ಸಚಿವ ರೈ ಬೆಂಬಲಕ್ಕೆ ನಿಂತ ಜಿಲ್ಲಾ ಕಾಂಗ್ರೆಸ್ ಘಟಕಗಳು

ಮಂಗಳೂರು, ಜೂ.20: ಕಲ್ಲಡ್ಕದಲ್ಲಿ ನಡೆದ ಅಹಿತಕರ ಘಟನೆಯ ಹಿನ್ನಲೆಯಲ್ಲಿ ಕಲ್ಲಡ್ಕ ಪ್ರಭಾಕರ್ ಭಟ್ ಸಹಿತ ಹಲವರ ಮೇಲೆ ಪ್ರಕರಣ ದಾಖಲಿಸಬೇಕು ಎಂದು ಜಿಲ್ಲಾ ಎಸ್ಪಿಗೆ ಸಚಿವ ರಮಾನಾಥ ರೈ ನೀಡಿರುವ ಸೂಚನೆ ವಿವಾದಕ್ಕೀಡಾಗುತ್ತಲೇ, ಕಾಂಗ್ರೆಸ್ ಪಕ್ಷದ ದ.ಕ.ಜಿಲ್ಲೆಯ ಎರಡು ಘಟಕಗಳು ಸಚಿವರಿಗೆ ಬೆಂಬಲ ವ್ಯಕ್ತಪಡಿಸಿವೆ.
ಮಂಗಳವಾರ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಪ್ರತ್ಯೇಕ ಸುದ್ದಿಗೋಷ್ಠಿಯನ್ನು ನಡೆಸಿದ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೋ ಮತ್ತು ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಧರಣೇಂದ್ರ ಕುಮಾರ್, ಜಿಲ್ಲೆಯಲ್ಲಿ ಶಾಂತಿ ನೆಲೆಸಬೇಕು ಎಂಬ ನಿಟ್ಟಿನಲ್ಲಿ ಸಚಿವ ರಮಾನಾಥ ರೈ ಜಿಲ್ಲಾ ಎಸ್ಪಿ ಜೊತೆ ಚರ್ಚೆ ನಡೆಸಿದ್ದಾರೆ. ಆವಾಗ ಗಲಭೆಗೆ ಕುಮ್ಮಕ್ಕು ನೀಡುವವರ ವಿರುದ್ಧ ಕ್ರಮಕೈಗೊಳ್ಳಿ ಎಂದು ಸೂಚಿಸಿದ್ದಾರೆ. ಅದನ್ನೇ ನೆಪವಾಗಿಟ್ಟುಕೊಂಡು ಮಾಧ್ಯಮ ಹಾಗು ಸಾಮಾಜಿಕ ಜಾಲತಾಣದಲ್ಲಿ ರೈ ವಿರುದ್ಧ ಅವಮಾನಿಸುವಂತಹ ಹೇಳಿಕೆ ನೀಡುತ್ತಿರುವುದು ಖಂಡನೀಯ ಎಂದರು.
ತಾಕತ್ತಿದ್ದರೆ ಶೋಭಾ ಸ್ಪರ್ಧಿಸಲಿ: ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಎಲ್ಲಿದ್ದಾರೆ ಎಂದು ಅಲ್ಲಿನ ಜನತೆ ಹುಡುಕುತ್ತಿರುವಾಗ ಶೋಭಾ ದ.ಕ.ಜಿಲ್ಲೆಗೆ ಆಗಮಿಸಿ ರೈ ವಿರುದ್ಧ ಅಪಸ್ವರ ಎತ್ತುತ್ತಿದ್ದಾರೆ. ತಾಕತ್ತಿದ್ದರೆ ಶೋಭಾ, ರೈ ವಿರುದ್ಧ ಸ್ಪರ್ಧಿಸಿ ಗೆಲ್ಲಲಿ. ಆ ಬಳಿಕ ರೈ ವಿರುದ್ಧ ಧ್ವನಿ ಎತ್ತಲಿ ಎಂದು ಶಾಲೆಟ್ ಪಿಂಟೋ ಒತ್ತಾಯಿಸಿದರು.
ಜಿಲ್ಲೆಯ ಸಂಸದ ನಳಿನ್ ಕುಮಾರ್ ಕಟೀಲ್ ಜಿಲ್ಲೆಗೆ ಬೆಂಕಿ ಕೊಡುತ್ತೇವೆ ಎಂದಿದ್ದರು. ಆದರೆ, ರೈ ಅಂತಹ ಹೇಳಿಕೆ ನೀಡಿಲ್ಲ. ಜಿಲ್ಲೆಯ ಹಿತಕ್ಕೋಸ್ಕರ ಎಸ್ಪಿ ಜೊತೆ ಕಾನೂನು ಸುವ್ಯವಸ್ಥೆಯ ಬಗ್ಗೆ ಮಾತನಾಡಿದ್ದಾರೆ. ಅಲ್ಲಿ ಮಾತನಾಡಿರುವ ಸಣ್ಣ ವಿಚಾರವನ್ನು ದೊಡ್ಡದು ಮಾಡುವುದು ಸರಿಯಲ್ಲ. ನಾಲ್ಕು ವರ್ಷದಲ್ಲಿ ಇಲ್ಲದ ಗಲಾಟೆ ಚುನಾವಣೆ ಹತ್ತಿರವಾಗುವಾಗ ಯಾಕೆ ಆಗುತ್ತಿದೆ ಎಂಬುದಕ್ಕೆ ಕಲ್ಲಡ್ಕ ಪ್ರಭಾಕರ್ ಭಟ್ ಸಹಿತ ಕೋಮುವಾದಿ ಶಕ್ತಿಗಳು ಉತ್ತರಿಸಬೇಕು ಎಂದರು.
