ರಾವ್ ಬಹಾದ್ದೂರ ಜೀವನ ಪರಿಚಯ
![ರಾವ್ ಬಹಾದ್ದೂರ ಜೀವನ ಪರಿಚಯ ರಾವ್ ಬಹಾದ್ದೂರ ಜೀವನ ಪರಿಚಯ](https://www.varthabharati.in/sites/default/files/images/articles/2017/06/18/rao bahadur.jpg)
ರೂಪದರ್ಶಿಗಳು
ಆಯ್ಕೆ:ಪುಸ್ತಕಮನೆ ಹರಿಹರಪ್ರಿಯ
ಮಾತಿನ ಮೋಡಿಯಲ್ಲಿ ತಟ್ಟನೆ ಮರುಳು ಮಾಡಿ ಬಿಡುವ ಗಾರುಡಿಗತನವನ್ನು ಕನ್ನಡದಲ್ಲಿ ನಾನು ಕಂಡದ್ದು ಇಬ್ಬರಲ್ಲಿ. ಒಬ್ಬರು ಕವಿ ಬೇಂದ್ರೆಯವರು. ಇನ್ನೊಬ್ಬರು ಕಾದಂಬರಿಕಾರ ರಾವಬಹಾದ್ದೂರರು. ಬೇಂದ್ರೆಯವರ ಮನದಲ್ಲಿ ಮಿಂಚಿನಂತೆ ಮೂಡಿಬರುವ ಕಲ್ಪನಾವಿಲಾಸಗಳು, ರಾವಬಹಾದ್ದೂರರ ನೆನಪಿನಾಳದಿಂದ ಉಕ್ಕಿಬರುವ ಪಕ್ವ ಜೀವನಾನುಭವಗಳು ಕಿವಿಗೆ ಅಪ್ಪಳಿಸುವಂಥ ಕಂಚಿನ ದನಿಯಲ್ಲಿ ಹೊರಹೊಮ್ಮಿ ನನ್ನ ಚಿತ್ತದಾಳಕ್ಕಿಳಿದು ಅದೆಷ್ಟೊ ದಿನಗಳಾಗಿದ್ದರೂ ಇನ್ನೂ ದುಮುದುಮಿಸುತ್ತಿವೆ. ಅವರೊಡನೆ ಕಳೆದ ಕ್ಷಣಗಳು ಅಪೂರ್ವವೆನಿಸುತ್ತಿವೆ. ಹಾಗೆಯೇ ಅವರ ಬದುಕು ಅಗಾಧವೆನಿಸುತ್ತ ಅವರ ಇಡೀ ವ್ಯಕ್ತಿತ್ವವೇ ನನ್ನ ಕಣ್ಣು ತುಂಬುತ್ತದೆ.
ಮಹಾಕಾವ್ಯ ಸೃಷ್ಟಿಗೆ ಸಮನಾದ ‘‘ಗ್ರಾಮಾಯಣ’’ವನ್ನು ಕೊಟ್ಟ ರಾವಬಹಾದ್ದೂರರಿಗೆ ಜನ್ಮವಿತ್ತ ಸ್ಥಳ ಒಂದು ಕುಗ್ರಾಮ. ಕೃಷ್ಣಾ ನದಿಯ ದಂಡೆ ಮೇಲಿರುವ ಹಿರೇಪಡಸಲಗಿ ಅವರ ಹುಟ್ಟೂರು. ಇಲ್ಲಿ 1911 ರ ಸೆಪ್ಟಂಬರ್ 24 ರಂದು ಬಡರೈತ ಕುಟುಂಬವೊಂದರಲ್ಲಿ ಹುಟ್ಟಿದ ಇವರು ಕಡುಬಡತನದೊಡನೆ ಹೋರಾಡಿಯೇ ಬೆಳೆಯ ಬೇಕಾಯಿತು. ದಾರಿದ್ರ್ಯವೆಷ್ಟೇ ಕಿತ್ತು ತಿನ್ನುತ್ತಿದ್ದರೂ ಓದಿ ವಿದ್ಯಾವಂತನಾಗಲೇ ಬೇಕೆಂಬ ಉತ್ಕಟ ಹಂಬಲ. ಕಲಿತದ್ದು ಒಂದು ಶಾಲೆಯಲ್ಲಲ್ಲ; ಅಥಣಿ, ಕೊಲ್ಲಾಪುರ, ಬಿಜಾಪುರ, ಜಮಖಂಡಿ ಮತ್ತು ಧಾರವಾಡ ಹೀಗೆ ನಾಲ್ಕಾರು ಊರುಗಳಲ್ಲಿ. ಅಲೆದಾಟಕ್ಕೆ ಬಡತನವೇ ಕಾರಣ.
