ಕೇಂದ್ರದಿಂದ ಪ್ರಜಾಪ್ರಭುತ್ವ ಕಸಿಯುವ ಹುನ್ನಾರ: ಜೆ.ಸುರೇಶ್
ಉಡುಪಿ, ಜೂ.26: ಕೇಂದ್ರ ಸರಕಾರ ಜನರ ಮಧ್ಯೆ ಭ್ರಮಾಲೋಕವನ್ನು ಸೃಷ್ಟಿಸಿ ಪ್ರಜಾಪ್ರಭುತ್ವ ಹಾಗೂ ಅಭಿವ್ಯಕ್ತಿ ಸ್ವಾತಂತ್ರವನ್ನು ಕಸಿದುಕೊಳ್ಳುವ ಹುನ್ನಾರ ನಡೆಸುತಿದ್ದು, ಈ ಬಗ್ಗೆ ದೇಶದ ಜನತೆ ಜಾಗೃತರಾಗಬೇಕಾದ ಅಗತ್ಯವಿದೆ ಎಂದು ದಕ್ಷಿಣ ಮಧ್ಯ ವಲಯ ವಿಮಾ ನೌಕರರ ಒಕ್ಕೂಟದ ಜತೆ ಕಾಯದರ್ರ್ಶಿ ಜೆ.ಸುರೇಶ್ ಆರೋಪಿಸಿದ್ದಾರೆ.
ವಿಮಾ ನೌಕರರ ಸಂಘದ ಉಡುಪಿ ವಿಭಾಗದ ವತಿಯಿಂದ ಬನ್ನಂಜೆಯ ನಾರಾಯಣ ಗುರು ಸಭಾಭವನದಲ್ಲಿ ರವಿವಾರ ನಡೆದ 59ನೇ ವಿಭಾಗೀಯ ಸಮ್ಮೇಳನವನ್ನು ಉ್ಘಾಟಿಸಿ ಅವರು ಮಾತನಾಡುತಿದ್ದರು.
ಕೇಂದ್ರದಲ್ಲಿ ಎನ್ಡಿಎ ಸರಕಾರ ಆಳ್ವಿಕೆ ಬಂದ ಮೇಲೆ ಮನಸ್ಸಿಗೆ ಬಂದಂತೆ ಕಾನೂನು ಜಾರಿ ಮಾಡುತ್ತಿದೆ. ಕೇವಲ ಶ್ರೀಮಂತರಿಗೆ ಒಳಿತು ಮಾಡುವ ಯೋಜನೆ ಅನುಷ್ಠಾನವಾಗುತ್ತಿದೆ. ಬಡವರನ್ನು ನಿರ್ಲಕ್ಷಿಸಲಾಗುತ್ತಿದೆ. ದುಡಿಯುವ ವರ್ಗದವರ ಹಕ್ಕುಗಳನ್ನು ಬಲವಂತವಾಗಿ ಕಸಿಯಲಾಗುತ್ತಿದೆ ಎಂದವರು ಆರೋಪಿಸಿದರು.
ಬಂಡವಾಳ ಶಾಹಿಗಳ ಲಾಭಕ್ಕಾಗಿಯೇ ಕಾರ್ಮಿಕರಿಗಿದ್ದ ಮೂಲಭೂತ ಅವಶ್ಯಕತೆಗಳನ್ನು ಹಿಂದಕ್ಕೆ ಪಡೆಯಲಾಗುತ್ತಿದೆ. ಸರಕಾರದ ಹೊಸ ಆರ್ಥಿಕ ನೀತಿಯಿಂದ ದೇಶದ ಆರ್ಥಿಕ ಪರಿಸ್ಥಿತಿ ಚಿಂತಾಜನಕವಾಗಿದೆ. ದೇಶದಲ್ಲಿ ಉದ್ಯೋಗಾಕಾಂಕ್ಷಿಗಳು ಏರಿಕೆಯಾಗುತ್ತಲೇ ಇದ್ದಾರೆ. ಅದಕ್ಕೆ ಸರಿಯಾದ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಯಾಗುತ್ತಿಲ್ಲ. ವಿಶ್ವಮಟ್ಟದಲ್ಲಿಯೂ ಇದೇ ಸ್ಥಿತಿ ಇದೆ ಎಂದವರು ಕಳವಳ ವ್ಯಕ್ತಪಡಿಸಿದರು.
