ಕನ್ನಡಿಗರ ಮನಸ್ಸು ಒಂದಾಗದಿದ್ದರೆ ಏಕೀಕರಣದ ಉದ್ದೇಶ ಸಫಲವಾಗದು: ಎ.ಎನ್.ಮಹೇಶ್
ಕಸಾಪ: ಕರ್ನಾಟಕ ಏಕೀಕರಣ ವಜ್ರ ಮಹೋತ್ಸವ ಕಾರ್ಯಕ್ರಮ

ಚಿಕ್ಕಮಗಳೂರು, ಜೂ.18: ಆಂತರಿಕ ವೈರುಧ್ಯ ಮತ್ತು ಭೇದಭಾವಗಳನ್ನು ಬದಿಗೊತ್ತಿ ಕನ್ನಡಿಗರ ಮನಸ್ಸುಗಳು ಒಂದಾಗದಿದ್ದರೆ ಕರ್ನಾಟಕ ಏಕೀಕರಣದ ಉದ್ದೇಶ ಸಫಲವಾಗುವುದಿಲ್ಲ ಎಂದು ಅರಣ್ಯ ಮತ್ತು ವಸತಿ ವಿಹಾರಧಾಮಗಳ ನಿಗಮದ ಅಧ್ಯಕ್ಷ ಎ.ಎನ್.ಮಹೇಶ್ ಹೇಳಿದ್ದಾರೆ.
ಅವರು ತಾಲ್ಲೂಕು ಕಸಾಪ ನಗರ ಹೊರವಲಯದ ವಿರಕ್ತಮಠ ಬಸವಮಂದಿರದಲ್ಲಿ ಏರ್ಪಡಿಸಿದ್ದ ಕರ್ನಾಟಕ ಏಕೀಕರಣ ವಜ್ರ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕರ್ನಾಟಕ ಏಕೀಕರಣದ ಹಿಂದೆ ನಾಡಿನ ಅನೇಕ ಹಿರಿಯರ ತ್ಯಾಗ ಮತ್ತು ಮಹತ್ವಾಕಾಂಕ್ಷೆ ಇದೆ. ಏಕೀಕರಣದ ಉದ್ದೇಶ ಹರಿದು ಹಂಚಿ ಹೋಗಿದ್ದ ನಾಡಿನ ಭಾಗಗಳನ್ನು ಮತ್ತು ಕನ್ನಡಿಗರನ್ನು ಒಗ್ಗೂಡಿಸಿ ಅವರೆಲ್ಲರೂ ಒಂದಾಗಿ ಬಾಳುವಂತೆ ಮಾಡುವುದಾಗಿತ್ತು ಎಂದರು.
ಆದರೆ ದುರದೃಷ್ಠವಶಾತ್ ನಾಡು ಏಕೀಕರಣಗೊಂಡು ಆರು ದಶಕಗಳಾದರೂ ಇನ್ನೂ ನಮ್ಮ ಹಿರಿಯರ ಕನಸು ನನಸಾಗಿಲ್ಲ, ಕನ್ನಡಿಗರ ಮನಸ್ಸುಗಳು ಒಂದಾಗಿಲ್ಲ. ಒಂದು ಪ್ರಾಂತ್ಯದವರಿಗೆ ಇನ್ನೊಂದು ಭಾಗದವರನ್ನು ಕಂಡರೆ ಆಗುವುದಿಲ್ಲ. ಏಕೀಕರಣದ ಉದ್ದೇಶ ಈಡೇರಬೇಕಾದರೆ ರಾಜ್ಯದ ಎಲ್ಲಾ ಭಾಗದವರೂ ನಾವೆಲ್ಲಾ ಒಂದೇ ಎಂದು ತಿಳಿಯಬೇಕು ಕನ್ನಡಿಗರೆಲ್ಲರ ಮನಸ್ಸುಗಳು ಒಂದಾಗಬೇಕು ಈ ವಿಷಯದಲ್ಲಿ ರಾಜಕಾರಣಿಗಳಿಗೂ ಇಚ್ಚಾಶಕ್ತಿ ಬೇಕು, ನಾಡಿನ ನೆಲ, ಜಲ, ಭಾಷೆ ವಿಷಯ ಬಂದಾಗ ಅವರೆಲ್ಲರೂ ಪಕ್ಷಾತೀತವಾಗಿ ಒಂದಾಗಬೇಕು ಎಂದು ಹೇಳಿದರು.