ಅದೆಷ್ಟೇ ಕಷ್ಟಗಳು ಎದುರಾದರೂ ಧೃತಿಗೆಡಲಿಲ್ಲ. ಜಮಖಂಡಿಯಲ್ಲಿ ಓದುತ್ತಿದ್ದಾಗಿನ ಸ್ಥಿತಿಯಷ್ಟೇ ಸಾಕು ಅವರ ಬಡತನದ ತೀವ್ರತೆಗೆ. ಎಂಟಾಣೆ ಬಾಡಿಗೆಗೆ ಒಂದು ಗೂಡಿನಂಥ ರೂಮು. ವಾರಕ್ಕೊಂದು ಸಲ ಅವ್ವ ಸುಟ್ಟುಕೊಟ್ಟ ಜೋಳದ ಬಕರಿಗಳನ್ನು ತಂದು ಅದರಲ್ಲಿ ವಾರದ ಹಸಿವನ್ನು ಹಿಂಗಿಸಿಕೊಳ್ಳಬೇಕಿತ್ತು. ತಂದ ‘‘ಬಕರಿ’’ಗಳನ್ನು ಮುಗ್ಗಿ ಹೋಗದಿರಲೆಂದು ಬಿಸಿಲಲ್ಲಿ ಒಣಗಿಸಿಟ್ಟುಕೊಂಡಿದ್ದು ತಿನ್ನುವಾಗೆಲ್ಲ ನೀರಲ್ಲಿ ನೆನಸಿ ತಿನ್ನುತ್ತಿದ್ದರು. ತಿನ್ನುವಾಗ ಜೊತೆಗೆ ಒಂದಿಷ್ಟು ಉಪ್ಪು, ಒಂದುಚೂರು ಮೆಣಸಿನಕಾಯಿ. ಇಂಥ ಸ್ಥಿತಿಯಲ್ಲೂ ಅನ್ಯಾಯಕ್ಕೆ ಭಾಗದ, ಅಸತ್ಯಕ್ಕೆ ಮಣಿಯದ-ಧೀರ ವ್ಯಕ್ತಿತ್ವ. ಜಮಖಂಡಿಯ ಶಾಲೆಯಲ್ಲಿದ್ದಾಗ ಅಲ್ಲಿಗೊಮ್ಮೆ ಗೌರ್ನರರು ಆಗಮಿಸಲಿದ್ದರು. ಅವರ ಮುಂದೆ ಕವಾಯತ್ತು ನಡೆಸಲು ಎಲ್ಲಾ ವಿದ್ಯಾರ್ಥಿಗಳು ಸಮವಸ್ತ್ರ ಹೊಲಿಸಿಕೊಂಡೇ ಬರಬೇಕು, ಇಲ್ಲ ಅವರನ್ನು ಶಾಲೆಯಿಂದ ಕಿತ್ತು ಹಾಕುವುದಾಗಿ ಹೆಡ್ಮಾಸ್ತರಿಂದ ಸುಗ್ರೀವಾಜ್ಞೆ. ಪುಸ್ತಕ, ಫೀ ಇವಕ್ಕೆ ಹಣ ಇಲ್ಲದಿರುವಾಗ ಇದು ಹೇಗೆ ಸಾಧ್ಯ ? ತಾವೇ ಪ್ರತಿಭಟಿಸಿ ನನ್ನ ಹೆಸರನ್ನೇ ಬೇಕಾದರೆ ಕಿತ್ತು ಹಾಕಿ ಎಂದು ಹೇಳಿ ಹಳ್ಳಿಗೆ ಬಂದರು. ಹೊಲದಲ್ಲೆ ಬೆವರು ಸುರಿಸಿ ದುಡಿವುದೇ ಬದುಕೆಂದುಕೊಂಡರು.
