ನರಿಂಗಾನ: ಮಹಿಳಾ ಜಾಗೃತಿ ಸಂವಾದ ಕಾರ್ಯಕ್ರಮ

ಕೊಣಾಜೆ, ಜೂ.16: ಮಹಿಳೆಯರು ಜಾಗೃತರಾಗಿ ಒಗ್ಗೂಡಿ ಕಾರ್ಯವೆಸಗಿದರೆ ಎಂತಹ ಕಠಿಣ ಪರಿಸ್ಥಿತಿಯನ್ನಾದರೂ ಎದುರಿಸಬಹುದು ಅಲ್ಲದೆ ತಮ್ಮ ಹಕ್ಕು, ಹಿತರಕ್ಷಣೆಯನ್ನು ಮಾಡಿಕೊಂಡು ಉತ್ತಮ ಜೀವನ ಸಾಗಿಸಬಹುದೆಂದು ಮಹಾತ್ಮಾ ಗಾಂಧೀ ನರೇಗಾದ ಮಾಜಿ ಓಂಬಡ್ಸ್ಮೆನ್ ಶೀನ ಶೆಟ್ಟಿ ಹೇಳಿದರು.
ಅವರು ಇತ್ತೀಚೆಗೆ ನರಿಂಗಾನ ಪಂಚಾಯತ್ ಸಭಾಂಗಣದಲ್ಲಿ ಜನ ಶಿಕ್ಷಣ ಟ್ರಸ್ಟ್, ದಿ ಹಂಗರ್ ಪ್ರೋಜೆಕ್ಟ್, ಸುಗ್ರಾಮ ಸಂಘ, ಜಾಗೃತಿ ವೇದಿಕೆ ಹಾಗೂ ನರಿಂಗಾನ ಗ್ರಾಮ ಪಂ. ಸಹಭಾಗಿತ್ವದಲ್ಲಿ ನಡೆದ ಮಹಿಳಾ ಜಾಗೃತಿ ಸಂವಾದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಸುಗ್ರಾಮ ಸದಸ್ಯೆ ಗ್ರಾ.ಪಂ. ಉಪಾಧ್ಯಕ್ಷೆ ನಳಿನಾಕ್ಷಿ, ಸುಗ್ರಾಮ ಸದಸ್ಯರಾದ ಹರಿಣಾಕ್ಷಿ ಬೇಬಿ, ಸುಜಾತ ಹಾಗೂ ಜಾಗೃತಿ ವೇದಿಕೆಯ ಸದಸ್ಯರು ಸ್ವ-ಅನುಭವಗಳನ್ನು ಹಂಚಿಕೊಂಡರು. ಮಹಿಳೆ ಮತ್ತು ಪೊಲೀಸ್ಇ ಲಾಖೆಯ ಕುರಿತು ಕೊಣಾಜೆ ಪೊಲೀಸ್ ಠಾಣೆಯ ಮಹಿಳಾ ಹೆಡ್ ಕಾನ್ಸ್ಟೇಬಲ್ ಸುಖಲತಾ ಮಾಹಿತಿ ನೀಡುತ್ತಾ ಮಹಿಳೆಯರ ಜಾಗೃತಿ ವುತ್ತು ರಕ್ಷಣಾ ಕಾರ್ಯಗಳಿಗೆ ಪೊಲೀಸ್ ಇಲಾಖಾ ವತಿಯಿಂದ ಸಂಪೂರ್ಣ ಸಹಕಾರ ನೀಡಲಾಗುವುದೆಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದಿ ಇಲಾಖೆ ಸೌಲಭ್ಯಗಳ ಕುರಿತು ಅಂಗನವಾಡಿ ಮೇಲ್ವಿಚಾರಕಿ ಸಿಂಧೂ ಮಾಹಿತಿ ನೀಡಿದರು.
ಉದ್ಯೋಗ ಖಾತರಿ ಯೋಜನೆ, ಜಮೀನು ಹಕ್ಕುಪತ್ರ, ರೇಷನ್ ಕಾರ್ಡ್, ಸಮಸ್ಯೆಗಳ ಕುರಿತು ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಳಿನಿ ಮಾಹಿತಿ ನೀಡಿದರು. ಪಂಚಾಯತ್ ಅಧ್ಯಕ್ಷ ಇಸ್ಮಾಯಿಲ್, ಜನ ಶಿಕ್ಷಣ ಟ್ರಸ್ಟ್ನ ನಿರ್ದೇಶಕ ಕೃಷ್ಣ ಮೂಲ್ಯ, ಪತ್ರಕರ್ತ ಎನ್.ಟಿ. ಗುರುವಪ್ಪ ಬಾಳೆಪುಣಿ, ಹಿರಿಯ ಆರೋಗ್ಯ ಸಹಾಯಕಿ ಸೆಲ್ವೀ ಬಂಗೇರಾ ಸಂವಾದದಲ್ಲಿ ಭಾಗವಹಿಸಿ ಮಾಹಿತಿ ನೀಡಿದರು. ಸಂಯೋಜಕಿ ಚಂಚಲಾ ಸ್ವಾಗತಿಸಿದರು. ಪಂ. ಸದಸ್ಯೆ ಬೇಬಿ ವಂದಿಸಿದರು.