ಅಕ್ರಮಗಳನ್ನು ತಡೆಯಲು ಸಾರ್ವಜನಿಕರು ಸಹಕಾರ ನೀಡಬೇಕು: ಅಣ್ಣಮಲೈ

ಮೂಡಿಗೆರೆ, ಜೂ.24: ಈ ದೇಶ ಬದಲಾವಣೆ ಆಗಬೇಕೆಂದರೆ ಮೊದಲು ನಮ್ಮನ್ನು ಬದಲಾವಣೆ ಮಾಡಿಕೊಳ್ಳಬೇಕು. ನಂತರ ಬೇರೆಯವರನ್ನು ಬದಲಾವಣೆ ಮಾಡುವ ಕೆಲಸ ಮಾಡಿದರೆ ತಾನಾಗಿಯೇ ಈ ದೇಶ ಪ್ರಗತಿಯತ್ತ ಸಾಗಿಸಲು ಸಾಧ್ಯವಾಗುತ್ತದೆ ಎಂದು ಎಸ್ಪಿ ಕೆ.ಅಣ್ಣಮಲೈ ತಿಳಿಸಿದರು.
ಅವರು ಶನಿವಾರ ಪಟ್ಟಣದ ಸೈಂಟ್ ಮಾರ್ಥಾಸ್ ಶಾಲಾ ಸಭಾಂಗಣದಲ್ಲಿ ಶಾಂತಿ ವ್ಯಸನ ಮುಕ್ತಿ ಕೇಂದ್ರ, ಜೆಸಿಐ ಸಂಸ್ಥೆ, ಅನಿಕೇತನ ಸಮಾಜ ಕಲ್ಯಾಣ ಕೇಂದ್ರ ಹಮ್ಮಿಕೊಂಡಿದ್ದ ವಿಶ್ವ ಮಾದಕ ವಿರೋಧಿ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಜನರ ಸೇವೆ ಮಾಡಲು ನಮ್ಮನ್ನು ಸರಕಾರ ನೇಮಕ ಮಾಡಿದೆ. ಆದರೆ ಸಾರ್ವಜನಿಕರು ಪೊಲೀಸರೊಂದಿಗೆ ಸಂಪರ್ಕ ಇಟ್ಟುಕೊಳ್ಳದೇ ಇರುವುದರಿಂದ ಪೊಲೀಸ್ ಇಲಾಖೆಯ ಮೇಲೆ ನಂಬಿಕೆ ಕಳೆದುಕೊಳ್ಳುವಂತಾಗಿದೆ ಎಂದು ಹೇಳಿದರು.
ಯಾವುದೇ ಅಕ್ರಮಗಳು ಎಲ್ಲಿ ನಡೆದರೂ ಕೂಡಲೇ 100 ಸಂಖ್ಯೆಯ ಕಂಟ್ರೋಲ್ ರೂಂ ಮತ್ತು ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರೆ ಪೊಲೀಸರು ಸ್ಪಂಧಿಸುತ್ತಾರೆ. ಇಲ್ಲವಾದರೆ ನಮ್ಮ ಗಮನಕ್ಕೆ ತನ್ನಿ ಅಂತವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಮಾದಕ ವಸ್ತುಗಳನ್ನು ಸಂಪೂರ್ಣವಾಗಿ ನಿಯಂತ್ರಿಸಲು ಯುವ ಜನಾಂಗ ಮುಂದಾಗಬೇಕಾಗಿದೆ. ಸಾರ್ವಜನಿಕ ಪ್ರದೇಶದಲ್ಲಿ ಧೂಮಪಾನ ಮಾಡುವುದು ನಿಷೇಧವಾಗಿದ್ದರೂ ನಿಯಮವನ್ನು ಗಾಳಿಗೆ ತೂರಿ ಎಲ್ಲೆಂದರಲ್ಲಿ ಧೂಮಪಾನ ಮಾಡುವುದು ಕಂಡು ಬರುತ್ತಿದೆ ಎಂದರು.
ಇದನ್ನು ಕೇವಲ ಪೊಲೀಸರು ಮಾತ್ರ ತಡೆಕಟ್ಟಬೇಕಂದು ಸುಮ್ಮನಿರಬಾರದು. ಅಕ್ರಮವನ್ನು ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಮುಂದಾಗಬೇಕು. ಎಲ್ಲೇ ಅಕ್ರಮಗಳು ನಡೆದರೂ ಅದನ್ನು ಕೂಡಲೇ ಖಂಡಿಸಿ. ಸಾಧ್ಯವಾಗದೆ ಇದ್ದರೆ ಪೊಲೀಸರ ಗಮನಕ್ಕೆ ತನ್ನಿ. ಪೊಲೀಸರೊಂದಿಗೆ ಸಾರ್ವಜನಿಕರು ನಿರಂತರವಾಗಿ ಸಂಪರ್ಕದಿಂದಿದ್ದರೆ ಸಮಾಜದಲ್ಲಿ ನಡೆಯುವ ಅಕ್ರಮಗಳನ್ನು ತಡೆಗಟ್ಟಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಅಧ್ಯಕ್ಷತೆಯನ್ನು ಸೈಂಟ್ ಮಾರ್ಥಾಸ್ ಪಿಯು ಕಾಲೇಜಿನ ಪ್ರಾಂಶುಪಾಲೆ ಸಾಹಿರಾ ವಹಿಸಿದ್ದರು.
ತಾಪಂ ಅಧ್ಯಕ್ಷ ಕೆ.ಸಿ.ರತನ್, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ನಿರ್ದೇಶಕ ಎಂ.ಎಸ್.ಅನಂತ್, ಅನಿಕೇತನ ಸಮಾಜ ಕಲ್ಯಾಣ ಕೇಂದ್ರದ ಅಧ್ಯಕ್ಷ ಮಗ್ಗಲಮಕ್ಕಿ ಗಣೇಶ್, ಶಾಂತಿ ವ್ಯಸನ ಮುಕ್ತಿ ಕೇಂದ್ರದ ಎಂ.ಎಸ್.ಮಮತಾ, ಜೆಸಿಐ ಅಧ್ಯಕ್ಷ ನಯನ ಕಣಚೂರು, ಮಾಜಿ ಅಧ್ಯಕ್ಷ ಎಂ.ಎಸ್.ಅಶೋಕ್ ಮತ್ತಿತರರಿದ್ದರು.