ಇಷ್ಟರಲ್ಲಿ ಬಿಜಾಪುರದಲ್ಲಿದ್ದ ಮಾವನ ಮನೆಯಲ್ಲಿದ್ದುಕೊಂಡು ಓದು ಮುಂದುವರಿಸುವ ಅವಕಾಶ ಪ್ರಾಪ್ತವಾಯಿತು. ಮಾವ ತನ್ನ ಮಗನನ್ನು ಮಾತ್ರ ಹಿರೇಕೆರೂರ ಎಂಬ ಪ್ರಖ್ಯಾತ ಮಾಸ್ತರೊಬ್ಬರು ನಡೆಸುತ್ತಿದ್ದ ಶಾಲೆಗೆ ಕಳಿಸಿ ಇವರನ್ನು ಕೆಲಸಕ್ಕೆ ಬಾರದ ಟ್ರೈನಿಂಗಿಗೆ ಸೇರಿಸಿ ಕತ್ತೆಯ ಹಾಗೆ ದುಡಿಸಿಕೊಳ್ಳುತ್ತಿದ್ದ. ಮಾವನ ಮಗ ದಡ್ಡ. ಅವನ ಕೂಡ ಹಿರೇಕೆರೂರ ಮಸ್ತರರ ಶಾಲೆಗೆ ಹೋಗಿ ಕೂತು ಬರುತ್ತಿದ್ದ ಈ ಹುಡುಗನ ಅಸಾಧಾರಣ ಬುದ್ಧಿವಂತಿಕೆಗೆ ಬೆರಗಾದ ಮಾಸ್ತರರು ನೀನೂ ಇಂಗ್ಲಿಷ್ ಪರೀಕ್ಷೆ ಕಟ್ಟು ಎಂದು ಹೇಳಿದಾಗ ಮಾವ ದುಡ್ಡು ಕೊಡಲು ತಕರಾರು ತೆಗೆದ. ಕಡೆಗೆ ಇಂಥ ವಿದ್ಯಾರ್ಥಿಯ ಭವಿಷ್ಯ ಹಾಳಾಗದಿರಲೆಂದು ಆ ಮಾಸ್ತರರೇ ಎಲ್ಲ ಬಗೆಯ ಸಹಾಯ ಮಾಡಿದರು. ಇದನ್ನು ತಿಳಿದ ಮಾವ ಮನೆಯಿಂದ ಹೊರಗೆ ದೂಡಿ ಬಿಟ್ಟ. ಮತ್ತೆ ಹಳ್ಳಿಯ ಬದುಕಿಗೆ, ಹೋರಾಟಕ್ಕೇ ಶರಣೆಂದರು.
ಹೀಗೆ ಹತ್ತಾರು ಕಷ್ಟಗಳು ಬಂದರೂ ಲೆಕ್ಕಿಸದೆ ಅಂತೂ ಧಾರವಾಡಕ್ಕೆ ಬಂದು ಅಲ್ಲಿನ ಬ್ಯಾಂಕಿನಲ್ಲಿ ದುಡಿಯುತ್ತಲೇ ಕರ್ನಾಟಕ ಕಾಲೇಜನ್ನು ಸೇರಿದ್ದಾಯಿತು. ಅಲ್ಲಿ ಕನ್ನಡ ಸಾಹಿತ್ಯದ ಹುಚ್ಚು ಉತ್ಕಟವಾಯಿತು. ಈ ಮುಂಚೆ ಓದಿನ ಗೀಳಿದ್ದು ಬಹಳಷ್ಟು ಕೈಗೆ ಸಿಕ್ಕಿದ್ದನ್ನೆಲ್ಲ ಓದಿದ್ದುದು ಈಗ ಪ್ರಯೋಜನಕ್ಕೆ ಬಂತು. ಬರೆಯುವ ಹವ್ಯಾಸ ಮೂಡತೊಡಗಿತು. ಯೌವ್ವನ ಸಹಜ ಅತ್ಯುತ್ಸಾಹದಿಂದ ಎಲ್ಲ ಲೇಖಕರಂತೆ ಪ್ರೇಮದ ಮೂಲಕವೇ ಇವರೂ ಬರವಣಿಗೆಗೆ ತೊಡಗಿದರು. ಕರ್ನಾಟಕ ಕಾಲೇಜಿನ ಮಿಸಲೆನಿಯಲ್ಲಿ 1931 ರಲ್ಲಿ ಅಂದರೆ 20ನೆಯ ವಯಸ್ಸಿನಲ್ಲಿ ‘‘ರನ್ನೆಯೆ ದಯಮಾಡಿಲ್ಲಿಂದ’’ ಎಂಬ ಕವನ, ‘‘ಕಮಲಿನಿ’’ ಕತೆ ಮತ್ತು ‘‘ಆಮ್ರ ಫಲ’’ ಪ್ರಬಂಧ ಇವು ಮೂರೂ ಒಟ್ಟಾಗಿ ಅಚ್ಚಾದವು. ಕವಿ ಬೇಂದ್ರೆಯವರ ಪ್ರಖ್ಯಾತ ಪ್ರೇಮ ಕವನ ಅಚ್ಚಾಗಿದ್ದ ಪುಟದ ಹಿಂದೆಯೆ ‘‘ರನ್ನೆಯೆ ದಯಮಾಡಿಲ್ಲಿಂದ’’ ಕವನ ಕಾಲೇಜಿನ ಹುಡುಗಿಯೊಬ್ಬಳನ್ನು ಕುರಿತಾಗಿದ್ದು ಎಲ್ಲರಲ್ಲೂ ಒಂದು ಬಗೆಯ ಕುತೂಹಲವನ್ನು ಕೆರಳಿಸಿಬಿಟ್ಟಿತ್ತು. ಆ ಪದ್ಯದ ಕೆಲವು ಸಾಲುಗಳು
‘‘ರನ್ನೆಯೆ ದಯಮಾಡಿಲ್ಲಿಂದ
...........................................
ಮೋಹವ ಸೂಸುತ ನಗೆಮೊಗದಿಂದ
ಮೋಹಿಸದಿರೆ ಕಾಲೇಜದಿ ಬಂದ
...................................................
...................................................
ಕಾಲೇಜವು ತಾ ಮಲಗುವ ಮನೆಯೆ
ಆಲೋಚಿಸು ಇದು ತಾ ಇರುಳೆ
ತಪ್ಪದೆ ಇರುಳಲಿ ಅಪ್ಪಿ ಕೊಳುವೆನು
ಥೂ....ಥೂ....ನಿದ್ರೆ ನಡೆಯಿಲ್ಲಿಂದ’’
ಹೀಗೆ ತುಂಟತನದಿಂದ ಬರೆದ ಆ ಪದ್ಯವೆ ಮೊದಲನೆಯ ಅಂತೆಯೆ ಕಡೆಯ ಪದ್ಯ ಕೂಡ. ಅಂತು ಬಿ.ಎ. ಅಭ್ಯಾಸ ಮುಗಿದು ಪದವೀಧರನಾದುದೂ ಆಯಿತು. ಮತ್ತೆ ಹಳ್ಳಿಗೇ ಹಿಂದಿರುಗಿ ಮಣ್ಣಿನ ಮಗನಾಗೇ ಬದುಕುತ್ತಿದ್ದಾಗ 1937 ರಲ್ಲಿ ಆಕಸ್ಮಿಕವಾಗಿ ನಡೆದೊಂದು ಘಟನೆ ಮತ್ತೆ ಧಾರವಾಡಕ್ಕೆ ಎಳೆದುತಂದಿತು.
