ತಾಯಿ-ಮಗು ಸೇರಿದಂತೆ ಮೂವರು ನಾಪತ್ತೆ
ಉಡುಪಿ, ಜೂ.27: ರಾಜ್ಯ ಮಹಿಳಾ ನಿಲಯದ ಅಧೀಕ್ಷಕರ ಸಂಸ್ಥೆಗೆ ಕೊಲ್ಲೂರು ಪೊಲೀಸ್ ಠಾಣೆಯ ಮುಖಾಂತರ ದಾಖಲಾಗಿದ್ದ 30 ವರ್ಷ ಪ್ರಾಯದ ಮಹಾರಾಷ್ಟ್ರ ರಾಜ್ಯದ ಸತಾರ ಜಿಲ್ಲೆಯ ಖಟಾವ್ ತಾಲೂಕಿನ ಶಿವಾಜಿ ಗುಲಾಬ್ ರಾವ್ ಘನವಟ್ ಎಂಬವರ ಪತ್ನಿ ರೂಪಾಲಿ ಹಾಗೂ ಉಡುಪಿ ಸಾಂತ್ವಾನ ಸಹಾಯವಾಣಿ ಮೂಲಕ ದಾಖಲಾಗಿದ್ದ 34 ವರ್ಷ ಪ್ರಾಯದ ಸುಶೀಲ(ಮೂಗಿ) ಹಾಗೂ ಆಕೆಯ ಒಂದು ವರ್ಷ ಪ್ರಾಯದ ಗಂಡು ಮಗು ರಾಜೇಶ್(ವಿಳಾಸ: ತೆರೆಸಾ ಸೆಲ್ದಾನ, ಅಚ್ಚಡ ಶಾಲೆ ಬಳಿ, ಸರಕಾರಿ ಗುಡ್ಡೆ ಕಟಪಾಡಿ) ಎಂಬವರು ಜೂ.25ರ ರಾತ್ರಿ 12:30ರ ಸುಮಾರಿಗೆ ಮಹಿಳಾ ನಿಲಯದ ಅಡುಗೆ ಕೋಣೆಯ ಬೀಗವನ್ನು ಒಡೆದು ಅಲ್ಲಿಂದ ತಪ್ಪಿಸಿ ಕೊಂಡು ಪರಾರಿಯಾದವರು ಈವರೆಗೆ ಹಿಂದಿರುಗಿ ಬಾರದೆ ಕಾಣೆಯಾಗಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿದೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿದೆ. ರೂಪಾಲಿ ಕುತ್ತಿಗೆಯಲ್ಲಿ ಕಪ್ಪು ಮಚ್ಚೆ ಇದ್ದು, ಗೋಧಿ ಮೈಬಣ್ಣ ಹೊಂದಿದ್ದಾರೆ. ಗುಲಾಬಿ ಬಣ್ಣದ ಸೀರೆ, ಕಾಫಿ ಕಲರ್ ಸ್ವೆಟ್ಟರ್ ಧರಿಸಿದ್ದಾರೆ. ಮರಾಠಿ ಹಾಗೂ ಹಿಂದಿ ಭಾಷೆ ಬಲ್ಲವರಾಗಿದ್ದಾರೆ.
ಸುಶೀಲ ಅವರ ಮುಖದ ಬಲಭಾಗದಲ್ಲಿ ಕಪ್ಪುಮಚ್ಚೆ ಇದ್ದು, ಎಣ್ಣೆ ಕಪ್ಪುಬಣ್ಣ ಮೈಬಣ್ಣ ಹೊಂದಿದ್ದಾರೆ. ಕಪ್ಪುಬಣ್ಣದ ನೀಲಿ ಹೂವಿನ ಸೀರೆ, ನೀಲಿ ರವಕೆ ಧರಿಸಿದ್ದಾರೆ. ತೆಲುಗು ಬಾಷೆ ಬರೆಯಬಲ್ಲವರಾಗಿದ್ದಾರೆ.ಮಗು ರಾಜೇಶ್ ಕಂದು ಬಣ್ಣದ ಟೀಶರ್ಟ್ ಧರಿಸಿದ್ದಾನೆ. ಈ ಮಹಿಳೆಯರು ಹಾಗೂ ಮಗುವಿನ ಮಾಹಿತಿ ದೊರೆತಲ್ಲಿ ಉಡುಪಿ ನಗರ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.







