ಯಾಯಾಧೀಶ ಮತ್ತು ಹೆಚ್ಚುವರಿ ಸಿವಿಲ್ ಮುಖ್ಯ ನ್ಯಾಯಿತ ದಂಡಾಧಿಕಾರಿ ಸಿ.ಕೆ.ಬಸವರಾಜ್, ಹೆಚ್ಚುವರಿ ಹಿರಿಯ ವ್ಯವಹಾರಿಕ ನ್ಯಾಯಾಧೀಶ ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ಮಂಜುನಾಥ, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯರಾದ ಮಹೇಶ್ ಕಜೆ, ಎನ್.ಎಸ್ ಮಂಜುನಾಥ್, ಉದಯಶಂಕರ್ ಶೆಟ್ಟಿ, ವಕೀಲರ ಸಂಘದ ಕಾರ್ಯದರ್ಶಿ ಕೃಷ್ಣಪ್ರಸಾದ್ ರೈ, ಉಪಾಧ್ಯಕ್ಷ ಮಹಾಬಲ ಗೌಡ, ಜೊತೆಕಾರ್ಯದರ್ಶಿ ದೀಪಕ್ ಬೊಳುವಾರು, ಖಜಾಂಚಿ ಕುಮಾರನಾಥ ಎಸ್, ಮಕ್ಕಳ ರಕ್ಷಣಾ ಘಟಕದ ವಕೀಲ ವಝೀರ್ ಅಹಮ್ಮದ್, ದೈಹಿಕ ಶಿಕ್ಷಣ ಪರಿವೀಕ್ಷಕ ಸುಂದರ ಗೌಡ ಉಪಸ್ಥಿತರಿದ್ದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶಾಂತಿ ಟಿ ಹೆಗಡೆ ಸ್ವಾಗತಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ್ ಜಿ.ಎಸ್ ವಂದಿಸಿದರು. ಬೊಳುವಾರು ಸಾಂಸ್ಕೃತಿಕ ಕಲಾ ಕೇಂದ್ರದ ಅಧ್ಯಕ್ಷ ಚಿದಾನಂದ ಕಾಮತ್ ಕಾರ್ಯಕ್ರಮ ನಿರೂಪಿಸಿದರು.