ಸುಶಿಕ್ಷಿತ ರೈತನಾಗಿ ಮಣ್ಣಿನಲ್ಲೇ ದುಡಿಯುತ್ತಿದ್ದರೂ ಜೀವಕ್ಕಂಟಿ ಬಂದಿದ್ದ ಸಾಹಿತ್ಯಾಭಿಲಾಷೆ ಬತ್ತಿಹೋಗಲಿಲ್ಲ. ಅದೂ ಒಂದು ಬಗೆಯ ವ್ಯವಸಾಯವಾಗಿಯೇ ರೂಪುಗೊಳ್ಳುತ್ತಿತ್ತು. ಒಂದು ದಿನ ತಮ್ಮ ಹಳ್ಳಿಗೆ ಬಂದಿದ್ದ ಈಗ ಕನ್ನಡದ ಪ್ರಖ್ಯಾತ ಲೇಖಕರಾಗಿರುವ ಒಬ್ಬ ‘‘ಮಹಾ ಸಾಹಿತಿ’’ಯ ಕೂಡ ತಮ್ಮ ಕೃತಿಯೊಂದನ್ನು ಅಚ್ಚುಮಾಡಿಸಲು ಕಳಿಸಿಕೊಟ್ಟಾಗ ಆ ‘‘ಮಹಾಸಾಹಿತಿ’’ ಅದನ್ನು ತನ್ನ ಹೆಸರಿನಲ್ಲೆ ಅಚ್ಚು ಮಾಡಿಸಿ ಬಿಟ್ಟಿದ್ದರು. ‘ಇದು ನನ್ನ ಕತೆ’ ಎಂದು ಹೇಳಬಂದ ನಿಜವಾದ ಲೇಖಕ ಎಲ್ಲರ ಮುಂದೆ ಅಪಹಾಸ್ಯಕ್ಕೀಡಾಗಿ, ತಪ್ತನಾಗಿ ಸಂಪಾದಕರ ಮುಂದೆಯೇ ಕೂತು ತನ್ನ ಕೃತಿ-ಚೌರ್ಯ ಮಾಡಿದ ವ್ಯಕ್ತಿ, ಘಟನೆಯನ್ನೇ ಮುಖ್ಯವಾಗಿಟ್ಟುಕೊಂಡ ‘‘ಚಂದ್ರಗ್ರಹಣ’’ ಕತೆ ಬರೆದು ಕೊಟ್ಟರು. ಅದನ್ನೋದಿದ ‘‘ಜಯಂತಿ’’ ಸಂಪಾದಕ ‘‘ಆನಂದಕಂದ’’ರು ಅತ್ಯಾನಂದದಿಂದ ಅಪ್ಪಿಕೊಂಡು ಅವತ್ತಿನಿಂದಲೇ ‘ಜಯಂತಿ’ಯಲ್ಲಿ ಕೆಲಸಮಾಡಲು ಸೇರಿಸಿಕೊಂಡರು. ಅಲ್ಲಿ ಕೆಲಸಮಾಡುತ್ತಿದ್ದಾಗಲೇ ‘‘ಸಾಮ್ಯವಾದ’’ದ ಬಗೆಗೆ ಪುಸ್ತಕವೊಂದನ್ನು ಪ್ರಕಟಿಸಿದರು. ಅದನ್ನೋದಿದ ಕೌಜಲಗಿ ಹಣಮಂತರಾಯರೊಡನೆ ನಡೆದ ವಾದ ವಿವಾದದಿಂದ ಜಯಂತಿಯನ್ನು ಬಿಟ್ಟು ‘‘ಚರಕಸಂಘ’’ ಸೇರಿದರು.
