ನೈತಿಕ ಹೊಣೆ ಹೊತ್ತು ಸಚಿವ ರೈ ರಾಜೀನಾಮೆ ನೀಡಲಿ: ಎಸ್ಡಿಪಿಐ ಆಗ್ರಹ
ಅಶ್ರಫ್ ಕುಟುಂಬಕ್ಕೆ ಪರಿಹಾರ ನೀಡಬೇಕು; ಸಂಘಪರಿವಾರವನ್ನು ನಿಷೇಧಿಸಲಿ

ಮಂಗಳೂರು, ಜೂ.22: ಪೊಲೀಸರು ತನ್ನ ಮಾತನ್ನು ಕೇಳುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿರುವ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ನೈತಿಕ ಹೊಣೆ ಹೊತ್ತು ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ದ.ಕ.ಜಿಲ್ಲಾ ಎಸ್ಡಿಪಿಐ ಆಗ್ರಹಿಸಿದೆ.
ಪಕ್ಷದ ಜಿಲ್ಲಾ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಮುಹಮ್ಮದ್ ತುಂಬೆ ಸಚಿವ ರೈ ಜಿಲ್ಲಾ ಎಸ್ಪಿಯನ್ನು ಪಕ್ಷದ ಕಾರ್ಯಕರ್ತರ ಸಮ್ಮುಖ ಕೂರಿಸಿ ತರಾಟೆಗೆ ತೆಗೆದುಕೊಂಡ ಕ್ರಮ ಸರಿಯಲ್ಲ. ಅಲ್ಲದೆ ಅವರ ವರ್ಗಾವಣೆ ಕೂಡ ಸಮಸ್ಯೆಗೆ ಪರಿಹಾರವಲ್ಲ. ಸಂಘಪರಿವಾರದ ಜೊತೆ ಶಾಮೀಲಾಗಿರುವ ತಳಮಟ್ಟದ ಪೊಲೀಸರನ್ನು ಮೊದಲು ಶುದ್ಧೀಕರಣ ಮಾಡಬೇಕು. ಆವಾಗಲೆ ಇಲ್ಲಿನ ಮತೀಯ ಶಕ್ತಿಗಳನ್ನು ನಿಗ್ರಹಿಸಲು ಸಾಧ್ಯ. ಆದರೆ, ಸಚಿವ ರೈಗೆ ಈ ಮತೀಯ ಶಕ್ತಿಗಳನ್ನು ಹದ್ದುಬಸ್ತಿನಲ್ಲಿಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಅವರು ರಾಜೀನಾಮೆ ನೀಡಲೇಕು ಎಂದು ಒತ್ತಾಯಿಸಿದರು.
1 ವರ್ಷದಲ್ಲಿ 6 ಕೊಲೆ:
ಕೋಮುಪ್ರಚೋದಕ ಭಾಷಣದಿಂದ ಪ್ರೇರಿತಗೊಂಡಿದ್ದರ ಪರಿಣಾಮ ಜಿಲ್ಲೆಯಲ್ಲಿ ಕಳೆದೊಂದು ವರ್ಷದಿಂದ 6 ಕೊಲೆಗಳಾಗಿವೆ. ಅದರಲ್ಲಿ ಐವರು ಮುಸ್ಲಿಮ್ ಯುವಕರಾಗಿದ್ದರೆ, ಇನ್ನೊಂದು ಪ್ರಕರಣದಲ್ಲಿ ಮುಸ್ಲಿಂ ಎಂದು ಭಾವಿಸಿ ಹರೀಶ್ ಪೂಜಾರಿಯನ್ನು ಕೊಲೆ ಮಾಡಲಾಗಿದೆ. ಅದಲ್ಲದೆ ಅನೇಕ ಕೊಲೆಯತ್ನ, ಮಸೀದಿಗಳಿಗೆ ಕಲ್ಲೆಸೆತ ಪ್ರಕರಣಗಳೂ ನಡೆದಿದೆ.