ಇಂದು ಉದ್ಯೋಗದ ನಿರೀಕ್ಷೆ ಎಷ್ಟಿದೆ ಎಂದರೆ ಉತ್ತರಪ್ರದೇಶದಲ್ಲಿ ಗುಮಾಸ್ತರ 368 ಖಾಲಿ ಹುದ್ದೆಗೆ 23 ಲಕ್ಷ ಅರ್ಜಿಗಳು ಬಂದಿದ್ದವು. ಅದರಲ್ಲಿ ಸರಿಸುಮಾರು 22 ಲಕ್ಷ ಮಂದಿ ಎಂಜಿನಿಯರ್ ಪದವೀಧರರು, 353 ಮಂದಿ ಪಿಎಚ್ಡಿ, ಉಳಿದವರು ಇತರ ಶಿಕ್ಷಣ ಹೊಂದಿದವರಾಗಿದ್ದರು ಎಂದವರು ವಿವರಿಸಿದರು.
ಭಾರತದ 42 ಸಾರ್ವಜನಿಕ ಕ್ಷೇತ್ರವನ್ನು ಖಾಸಗೀಕರಣ ಮಾಡಲು ಸರಕಾರ ಹೊರಟಿದೆ. ಶ್ರೀಮಂತರ ಆಸ್ತಿಯು ಬಡವರಿಗಿಂತ ಅದೆಷ್ಟೋ ಪಟ್ಟು ವೇಗದಲ್ಲಿ ಹೆಚ್ಚಾಗುತ್ತಿದೆ. ಬಡವರ ಹಣ ಶ್ರೀಮಂತರಲ್ಲಿ ಕ್ರೋಢೀಕರಣವಾಗುತ್ತಿದೆ ಎಂದರು.
ಅಧ್ಯಕ್ಷತೆಯನ್ನು ಸಂಘದ ಅದ್ಯಕ್ಷ ಕೆ.ವಿಶ್ವನಾಥ್ ವಹಿಸಿದ್ದರು. ಕಾರ್ಮಿಕ ಸಂಘಟನೆಯ ಜಂಟಿ ಸಮಿತಿಯ ಜಿಲ್ಲಾ ಸಂಚಾಲಕ ಅದಮಾರು ಶ್ರೀಪತಿ ಆಚಾರ್ಯ, ವಿಮಾ ಪಿಂಚಣಿದಾರರ ಸಂಘದ ಉಡುಪಿ ವಿಭಾಗದ ಪ್ರಧಾನ ಕಾರ್ಯದರ್ಶಿ ಶ್ರೀಪತಿ ಉಪಾಧ್ಯಾಯ, ವಿಮಾ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಯು.ಗುರುದತ್, ಮಹಿಳಾ ಉಪಸಮಿತಿ ಸಂಚಾಲಕಿ ಉಷಾಲತಾ ಎ.ಶೆಟ್ಟಿ ಉಪಸ್ಥಿತರಿದ್ದರು.
ಉಪಾಧ್ಯಕ್ಷ ಡೆರಿಕ್ ರೆಬೆಲ್ಲೋ ಸ್ವಾಗತಿಸಿದರು. ಯು.ಗುರುದತ್ ವಂದಿಸಿದರು. ಸಮ್ಮೇಳನದಲ್ಲಿ ಉಡುಪಿ, ದ.ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ 17 ಶಾಖೆಗಳ ಸದಸ್ಯರು ಭಾಗವಹಿಸಿದ್ದರು.