2010ರಿಂದೀಚಿಗೆ ಗೋಸಂಬಂಧಿ ಹಿಂಸಾಚಾರದಲ್ಲಿ ಕೊಲ್ಲಲ್ಪಟ್ಟವರು ಎಷ್ಟು ?
ಅಂಕಿಅಂಶಗಳ ಸಹಿತ ಸಮಗ್ರ ವಿವರ

2010ರಿಂದ 2017ರವರೆಗಿನ ಸುಮಾರು ಎಂಟು ವರ್ಷಗಳಲ್ಲಿ ಈ ದೇಶದಲ್ಲಿ ನಡೆದಿರುವ ಗೋಸಂಬಂಧಿ ಹಿಂಸಾಚಾರದ ಶೇ.51ರಷ್ಟು ಪ್ರಕರಣಗಳಲ್ಲಿ ಮುಸ್ಲಿಮರು ಗುರಿಯಾಗಿದ್ದರು. ಇಂತಹ ಒಟ್ಟು 63 ಘಟನೆಗಳು ನಡೆದಿದ್ದು, ಇವುಗಳಲ್ಲಿ ಕೊಲ್ಲಲ್ಪಟ್ಟ 28 ಜನರ ಪೈಕಿ ಶೇ.86ರಷ್ಟು ಮುಸ್ಲಿಮರಾಗಿದ್ದರು ಎಂದು ಇಂಡಿಯಾ ಸ್ಪೆಂಡ್ (IndiaSpend) ತನ್ನ ವಿಶ್ಲೇಷಣಾ ವರದಿಯಲ್ಲಿ ಬಹಿರಂಗಗೊಳಿಸಿದೆ.
ಈ ದಾಳಿಗಳ ಪೈಕಿ ಶೇ.97ರಷ್ಟು ನಡೆದಿದ್ದು ಮೇ,2014ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಸರಕಾರವು ಅಧಿಕಾರಕ್ಕೆ ಬಂದ ನಂತರ ಮತ್ತು ಗೋಸಂಬಂಧಿ ಹಿಂಸಾಚಾರದ ಅರ್ಧದಷ್ಟು...63 ಪ್ರಕರಣಗಳ ಪೈಕಿ 32 ಪ್ರಕರಣಗಳು ನಡೆದಿರುವುದು ಬಿಜೆಪಿ ಆಡಳಿತವಿದ್ದ ರಾಜ್ಯಗಳಲ್ಲಿ ಎನ್ನುವುದು ಗಮನಾರ್ಹವಾಗಿದೆ.
ಹೆಚ್ಚುಕಡಿಮೆ ಎಂಟು ವರ್ಷಗಳ ಈ ಅವಧಿಯಲ್ಲಿ ಗೋಸಂಬಂಧಿ ಹಿಂಸಾಚಾರಗಳಲ್ಲಿ ಕೊಲ್ಲಲ್ಪಟ್ಟವರ ಸಂಖ್ಯೆ 28. ಈ ಪೈಕಿ 26 ಅಥವಾ ಶೇ.86ರಷ್ಟು ಜನರು ಮುಸ್ಲಿಮ ರಾಗಿದ್ದಾರೆ. ಈ ಹಿಂಸಾಚಾರಗಳಲ್ಲಿ 124 ಜನರು ಗಾಯಗೊಂಂಡಿದ್ದರು. ಅರ್ಧಕ್ಕೂ ಹೆಚ್ಚಿನ(ಶೇ.52)ದಾಳಿಗಳು ಕೇವಲ ವದಂತಿಗಳನ್ನು ಆಧರಿಸಿ ನಡೆದಿದ್ದವು.
ರಾಷ್ಟ್ರೀಯ ಅಥವಾ ರಾಜ್ಯ ಅಪರಾಧ ದತ್ತಾಂಶಗಳು ಸಾರ್ವತ್ರಿಕ ಹಿಂಸಾಚಾರದ ಲೆಕ್ಕವನ್ನು ಹೊಂದಿರುತ್ತವೆಯೇ ಹೊರತು ಗೋಸಂಬಂಧಿ ಹಿಂಸಾಚಾರಗಳ ಪ್ರತ್ಯೇಕ ಅಂಕಿಅಂಶಗಳನ್ನು ಹೊಂದಿರುವುದಿಲ್ಲ, ಹೀಗಾಗಿ ಇಂಡಿಯಾ ಸ್ಪೆಂಡ್ ಡಾಟಾಬೇಸ್ ಇಂತಹ ಹೆಚ್ಚುತ್ತಿರುವ ಹಿಂಸಾಚಾರ ಕುರಿತ ಮೊದಲ ಅಂಕಿಅಂಶಗಳಾಗಿವೆ.