ಶೋಭಾ ಕರಂದ್ಲಾಜೆ, ಕಲ್ಲಡ್ಕ ಪ್ರಭಾಕರ್ ಭಟ್ರ ಕೋಮುಪ್ರಚೋದಕ ಭಾಷಣ, ಹೇಳಿಕೆಗಳ ಬಳಿಕವೇ ಇಂತಹ ಕೃತ್ಯ ನಡೆದಿರುವುದನ್ನು ಗಮನಿಸಬೇಕಿದೆ. ಚುನಾವಣೆ ಹತ್ತಿರ ಬರುವಾಗ ಅಶಾಂತಿ ಸೃಷ್ಟಿಸುವ ಪ್ರಕ್ರಿಯೆ ಹೆಚ್ಚುತ್ತಿದ್ದು, ಇದಕ್ಕೆ ಕಾರಣಕರ್ತರಾದ ಕಲ್ಲಡ್ಕ ಭಟ್ ಮತ್ತಿತರರನ್ನು ಬಂಧಿಸಬೇಕು. ಮೊನ್ನೆ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲಾ ಎಸ್ಪಿಯ ಬಳಿ ಕಲ್ಲಡ್ಕ ಪ್ರಭಾಕರ್ ಭಟ್ರ ಬಂಧನಕ್ಕೆ ಸೂಚನೆ ನೀಡಿದ್ದರೂ ಕೂಡ ಪೊಲೀಸ್ ಇಲಾಖೆ ಕಾನೂನು ಕ್ರಮ ಕೈಗೊಳ್ಳಲು ಮೀನಮೇಷ ಮಾಡುತ್ತಿದೆ. ಅವರ ಬಂಧನಕ್ಕಿರುವ ಅಡೆತಡೆ ಏನು? ಅವರು ದೇಶದ ಸಂವಿಧಾನ, ಕಾನೂನಿಗಿಂತ ಮಿಗಿಲೇ ಎಂದು ಇಲ್ಯಾಸ್ ಮುಹಮ್ಮದ್ ತುಂಬೆ ಪ್ರಶ್ನಿಸಿದರು.
ಅಲ್ಪಸಂಖ್ಯಾತರಲ್ಲಿ ಅಭದ್ರತೆ:
ಜಿಲ್ಲೆಯಲ್ಲಿ ಇತ್ತೀಚೆಗೆ ನಡೆಯುವ ವಿದ್ಯಮಾನದಿಂದ ಮುಸ್ಲಿಂ ಮತ್ತು ಕ್ರೈಸ್ತರಲ್ಲಿ ಅಭದ್ರತೆ ಕಾಡಿದೆ. ಕಾನೂನು, ನ್ಯಾಯದಿಂದ ಈ ಸಮುದಾಯ ವಂಚಿತವಾಗುತ್ತಿವೆ. ಸದಾ ಭಯದಿಂದ ಕಾಲ ಕಳೆಯುವ ಸನ್ನಿವೇಶ ನಿರ್ಮಾಣವಾಗಿದೆ. ಜಿಲ್ಲೆಯ ಪೊಲೀಸ್ ಇಲಾಖೆ ಪಕ್ಷಪಾತದಿಂದ ಕೂಡಿದೆ. ತಳಮಟ್ಟದ ಪೊಲೀಸರು ಸಂಘಪರಿವಾರದ ಜೊತೆ ಶಾಮೀಲಾಗಿದ್ದಾರೆ. ಮೊನ್ನೆ ಕಲ್ಲಡ್ಕದಲ್ಲಿ ಶ್ರೀರಾಮ ವಿದ್ಯಾಮಂದಿರದ ಕಡೆಯಿಂದ ಪೊಲೀಸರ ಮೇಲೆ ಕಲ್ಲೆಸೆಯಲಾಗಿದೆ. ಆದರೆ, ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ 23 ಮುಸ್ಲಿಮರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಇದು ಅಕ್ಷಮ್ಯ ಎಂದರು.
ಹೋರಾಟ ಅತ್ಯಗತ್ಯ: ಜಲೀಲ್ ಕರೋಪಾಡಿಯ ಹತ್ಯೆಯಲ್ಲಿ ನಿರ್ದಿಷ್ಟ ವ್ಯಕ್ತಿಯ ಕೈವಾಡವಿದೆ ಎಂದು ಜಲೀಲ್ನ ತಂದೆ ಉಸ್ಮಾನ್ ಕರೋಪಾಡಿ ಬಹಿರಂಗವಾಗಿ ಹೇಳಿಕೆ ನೀಡಿದ್ದರೂ ಪೊಲೀಸರು ವೌನ ವಹಿಸಿದ್ದಾರೆ. ಅಹ್ಮದ್ ಖುರೇಷಿ ಮೇಲೆ ನಡೆಸಿದ ದೌರ್ಜನ್ಯ ಪ್ರಕರಣ ಕೂಡ ಸರಿಯಾದ ದಿಕ್ಕಿನಲ್ಲಿ ಸಾಗಿಲ್ಲ. ಹಾಗಾಗಿ ಪೊಲೀಸ್ ಇಲಾಖೆಯ ವಿರುದ್ಧ ನಿರಂತರ ಕಾನೂನು ಹೋರಾಟ ಮಾಡುವ ಅಗತ್ಯವಿದೆ ಎಂದರು.
