ರಾಜ್ಯದಲ್ಲಿ 6914 ಮಂದಿ ‘ಎಂಡೋಸಲ್ಫಾನ್ ಪೀಡಿತರು’

ಬೆಂಗಳೂರು, ಜೂ. 18: ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಸೇರಿ ಮೂರು ಜಿಲ್ಲೆಗಳ ಹದಿನಾಲ್ಕು ತಾಲೂಕುಗಳಲ್ಲಿ ಒಟ್ಟು 6914 ಮಂದಿ ಎಂಡೋಸಲ್ಫಾನ್ ಪೀಡಿತರಿದ್ದು, ಆ ಪೈಕಿ 6089 ಮಂದಿ ರಾಜ್ಯ ಸರಕಾರದ ವತಿಯಿಂದ ಮಾಸಾಶನ ನೀಡಲಾಗುತ್ತಿದೆ.
ಅಲ್ಲದೆ, ಪ್ರತಿ ಸೋಮವಾರ ಮತ್ತು ಮಂಗಳವಾರ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಎಂಡೋಸಲ್ಫಾನ್ ಸಂತ್ರಸ್ತರನ್ನು ಗುರುತಿಸುವ ಪ್ರಕ್ರಿಯೆಯೂ ನಡೆಸಿದೆ.
ಹೈಕೋರ್ಟ್ ನಿರ್ದೇಶನದ ಹಿನ್ನೆಲೆಯಲ್ಲಿ ಶೇ.25ರಿಂದ 59ರಷ್ಟು ವಿಕಲಚೇತನರೆಂದು ಗುರುತಿಸ್ಪಟ್ಟವರಿಗೆ 1,500ರೂ.,ಮತ್ತು ಶೇ.60ಕ್ಕೂ ಮೇಲ್ಪಟ್ಟು ವಿಕಲಚೇತರೆಂದು ಗುರುತಿಸ್ಪಲಟ್ಟವರಿಗೆ 3 ಸಾವಿರ ರೂ.ಮಾಸಾಶನ ನೀಡಲಾಗುತ್ತಿದೆ.
ಶೇ.25ಕ್ಕಿಂತ ಕಡಿಮೆ ವಿಕಲಚೇತನ ಫಲಾನುಭವಿಗಳಿಗೆ ಎಲ್ಲ ರೀತಿಯ ಆರೋಗ್ಯ ಸೌಲಭ್ಯಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ಗುರುತಿಸಲಾದ ಸಂತ್ರಸ್ತರಿಗೆ ಇದೀಗ ಕಂದಾಯ ಇಲಾಖೆಯಿಂದ ಪಿಂಚಣಿ ನೀಡಲಾಗುತ್ತಿದೆ. ಈವರೆಗೂ ಗುರುತಿಸಿರುವ 6914 ಮಂದಿ ಎಂಡೋಸಲ್ಫಾನ್ ಪೀಡಿತರಿಗೆ ಗುರುತಿನ ಚೀಟಿ ವಿತರಿಸಲಾಗಿದೆ.
ಎಲ್ಲ ಸರಕಾರಿ ಆಸ್ಪತ್ರೆಗಳಲ್ಲಿ ಎಂಡೋ ಪೀಡಿತರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಕ್ಷೇತ್ರ ಭೇಟಿ ಸಂದರ್ಭದಲ್ಲಿ ಹಾಸಿಗೆ ಹಿಡಿದ ಸಂತ್ರಸ್ತರಿಗೆ ಸಂಬಂಧಪಟ್ಟ ಗ್ರಾಮದ ಆರೋಗ್ಯ ಸಹಾಯಕರು ಮನೆಗಳಿಗೆ ಭೇಟಿ ನೀಡಿ ಚಿಕಿತ್ಸೆ ನೀಡುತ್ತಿದ್ದಾರೆ. ಸಂತ್ರಸ್ತರಿಗೆ ಚಿಕಿತ್ಸೆ ನೀಡಲು ಪ್ರತಿ ತಿಂಗಳು ಖಾಸಗಿ ವೈದ್ಯಕೀಯ ವಿದ್ಯಾಲಯಗಳ ಸಹಕಾರದಲ್ಲಿ ಆರೋಗ್ಯ ತಜ್ಞರ ಶಿಬಿರಗಳ ಮೂಲಕ ಚಿಕಿತ್ಸೆ ನೀಡಲಾಗುತ್ತಿದೆ.
ಎಂಡೋಸಲ್ಫಾನ್ ಸಂತ್ರಸ್ತರಿಗೆ ವೈದ್ಯಕೀಯ ತಪಾಸಣಾ ಪುಸ್ತಕ ನೀಡಿದ್ದು, ಇದರಲ್ಲಿ ಅವರ ಆಹಾರ ಪದ್ಧತಿ ಹಾಗೂ ಸಂಬಂಧಪಟ್ಟವರು ಮಾಹಿತಿಯನ್ನು ಒದಗಿಸಲಾಗಿದೆ. ಖಾಸಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿಯೂ ಎಂಡೋ ಪೀಡಿತರಿಗೆ ಶುಲ್ಕ ರಹಿತ ಚಿಕಿತ್ಸೆಗೆ ಒಪ್ಪಂದವನ್ನು ಮಾಡಿಕೊಳ್ಳಲಾಗಿದೆ.
