ಸಂಘಟಕರ ಶೃದ್ಧೆಯಿಂದ ಯಕ್ಷಗಾನಕ್ಕೆ ಮರುಜೀವ: ಪೇಜಾವರಶ್ರೀ

ಉಡುಪಿ, ಜೂ. 21: ಯಕ್ಷಗಾನ ಕ್ಷೀಣಿಸುತ್ತಿರುವ ಸಮಯದಲ್ಲಿ ಯಕ್ಷಗಾನ ಸಂಘಟಕರು ಶ್ರದ್ಧೆಯಿಂದ ಕೆಲಸ ಮಾಡಿದ ಕಾರಣ ಇಂದು ಮತ್ತೆ ಯಕ್ಷಗಾನ ಕಲೆ ಮಿಂಚತೊಡಗಿದೆ. ಯಕ್ಷಗಾನವನ್ನು ಉಳಿಸಿ ಬೆಳೆಸುವಲ್ಲಿ ಯಕ್ಷಗಾನ ಸಂಘಟಕರ ಪಾತ್ರ ಮಹತ್ವದ್ದು ಎಂದು ಪರ್ಯಾಯ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರು ಹೇಳಿದ್ದಾರೆ.
ಪರ್ಯಾಯ ಪೇಜಾವರ ಮಠದ ಆಶ್ರಯದಲ್ಲಿ ರಾಜಾಂಗಣದಲ್ಲಿ ನಡೆದ ಬೆಳುವಾಯಿ ಶ್ರೀಯಕ್ಷದೇವ ಮಿತ್ರಕಲಾ ಮಂಡಳಿಯ ವಿಂಶತಿ ಕಲೋತ್ಸವ ಸರಣಿಯ 18ನೇ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಮೂಲತ: ಹರಿದಾಸರಾಗಿದ್ದು ಬಳಿಕ ಯಕ್ಷಗಾನ ಅರ್ಥಧಾರಿ, ಕಲಾವಿದರಾಗಿ ಮಿಂಚಿದ ‘ಸಣ್ಣ ಸಾಮಗ’ ರಾಮದಾಸ ಸಾಮಗರು ಅರ್ಥಗಾರಿಕೆಯಲ್ಲಿ ತಮ್ಮದೇ ಆದ ಹಾದಿಯನ್ನು ರೂಪಿಸಿಕೊಂಡವರು. ಪದಗಳ ಅರ್ಥವನ್ನು ಶೋಧಿಸಿ ತೋರಿಸುತ್ತಾ, ಜೊತೆಗೆ ಸಹ ಕಲಾವಿದರನ್ನೂ ಬೆಳೆಸುತ್ತ ಬಂದ ಸಾಮಗರು ಆತ್ಮ ಗೌರವನ್ನು ಕಾಯ್ದುಕೊಂಡೇ ಬಾಳಿದವರು ಎಂದರು.
ತೆಂಕು-ಬಡಗು ತಿಟ್ಟುಗಳಲ್ಲಿ ಸೀ ವೇಷಧಾರಿಯಾಗಿ ಮೆರೆದಿರುವ ಕೋಡಿ ಕೃಷ್ಣ ಗಾಣಿಗ (ಕುಷ್ಠ) ಅವರನ್ನು ಪೇಜಾವರ ಶ್ರೀಗಳು ಸಮ್ಮಾನಿಸಿ ಹರಸಿದರು. ಅಮೃತೇಶ್ವರೀ, ಮಾರಣಕಟ್ಟೆ, ರಾಜರಾಜೇಶ್ವರೀ, ಕಲಾವಿಹಾರ ಮೇಳಗಳ ಬಳಿಕ ಕಟೀಲು ಮೇಳದಲ್ಲಿ 21 ವರ್ಷ ಸೇವೆ ಸಲ್ಲಿಸಿ 1991ರಲ್ಲಿ ರಂಗದಿಂದ ನಿವೃತ್ತಿ ಹೊಂದಿದ ತಾವು ಮೂರು ದಶಕಗಳ ಕಾಲ ಮಾತ್ರ ವ್ಯವಸಾಯ ನಡೆಸಿ, ಕೋಡಿಯಲ್ಲಿ ಯಕ್ಷಗಾನದಿಂದ ಒಂದಿಷ್ಟು ದೂರದಲ್ಲಿದ್ದರೂ ತಮ್ಮನ್ನು ಸಮ್ಮಾನಿಸಿರುವುದಕ್ಕೆ ಕೃಷ್ಣ ಗಾಣಿಗರು ಸಂತಸ ವ್ಯಕ್ತಪಡಿಸಿದರು.