ಚರಕ ಸಂಘದಲ್ಲಿ ಸುಮಾರು ಏಳು ವರ್ಷ ದುಡಿದು ದೇಶವನ್ನೆಲ್ಲ ಸುತ್ತಿ ನೂರಾರು ಬಗೆಯ ಜನರೊಡನೆ ಕೆಲಸಮಾಡಿ ಅಪೂರ್ವ ಅನುಭವವನ್ನು ಪಡೆದರು. ದೇಶಭಕ್ತಿ, ತತ್ವನಿಷ್ಠೆ, ಕಾರ್ಯ ತತ್ಪರತೆಗಳ ಮೂಲಕ ಅಂದಿನ ಮಹಾನಾಯಕರಾಗಿದ್ದ ಠಕ್ಕರ್ ಬಾಪಾ, ವೈಕುಂಠ ಮೆಹತ, ಧನವಂತಿ ರಾಮರಾವ್ ಮುಂತಾದ ಹಿರಿಯರೊಡನೆ 1943 ರ ಬಿಜಾಪುರ ಬರಗಾಲದಲ್ಲಿ ಹಗಲೂ ರಾತ್ರಿ ಹಳ್ಳಿ ಹಳ್ಳಿ ಸುತ್ತಿ ಚರಕಸಂಘದ ಮೂಲಕ ಲಕ್ಷಾಂತರ ಹಣ ಹಂಚಿ ನಿಜವಾದ ಅರ್ಥದಲ್ಲಿ ದೇಶ ಸೇವೆಮಾಡಿದರು. 1946ರಲ್ಲಿ ಚರಕಸಂಘದಿಂದ ಪತ್ರಿಕೋದ್ಯೋಗಿಗಳಾಗಿ ಧಾರವಾಡದ ಸಂಯುಕ್ತ ಕರ್ನಾಟಕ ಸೇರಿದರು. ಬಹಳ ಕಾಲ ಅಲ್ಲೆ ಕೆಲಸಗಾರರಾಗಿ, ಸಂಪಾದಕರಾಗಿ ದುಡಿದರು. ನಡುವೆ ಆಗೀಗ ಪತ್ರಿಕೋದ್ಯಮದ ಕೊಳಕಿಗೆ ಹೇಸಿ ಹಳ್ಳಿಗೆ ಹಿಂದಿರುಗಿ ಒಕ್ಕಲುತನ ಮಾಡೇ ಬದುಕ ತೊಡಗಿದರೂ ಹಣಮಂತರಾಯರಂಥ ಹಿರಿಯರ ಒತ್ತಾಯ ಸಂಯುಕ್ತ ಕರ್ನಾಟಕಕ್ಕೆ ಬಹಳಷ್ಟು ಕಾಲ ಕಟ್ಟಿಹಾಕಿತು. ಇಲ್ಲಿದ್ದಾಗಲೆ ಈಗ ರಾಷ್ಟ್ರಮಟ್ಟದ ಗೌರವಾನ್ವಿತ ‘‘ರಾಜಕೀಯ-ಸಾಹಿತಿ’’ಗಳೊಬ್ಬರು ರಾವಬಹಾದ್ದೂರರು ಬರೆದ ಎರಡು ಕೃತಿಗಳಿಗೆ ತಮ್ಮ ಹೆಸರನ್ನು ಲೇಪಿಸಿಕೊಂಡು ಲೇಖಕರಾಗಿ ಬಿಟ್ಟರು. 1960 ರ ತನಕವೂ ಪತ್ರಿಕೋದ್ಯಮಿಗಳಾಗಿಯೇ ಇದ್ದು ದೇಶದ ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯ ವಿಚಾರಗಳನ್ನು ಮೈಗೂಡಿಸಿಕೊಂಡರು.
ರಾವಬಹಾದ್ದೂರರದು ತುಂಬು ಸಂಸಾರ. ಅಣ್ಣ ತಮ್ಮಂದಿರೊಡನೆ ಇನ್ನೂ ಅವಿಭಕ್ತ ಕುಟುಂಬಿಗಳಾಗಿಯೇ ಇದ್ದಾರೆ. ಹೆಂಡತಿ ಸೀತಾಬಾಯಿ. ನಾಲ್ಕು ಜನ ಗಂಡುಮಕ್ಕಳು. ಇಬ್ಬರು ಹೆಣ್ಣು ಮಕ್ಕಳು. ಅವರನ್ನೆಲ್ಲ ಒಂದು ದಡಕ್ಕೆ ಮುಟ್ಟಿಸುವ ಸಲುವಾಗಿಯೆ ಇನ್ನೂ ಬಿಡುವಿಲ್ಲದೆ ದುಡಿಯುತ್ತಿರುವ ಈ ಕರ್ಮಯೋಗಿ ಚಿಕ್ಕಂದಿನಿಂದಲೂ ತಾನು ಕಾಣುತ್ತಿದ್ದ ಸುಧಾರಿತ ಬೇಸಾಯದ ಕನಸನ್ನು ಮೂರ್ತಗೊಳಿಸಲು