ಪ್ರಾಮಾಣಿಕ ರೈತರಿಗೂ ಸಾಲಮನ್ನಾ ಸವಲತ್ತು ಸಿಗಲಿ: ಯಡಿಯೂರಪ್ಪ
ಉಡುಪಿ, ಜೂ.23: ಸಹಕಾರಿ ಸಂಸ್ಥೆಗಳಲ್ಲಿ ರೈತರು ಪಡೆದ 50,000ರೂ. ವರೆಗಿನ ಸಾಲಮನ್ನಾದ ಪ್ರಯೋಜನವನ್ನು ಮಾರ್ಚ್ ತಿಂಗಳ ನಂತರ ಸಾಲವನ್ನು ಹಿಂದಿರುಗಿಸಿದ ಪ್ರಾಮಾಣಿಕ ರೈತರಿಗೂ ಸಿಗುವಂತೆ ರಾಜ್ಯ ಸರಕಾರ ನೋಡಿಕೊಳ್ಳಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆಗ್ರಹಿಸಿದ್ದಾರೆ.
ಮುಂದಿನ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪಕ್ಷದ ಬಲವರ್ಧನೆ ಗಾಗಿ ರಾಜ್ಯ ಪ್ರವಾಸದಲ್ಲಿರುವ ಅವರು ಇಂದು ಉಡುಪಿ ಜಿಲ್ಲೆಗೆ ಆಗಮಿಸಿದ್ದು, ಕಡಿಯಾಳಿಯ ಬಿಜೆಪಿ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾ ಡುತಿದ್ದರು. ಒಂದು ತಿಂಗಳಿನಿಂದ 25 ಜಿಲ್ಲೆಗಳ ಪ್ರವಾಸ ಮುಗಿಸಿದ್ದಾಗಿ, ಎಲ್ಲಾ ಕಡೆಗಳಲ್ಲೂ ಪಕ್ಷದ ಪರವಾಗಿ ಅದ್ಭುತ ಪ್ರತಿಕ್ರಿಯೆ ಸಿಕ್ಕಿರುವುದಾಗಿ ಅವರು ಹೇಳಿದರು.
ಉಡುಪಿ ಕೃಷ್ಣ ಮಠಕ್ಕೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಭೇಟಿ ನೀಡಿದ ಸಂದರ್ಭದಲ್ಲಿ ಕರ್ತವ್ಯದ ದೃಷ್ಚಿಯಿಂದ ಬರಬೇಕಿದ್ದ ಮುಖ್ಯಮಂತ್ರಿ ಸಿದ್ಧರಾಮಯ್ಯ ಬಾರದಿರುವುದನ್ನು ಯಡಿಯೂರಪ್ಪ ಕಟುವಾಗಿ ಟೀಕಿಸಿದರು. ಈ ಬಗ್ಗೆ ಪೇಜಾವರಶ್ರೀಗಳು ಆಹ್ವಾನ ನೀಡಿ ವಿನಂತಿಸಿದರೂ, ಒಣಪ್ರತಿಷ್ಠೆ ಯನ್ನು ಪ್ರದರ್ಶಿಸಿರುವುದು ಅಕ್ಷಮ್ಯ ಅಪರಾಧ. ರಾಜ್ಯದ ಜನತೆ ಇದನ್ನು ಗಮನಿಸಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಕ್ಯಾ.ಗಣೇಶ ಕಾರ್ಣಿಕ್, ಸುನೀಲ್ ಕುಮಾರ್, ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಬಿಜೆಪಿ ನಾಯಕರಾದ ಜಯಪ್ರಕಾಶ್ ಹೆಗ್ಡೆ, ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಉದಯಕುಮಾರ ಶೆಟ್ಟಿ, ಲಾಲಾಜಿ ಮೆಂಡನ್, ಕುಮಾರ ಬಂಗಾರಪ್ಪ ಮುಂತಾದವರು ಉಪಸ್ಥಿತರಿದ್ದರು.