ಸಂಘ ಪರಿವಾರವನ್ನು ನಿಷೇಧಿಸಿ:
ಜಿಲ್ಲೆಯಲ್ಲಿ ಮತೀಯ ಗಲಭೆ ಸೃಷ್ಟಿಯಾಗಲು ಸಂಘ ಪರಿವಾರವೇ ಕಾರಣ. ಅದನ್ನು ಸರಕಾರ ತಕ್ಷಣ ನಿಷೇಧಿಸಬೇಕು ಎಂದು ಆಗ್ರಹಿಸಿದ ಇಲ್ಯಾಸ್ ಮುಹಮ್ಮದ್ ತುಂಬೆ, ಸಚಿವ ರಮಾನಾಥ ರೈ ಮಾತು ಮಾತಿಗೆ ಅಲ್ಪಸಂಖ್ಯಾತ ಮತ್ತು ಬಹುಸಂಖ್ಯಾತ ಕೋಮುವಾದ ಎಂಬ ಪದ ಉಚ್ಛರಿಸುತ್ತಾರೆ. ಮುಸಲ್ಮಾನರು, ಕ್ರೈಸ್ತರು ದೇಶ ಬಿಟ್ಟು ಹೋಗಿ ಎಂದು ಹಿಂದುತ್ವವಾದಿಗಳು ಹೇಳಿದಂತೆ ಯಾವನೇ ಒಬ್ಬ ಅಲ್ಪಸಂಖ್ಯಾತ ವ್ಯಕ್ತಿ ಹಿಂದೂಗಳು ದೇಶ ಬಿಟ್ಟು ಹೋಗಬೇಕು, ಹಿಂದೂಗಳ ಮೇಲೆ ದೌರ್ಜನ್ಯ ಎಸಗಬೇಕು ಎಂದು ಹೇಳಿರುವ ದಾಖಲೆ ಇದೆಯೇ? ಹಾಗಿದ್ದೂ ಅಲ್ಪಸಂಖ್ಯಾತ ಕೋಮುವಾದ ಎಂದು ಯಾವ ಆಧಾರದಲ್ಲಿ ಹೇಳಿರುವುದು ಎಂದು ಪ್ರಶ್ನಿಸಿದರಲ್ಲದೆ, ಇದು ಉಸ್ತುವಾರಿ ಸಚಿವರು ಜಿಲ್ಲೆಯ ವಾತಾವರಣವನ್ನು ಬೇರೆ ಕಡೆ ಸೆಳೆಯಲು ದಿಕ್ಕು ತಪ್ಪಿಸಲು ನಡೆಸುವ ಪ್ರಯತ್ನ ಎಂದು ಆರೋಪಿಸಿದರು.
ಅಶ್ರಫ್ ರೌಡಿಶೀಟರ್ ಅಲ್ಲ:
ಕೊಲೆಯಾದ ಕಲಾಯಿಯ ಅಶ್ರಫ್ನನ್ನು ರೌಡಿಶೀಟರ್ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಆದರೆ ಇದು ಸುಳ್ಳು. ಸಮಾಜ ಸೇವಕನಾದ ಆತನ ಮೇಲೆ ಯಾವುದೇ ಪ್ರಕರಣ ದಾಖಲಾಗಿಲ್ಲ. ಹಾಗಾಗಿ ರಾಜ್ಯ ಸರಕಾರ ಅಶ್ರಫ್ ಕುಟುಂಬಕ್ಕೆ ಪರಿಹಾರ ಧನ ನೀಡಬೇಕು, ಅಶ್ರಫ್ನನ್ನು ಹತ್ಯೆಗೈದ ಆರೋಪಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಜಿಲ್ಲಾ ಉಪಾಧ್ಯಕ್ಷ ಸಿದ್ದೀಕ್ ಪುತ್ತೂರು, ಜಿಲ್ಲಾ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ, ಜಿಲ್ಲಾ ಕೋಶಾಧಿಕಾರಿ ಇಕ್ಬಾಲ್ ಗೂಡಿನಬಳಿ, ಸುಳ್ಯ ನಗರ ಪಂಚಾಯತ್ ಸದಸ್ಯ ಉಮರ್ ಸುಳ್ಯ, ಹತ್ಯೆಗೀಡಾದ ಅಶ್ರಫ್ರ ಸಹೋದರ ಸಾದಿಕ್ ಉಪಸ್ಥಿತರಿದ್ದರು.