ಮಣ್ಣು ಕೆಸರಿಗಿಳಿದರು. ಅವರನ್ನು ಕಂಡಾಗ, ಅವರ ಜೊತೆ ಮಾತಾಡುವಾಗ ಅವರ ತಲೆ ತುಂಬಿದ ಮಳೆ ಬೆಳೆ, ಅವರ ಕೈ ಮೈ ಮನಕ್ಕೆಲ್ಲ ಅಂಟಿದ ಅಪ್ಪಟ ರೈತತನ ಒಡೆದು ಕಾಣುತ್ತದೆ. ಅಂತೆಯೇ ಅವರ ಸಾಹಿತ್ಯಕೃಷಿಯೂ ಕೂಡ. ‘‘ನಾನೋ ಭೂಮಿಯನ್ನು ಉತ್ತು ಬಿತ್ತುವ ಕೃಷಿಕನಾಗಿ ಜೀವಿಸುವವನು. ಭೂಮಿಯಲ್ಲಿ ಬಿತ್ತಿದ ಸಸಿ ಬೆಳೆದುದನ್ನು ಕಂಡು ಸಂತಸಪಡುವವನು. ಸಾಹಿತ್ಯ ಕ್ಷೇತ್ರದಲ್ಲಿಯೂ ನನ್ನ ಸ್ಥಿತಿ ಭಿನ್ನವಲ್ಲ’’-ಹೀಗೆ ಅವರೇ ಪ್ರಬಂಧವೊಂದರಲ್ಲಿ ಹೇಳಿಕೊಂಡಿರುವುದು ಸಾಹಿತ್ಯದ ಬಗೆಗಿನ ಅವರ ಧೋರಣೆ ಸರಳ, ಮುಗ್ಧ, ಮತ್ತೆ ಅವರು ತುಂಬಾ ವೈಚಾರಿಕತೆ ಇದ್ದವರಲ್ಲವೆನಿಸಿದರೂ ಅವರದು ಜನಪದ ಸಾಹಿತ್ಯದಂಥ ಅಖಂಡ ಮನಸ್ಸಿನ ಅಭಿವ್ಯಕ್ತಿ. ಅದು ವಿಘಟಿತವಲ್ಲ. ಅಲ್ಲಿ ವಿಚಾರ ಮತ್ತು ಭಾವಗಳು ಒಂದಾಗಿಯೆ ಅಸ್ತಿತ್ವದಲ್ಲಿವೆಯಾದ್ದರಿಂದಲೇ ಜನಾಂಗವೊಂದರ ಪೂರ್ಣಪ್ರಜ್ಞೆಯೆ ‘‘ಗ್ರಾಮಾಯಣ’’ವಾಗಿ ರೂಪುಗೊಳ್ಳಲು ಕಾರಣವಾಯಿತು.
ಬಹಾದ್ದೂರರು ‘‘ಗ್ರಾಮಾಯಣ’’ದ ನಂತರ ಮೂರು ನಾಕು ಕಾದಂಬರಿಗಳನ್ನು ಬರೆದಿದ್ದರೂ ಯಾವೂ ಆ ಮಟ್ಟದವಾಗಿಲ್ಲ. ಆದರೆ ಅವರ ಬರಲಿರುವ ‘‘ಬಿತ್ತಿ ಬೆಳೆದವರು’’ ಮತ್ತು ‘‘ಬ್ರಹ್ಮಾಂಡ’’ ಬೃಹತ್ ಕಾದಂಬರಿಗಳು ಅವರ ಸೃಷ್ಟಿಶಕ್ತಿಯ ಬಗೆಗೆ ಕುತೂಹಲವನ್ನು ಕೆರಳಿಸಿವೆ. ಅಚ್ಚಾದ ‘‘ವೃಂದಾವನ’’, ‘‘ಮರೆಯದ ನೆನಹುಗಳು’’, ‘‘ಮುತ್ತು ಕಟ್ಟಿದಳು’’ ಮತ್ತು ‘‘ಧೂಮಕೇತು’’ ಅಂಥ ತೃಪ್ತಿಯನ್ನು ತಂದುಕೊಟ್ಟಿಲ್ಲ. ‘‘ಅವು ನನ್ನ ಜೀವಂತ ಸೃಷ್ಟಿಗಳಲ್ಲ’’ ಎಂದು ಹೇಳುವ ರಾವಬಹಾದ್ದೂರರು ಅತ್ಯಂತ ಸರಳ ವ್ಯಕ್ತಿ. ಅರವತ್ತರ ಗಡಿ ಮುಟ್ಟುತ್ತಿರುವ ಈ ವಾಮನ ಮೂರ್ತಿ ಅಪ್ಪಟ ಖಾದಿಧಾರಿ. ಯಾವ ಥಳಕನ್ನು ಮರೆಮೋಸವನ್ನು ಕಂಡರಿಯದ, ಬದುಕಿನುದ್ದಕ್ಕೂ ದುಡಿದೇ ಬದುಕುತ್ತೇನೆಂಬ ಛಲದ ಈ ವ್ಯಕ್ತಿಯ ಬದುಕು ಮತ್ತೆ ಮಣ್ಣಿನ ಬದುಕಾಗಿದೆ.