ಹಿರಿಯ ಪತ್ರಕರ್ತ ಈಶ್ವರ ದೈತೋಟ ಕರ್ನಾಟಕ ಏಕೀಕರಣ, ಮತ್ತು ಅದರ ಆಶೋತ್ತರಗಳು ವಿಷಯ ಕುರಿತು ಉಪನ್ಯಾಸ ನೀಡಿ, ದಕ್ಷಿಣ ಅಮೇರಿಕಾ ಸೇರಿದಂತೆ ಪ್ರಪಂಚದ ಅನೇಕ ರಾಷ್ಟ್ರಗಳಲ್ಲಿ ಇಂಗ್ಲೀಷ್ ಮಾತನಾಡುವುದಿಲ್ಲ. ಅಲ್ಲಿನ ಜನ ತಮ್ಮ ಮಾತೃಭಾಷೆಯಲ್ಲೇ ವ್ಯವಹರಿಸುತ್ತಾರೆ ಆದರೆ ಕನ್ನಡಿಗರು ಮಾತ್ರ ಕನ್ನಡದಲ್ಲಿ ಮಾತನಾಡಲು ನಾಚಿಕೊಳ್ಳುತ್ತಾರೆ, ಅನ್ಯಭಾಷೆಯವರೊಂದಿಗೆ ಮಾತನಾಡುವಾಗ ಅವರ ಭಾಷೆಯಲ್ಲೇ ಮಾತನಾಡುತ್ತಾರೆ ಎಂದು ವಿಷಾದಿಸಿದರು.
ಕನ್ನಡಿಗರಾದ ನಾವೇ ಕನ್ನಡದಲ್ಲಿ ಮಾತನಾಡಲು ನಾಚಿಕೆಪಡುವುದರಿಂದಾಗಿ ಬೇರೆ ರಾಜ್ಯಗಳಿಂದ ವಲಸೆ ಬಂದು ಇಲ್ಲಿ ನೆಲೆಸಿರುವವರು ಕನ್ನಡವನ್ನು ಕಲಿಯುತ್ತಿಲ್ಲ ಎಂದ ಅವರು ಈ ವಿಷಯದಲ್ಲಿ ಕನ್ನಡಿಗರು ಆತ್ಮಾವಲೋಕನ ಮಾಡಿಕೊಳ್ಳಬೇಕು, ಕನ್ನಡದಲ್ಲೇ ವ್ಯವಹರಿಸುವ ಪಣತೊಡಬೇಕು ಆಗ ಮಾತ್ರ ಏಕೀಕರಣಕ್ಕೆ ಅರ್ಥ ಬರುತ್ತದೆ ಎಂದರು.
ಆಶೀರ್ವಚನ ನೀಡಿದ ಶ್ರೀ ಜಯಬಸವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್, ಜಿಲ್ಲಾ ಕಸಾಪ ಅಧ್ಯಕ್ಷ ಕುಂದೂರು ಅಶೋಕ್ ಮಾತನಾಡಿದರು. ತಾಲ್ಲೂಕು ಕಸಾಪ ಅಧ್ಯಕ್ಷ ಹಿರೇಮಗಳೂರು ಪುಟ್ಟಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಗಾಯಕ ಮಲ್ಲಿಗೆ ಸುಧೀರ್ ಅವರಿಂದ ಕನ್ನಡದ ಗೀತೆಗಳ ಗಾಯನ ನಡೆಯಿತು.







