ಪಡಿತರ ಚೀಟಿ: ಆದಾಯ ಪ್ರಮಾಣ ಪತ್ರ ನೀಡಲು ಸಚಿವ ಖಾದರ್ ತಾಕೀತು

ಮಂಗಳೂರು, ಜೂ.24: ಬಿಪಿಎಲ್ ಕಾರ್ಡ್ ಅರ್ಜಿ ಸಲ್ಲಿಸಿರುವವರಿಗೆ ಆದಾಯ ಪ್ರಮಾಣ ಪತ್ರ ಪ್ರಮುಖ ದಾಖಲೆಯಾಗಿದೆ. ಸಂಬಂಧಪಟ್ಟ ಗ್ರಾಮಕರಣಿಕರು ಕೂಡಲೇ ಆದಾಯ ಪ್ರಮಾಣ ನೀಡಲು ಕ್ರಮ ವಹಿಸಬೇಕು ಎಂದು ಸಚಿವ ಯು.ಟಿ. ಖಾದರ್ ತಾಕೀತು ಮಾಡಿದ್ದಾರೆ.
ಶನಿವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಕಂದಾಯಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಜಾತಿ ಮತ್ತು ಆದಾಯ ಪ್ರಮಾಣಪತ್ರ ನೀಡುವುದು ಗ್ರಾಮಕರಣಿಕರ ಮೂಲ ಕರ್ತವ್ಯವಾಗಿದೆ. ಬಿಪಿಎಲ್ ಕಾರ್ಡ್ಗೆ ಫಲಾನುಭವಿಗಳು ಸಲ್ಲಿಸಿದ ಅರ್ಜಿಗಳನ್ನು ಆಹಾರ ಇಲಾಖೆಯು ಜನಸ್ನೇಹಿ ಕೇಂದ್ರಗಳಿಗೆ ರವಾನಿಸಲಿದೆ. ಸಂಬಂಧಪಟ್ಟ ಗ್ರಾಮಕರಣಿಕರು ಅವುಗಳನ್ನು ಅಲ್ಲಿಂದ ಪಡೆದು ಪರಿಶೀಲಿಸಿ ಸಲ್ಲಿಸಬೇಕು. ಪ್ರಸಕ್ತ ಬಿಪಿಎಲ್ ಕಾರ್ಡ್ ಅರ್ಜಿ ಸಲ್ಲಿಕೆ ಪ್ರಕ್ರಿಯೆಗಳನ್ನು ತೀರಾ ಸರಳೀಕರಿಸಲಾಗಿದೆ. ಫಲಾನುಭವಿ ಕುಟುಂಬದ ರೂ. 1.20ಲಕ್ಷದೊಳಗಿನ ಆದಾಯ ಪ್ರಮಾಣಪತ್ರವೇ ಪ್ರಮುಖ ಮಾನದಂಡವಾಗಿದೆ. ಇತರೆ ಮಾನದಂಡಗಳ ಬಗ್ಗೆ ಫಲಾನುಭಗಳು ಸ್ವಯಂಘೋಷಣೆಯನ್ನು ಲಿಖಿತವಾಗಿ ಸಲ್ಲಿಸಬೇಕು. ನಾಗರಿಕರಿಗೆ ಅತ್ಯಂತ ತ್ವರಿತ ಮತ್ತು ಸರಳವಾಗಿ ರೇಶನ್ ಕಾರ್ಡ್ ದೊರೆಯಬೇಕು ಎಂಬುದು ಸರಕಾರದ ಉದ್ದೇಶವಾಗಿದೆ ಎಂದು ಸಚಿವ ಖಾದರ್ ಹೇಳಿದರು.
ಸರಕಾರದ ವಿವಿಧ ಯೋಜನೆಗಳ ಸೌಲಭ್ಯ ಪಡೆಯಲು ಬಿಪಿಎಲ್ ಕಾರ್ಡ್ ಅತೀವ ಮುಖ್ಯವಾಗಿದೆ. ಬಡವರು ಚಿಕಿತ್ಸೆ ಪಡೆಯಲು ಸೇರಿದಂತೆ ಹಲವಾರು ಸೌಲಭ್ಯಗಳಿಗೆ ಇದನ್ನು ನಂಬಿಕೊಂಡಿದ್ದಾರೆ. ಗ್ರಾಮಕರಣಿಕರು ಜನರ ಪರವಾಗಿ ಕಾರ್ಯನಿರ್ವಹಿಸಬೇಕು. ಇದರಲ್ಲಿ ನಿರ್ಲಕ್ಷ್ಯ ಸಹಿಸಲಾಗದು. ಈ ನಿಟ್ಟಿನಲ್ಲಿ ಗ್ರಾಮಕರಣಿಕರು ಕೂಡಲೇ ಕಾರ್ಯಪ್ರವೃತ್ತರಾಗಿ ಬಿಪಿಎಲ್ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿರುವವರಿಗೆ ಆದಾಯ ಪ್ರಮಾಣ ಪತ್ರ ನೀಡಬೇಕು ಎಂದು ಖಾದರ್ ಸೂಚಿಸಿದರು.
ಹಲವು ವರ್ಷಗಳಿಂದ ಗೊಂದಲಕ್ಕೆ ಸಿಲುಕಿದ್ದ ಪಡಿತರ ಚೀಟಿ ವಿತರಣೆ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ರಾಜ್ಯ ಸರಕಾರ ಮುಂದಾಗಿದೆ. ಸಾರ್ವಜನಿಕರು ಈ ಅತಿಮುಖ್ಯ ಸೇವೆಗೆ ಎಲ್ಲರೂ ಕೈಜೋಡಿಸಬೇಕು ಎಂದು ಸಚಿವರು ಹೇಳಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಕೆ.ಜಿ. ಜಗದೀಶ್, ಅಪರ ಜಿಲ್ಲಾಧಿಕಾರಿ ಕುಮಾರ್, ಪುತ್ತೂರು ಉಪ ವಿಭಾಗಾಧಿಕಾರಿ ರಘುನಂದನಮೂರ್ತಿ, ತಹಶೀಲ್ದಾರರು ಉಪಸ್ಥಿತರಿದ್ದರು.