ಕೃಷಿಯ ಬಗ್ಗೆ, ಬರವಣಿಗೆಯ ಬಗ್ಗೆ ಕಳಕಳಿಯಿರುವಂತೆಯೆ ಕನ್ನಡ ಬೆಳೆಯಬೇಕು, ಸಮೃದ್ಧವಾಗಬೇಕೆಂಬುದರ ಬಗೆಗೂ ಅಪಾರ ಕಳಕಳಿ. ಅವರ ಅಪ್ರಕಟಿತ ‘‘ಸಾಹಿತ್ಯ-ಕರ್ನಾಟಕ’’ ಕೃತಿಯೊಳಗಿನ ಯೋಜನೆಗಳು ಕನ್ನಡದ ಉದ್ಧಾರದ ಬಗೆಗೆ ಇವರಿಗಿರುವ ಜೀವಂತ ಶ್ರದ್ಧೆಯನ್ನು ಪ್ರತಿಬಿಂಬಿಸುತ್ತವೆ.
‘‘ನಾನೋ ಭೂಮಿಯನ್ನು ಉತ್ತು ಬಿತ್ತುವ ಕೃಷಿಕನಾಗಿ ಜೀವಿಸುವವನು. ಭೂಮಿಯಲ್ಲಿ ಬಿತ್ತಿದ ಸಸಿ ಬೆಳೆದುದನ್ನು ಕಂಡು ಸಂತಸಪಡುವವನು. ಸಾಹಿತ್ಯ ಕ್ಷೇತ್ರದಲ್ಲಿಯೂ ನನ್ನ ಸ್ಥಿತಿ ಭಿನ್ನವಲ್ಲ’’-ಹೀಗೆ ರಾವಬಹಾದ್ದೂರ ಅವರೇ ಪ್ರಬಂಧವೊಂದರಲ್ಲಿ ಹೇಳಿಕೊಂಡಿರುವುದು ಸಾಹಿತ್ಯದ ಬಗೆಗಿನ ಅವರ ಧೋರಣೆ ಸರಳ, ಮುಗ್ಧ, ಮತ್ತೆ ಅವರು ತುಂಬಾ ವೈಚಾರಿಕತೆ ಇದ್ದವರಲ್ಲವೆನಿಸಿದರೂ ಅವರದು ಜನಪದ ಸಾಹಿತ್ಯದಂಥ ಅಖಂಡ ಮನಸ್ಸಿನ ಅಭಿವ್ಯಕ್ತಿ. ಅದು ವಿಘಟಿತವಲ್ಲ. ಅಲ್ಲಿ ವಿಚಾರ ಮತ್ತು ಭಾವಗಳು ಒಂದಾಗಿಯೆ ಅಸ್ತಿತ್ವದಲ್ಲಿವೆಯಾದ್ದರಿಂದಲೇ ಜನಾಂಗವೊಂದರ ಪೂರ್ಣಪ್ರಜ್ಞೆಯೆ ‘‘ಗ್ರಾಮಾಯಣ’’ವಾಗಿ ರೂಪುಗೊಳ್ಳಲು ಕಾರಣವಾಯಿತು.