ಕಾಂಗ್ರೆಸ್ ಎಂದೂ ಕೋಮುವಾದಿಗಳನ್ನು ಬೆಂಬಲಿಸುತ್ತಿಲ್ಲ. ಕೋಮುಪ್ರಚೋದಕ ಭಾಷಣ ಮಾಡುವವರನ್ನು ಜಿಲ್ಲೆಯಿಂದ ಗಡಿಪಾರು ಮಾಡುವುದೇ ಸೂಕ್ತ. ಓಟಿಗೋಸ್ಕರ ಹಿಂದೂ, ಮುಸ್ಲಿಂ, ಕ್ರೈಸ್ತ ಎಂದು ಪ್ರತ್ಯೇಕಿಸುವುದಕ್ಕೆ ಕಡಿವಾಣ ಹಾಕಬೇಕಿದೆ. ಮೊನ್ನೆಯ ಗಲಭೆಯ ಬಳಿಕ ಅದೆಷ್ಟೋ ಮಂದಿ ಅಮಾಯಕರು ಜೈಲು ಸೇರುವಂತಾಗಿದೆ. ಅವರ ಹೆಂಡತಿ, ಮಕ್ಕಳು ಕೋರ್ಟ್ಗೆ ಅಲೆದಾಡುವಂತಾಗಿದೆ ಎಂದು ಶಾಲೆಟ್ ಪಿಂಟೋ ಹೇಳಿದರು.
ವಿನಾಯಕ ಬಾಳಿಗ, ಹರೀಶ್ ಪೂಜಾರಿ ಕೊಲೆಯ ಬಗ್ಗೆ ಮಾತನಾಡದ ಈ ಸ್ವಯಂ ಘೋಷಿತ ಹಿಂದುತ್ವವಾದಿಗಳು ಕೆಲವು ಸೂಕ್ಷ್ಮ ಪ್ರಕರಣವನ್ನು ಕೈಗೆತ್ತಿಕೊಂಡು ಜಿಲ್ಲೆಯ ಅಶಾಂತಿ ಕದಡುತ್ತಿರುವುದು ಖಂಡನೀಯ ಎಂದರು.
ಸುದ್ದಿಗೋಷ್ಠಿಯಲ್ಲಿ ಮೇಯರ್ ಕವಿತಾ ಸನಿಲ್, ಪಕ್ಷದ ಮುಖಂಡರಾದ ಮಮತಾ ಗಟ್ಟಿ, ಅಪ್ಪಿ, ಪ್ರತಿಭಾ ಕುಳಾಯಿ, ನಾಗವೇಣಿ, ಸಬಿತಾ ಮಿಸ್ಕಿತ್, ನಮಿತಾ ಡಿ.ರಾವ್ ಮತ್ತಿತರರಿದ್ದರು.
ಹಿಂದುತ್ವದ ಮುಖವಾಡ ಧರಿಸಿದ ಕಲ್ಲಡ್ಕ ಭಟ್: ಜಿಲ್ಲೆಯ ಹಿಂದುಳಿದ ವರ್ಗಗಳ ಯುವಕರಲ್ಲಿ ಮತೀಯ ಭಾವನೆ ಕೆರಳಿಸಿ ಜಿಲ್ಲೆಯ ಅಶಾಂತಿಗೆ ಕಾರಣವಾಗುತ್ತಿರುವ ಕಲ್ಲಡ್ಕ ಪ್ರಭಾಕರ್ ಭಟ್ ಹಿಂದುತ್ವದ ಮುಖವಾಡ ಧರಿಸಿದ್ದಾರೆ. ಅಂತಹವರ ವಿರುದ್ಧ ಕಾನೂನು ಕ್ರಮಕ್ಕೆ ಸಚಿವ ರೈ ಸೂಚಿಸಿರುವುದು ಸಮರ್ಥನೀಯ ಎಂದು ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಧರಣೇಂದ್ರ ಕುಮಾರ್ ಹೇಳಿದರು.
ಪ್ರಭಾಕರ ಭಟ್ರ ಮಾತು ಕೇಳಿ ಜಿಲ್ಲೆಯ ಅನೇಕ ಹಿಂದುಳಿದ ವರ್ಗಗಳ ಯುವಕರು ಜೈಲು, ಕೋರ್ಟ್ ಅಲೆದಾಡುತ್ತಿದ್ದಾರೆ. ವಿದ್ಯಾಭ್ಯಾಸ, ಉದ್ಯೋಗದಿಂದ ವಂಚಿತರಾಗಿದ್ದಾರೆ. ಇದಕ್ಕೆ ಕಾರಣರಾದ ಪ್ರಭಾಕರ್ ಭಟ್ ವಿರುದ್ಧ ಕಾನೂನು ಕ್ರಮ ಜರಗಿಸಲೇಬೇಕು ಎಂದು ಧರಣೇಂದ್ರ ಕುಮಾರ್ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಪ್ರಥ್ವಿರಾಜ್, ಧನರಾಜ್, ಪ್ರತಿಭಾ ಕುಳಾಯಿ, ರಮಾನಂದ ವಿಟ್ಲ, ಜನಾರ್ದನ, ವಿಶ್ವಾಸ್ ದಾಸ್ ಉಪಸ್ಥಿತರಿದ್ದರು.