ದಕ್ಷಿಣ ಕನ್ನಡ: ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಆಸ್ಪತ್ರೆ-ಕಂಕನಾಡಿ, ಕೆಎಂಸಿ ಆಸ್ಪತ್ರೆ-ಮಂಗಳೂರು, ಯೆನಪೋಯ ವೈದ್ಯಕೀಯ ಕಾಲೇಜು ಆಸ್ಪತ್ರೆ ದೇರಳಕಟ್ಟೆ, ಕೆ.ಎಸ್.ಹೆಗ್ಡೆ ಚಾರಿಟೆಬಲ್ ಟ್ರಸ್ಟ್ ಆಸ್ಪತ್ರೆ ದೇರಳಕಟ್ಟೆ, ಶ್ರೀನಿವಾಸ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಮುಕ್ಕ, ಒಮೆಗಾ ಆಸ್ಪತ್ರೆ ಮಂಗಳೂರು, ಕೆವಿಜಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ-ಸುಳ್ಯ, ಎಸ್ಡಿಎಂ ಆಸ್ಪತ್ರೆ ಉಜಿರೆ, ಪುತ್ತೂರು ಸಿಟಿ ಆಸ್ಪತ್ರೆ, ತುಂಗಾ ಮನೋ ವಿಜ್ಞಾನ ಮತ್ತು ಆಪ್ತ ಸಮಾಲೋಚನಾ ಸಂಸ್ಥೆ-ಮಂಗಳೂರು. ಕಸ್ತೂರ ಬಾ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ ಮಣಿಪಾಲ ಉಡುಪಿ ಇಲ್ಲಿ ಸಂತ್ರಸ್ತರಿಗೆ ಚಿಕಿತ್ಸೆ ಕಲ್ಪಿಸಲಾಗಿದೆ.
ಪಾಲನಾ ಕೇಂದ್ರ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೊಕ್ಕಡ, ಪುತ್ತೂರು ತಾಲೂಕಿನ ಕೊಯಿಲಾದಲ್ಲಿ ದೈನಂದಿನ ಪಾಲನಾ ಕೇಂದ್ರಗಳನ್ನು ಸ್ಥಾಪಿಸಿದ್ದು, ಎಂಡೋ ಪೀಡಿತರು ಇದರ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ. ಅಲ್ಲದೆ, ಆಹಾರ ಇಲಾಖೆಯಿಂದ ಪೀಡಿತರಿಗೆ ತಲಾ 10ಕೆಜಿ ದವಸ-ಧಾನ್ಯ ವಿತರಿಸಲಾಗುತ್ತಿದೆ.
ಉಚಿತ ಬಸ್ ಪಾಸ್: ಸಾಮಾನ್ಯ ಸಾರಿಗೆ ಬಸ್ಗಳಲ್ಲಿ ಪ್ರಯಾಣಿಸಲು ಎಂಡೋಸಲ್ಫಾನ್ ಸಂತ್ರಸ್ತರಿಗೆ ಹಾಗೂ ಅವರೊಂದಿಗೆ ಪ್ರಮಾಣಿಕರು ಒಬ್ಬ ಸಹಾಯಕರಿಗೆ ಆಸ್ಪತ್ರೆಗೆ ಹೋಗಿ ಬರಲು ಕೆಎಸ್ಸಾರ್ಟಿಸಿಯಿಂದ ಉಚಿತ ಬಸ್ ಪಾಸ್ ವಿತರಿಸಲಾಗಿದೆ.
ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಎಂಡೋ ಸಲ್ಫಾನ್ ಸಂತ್ರಸ್ತರನ್ನು ತಜ್ಞ ವೈದ್ಯರ ಮಂಡಳಿಯಿಂದ ಗುರುತಿಸಿ ಜಿಲ್ಲಾ ಸಾಮಾನ್ಯ ಸಭೆಯಲ್ಲಿ ಅನುಮೋದಿಸಿ, ಮಾಸಾಶನಕ್ಕಾಗಿ ಕಂದಾಯ ಇಲಾಖೆಗೆ ಪಟ್ಟಿಯನ್ನು ಸಲ್ಲಿಸಲು ಸೂಚಿಸಲಾಗಿದೆ. ಮೇಲ್ಕಂಡ ಜಿಲ್ಲೆಗಳಲ್ಲಿ ನಿರಂತರವಾಗಿ ಗುರುತಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಆರೋಗ್ಯ ಇಲಾಖೆ ಹೇಳಿದೆ.