2017 ಅತ್ಯಂತ ಕೆಟ್ಟ ದಾಖಲೆಯ ವರ್ಷ
2017ನೇ ಸಾಲಿನ ಮೊದಲ ಆರು ತಿಂಗಳಲ್ಲಿ 20 ಗೋ ಭಯೋತ್ಪಾದಕ ದಾಳಿಗಳು ವರದಿಯಾಗಿವೆ. ಇದು 2010ರಿಂದೀಚಿಗೆ ಇಂತಹ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಅತ್ಯಂತ ಕೆಟ್ಟ ವರ್ಷವಾಗಿದ್ದ 2017ನೇ ಸಾಲಿಗೆ(25 ಪ್ರಕರಣಗಳು) ಹೋಲಿಸಿದರೆ ಶೇ.75ರಷ್ಟು ಹೆಚ್ಚಿದೆ.
ಈ ದಾಳಿಗಳು ಗುಂಪುಗಳಿಂದ ಹತ್ಯೆ, ಗೋರಕ್ಷಕರ ದಾಳಿ, ಕೊಲೆ ಮತ್ತು ಕೊಲೆ ಯತ್ನ, ಕಿರುಕುಳ, ಹಲ್ಲೆ ಮತ್ತು ಸಾಮೂಹಿಕ ಅತ್ಯಾಚಾರಗಳನ್ನೊಳಗೊಂಡಿವೆ. ಎರಡು ದಾಳಿಗಳಲ್ಲಿ ಬಲಿಪಶುಗಳು/ಸಂತ್ರಸ್ತರನ್ನು ಸರಪಳಿಗಳಿಂದ ಬಂಧಿಸಿ,ವಿವಸ್ತ್ರಗೊಳಿಸಿ ಥಳಿಸಲಾಗಿದ್ದರೆ ಎರಡು ಪ್ರಕರಣಗಳಲ್ಲಿ ಬಲಿಪಶುಗಳನ್ನು ನೇಣಿಗೇರಿಸಲಾಗಿತ್ತು.
ಕೆಲವೊಮ್ಮೆ ಸಾಮಾಜಿಕ ಮಾಧ್ಯಮಗಳಲ್ಲಿ ಗೋಆತಂಕವಾದ ಎಂದು ಕರೆಯಲಾಗುತ್ತಿರುವ ಈ ದಾಳಿಗಳು ಭಾರತದ 29 ರಾಜ್ಯಗಳ ಪೈಕಿ 19 ರಾಜ್ಯಗಳಿಂದ ವರದಿಯಾಗಿವೆ. ಉತ್ತರ ಪ್ರದೇಶ(10), ಹರ್ಯಾಣ(9), ಗುಜರಾತ್(6), ಕರ್ನಾಟಕ(6), ಮಧ್ಯಪ್ರದೇಶ(4), ದಿಲ್ಲಿ(4) ಮತ್ತು ರಾಜಸ್ಥಾನ(4)ಗಳಲ್ಲಿ ಅತ್ಯಧಿಕ ಪ್ರಕರಣಗಳು ನಡೆದಿವೆ.
ದಕ್ಷಿಣ ಭಾರತ ಹಾಗೂ ಬಂಗಾಳ ಮತ್ತು ಒಡಿಶಾ ಸೇರಿದಂತೆ ಪೂರ್ವ ಭಾರತದಲ್ಲಿ ಇಂತಹ ದಾಳಿಗಳ ಸಂಖ್ಯೆ ಶೇ.21(63ರಲ್ಲಿ 13)ನ್ನು ಮೀರಿಲ್ಲ, ಆದರೆ ಈ ಪೈಕಿ ಹೆಚ್ಚುಕಡಿಮೆ ಅರ್ಧದಷ್ಟು ಪ್ರಕರಣಗಳು ಕರ್ನಾಟಕದಲ್ಲಿಯೇ ನಡೆದಿವೆ. 2017, ಎ.30ರಂದು ಅಸ್ಸಾಂನಲ್ಲಿ ನಡೆದಿದ್ದ ಇಬ್ಬರು ವ್ಯಕ್ತಿಗಳ ಹತ್ಯೆ ಈಶಾನ್ಯ ರಾಜ್ಯಗಳಿಂದ ವರದಿಯಾದ ಏಕೈಕ ಗೋಸಂಬಂಧಿ ಹಿಂಸಾಚಾರದ ಘಟನೆಯಾಗಿದೆ.
63 ಪ್ರಕರಣಗಳ ಪೈಕಿ ಅರ್ಧದಷ್ಟು (32) ಆಗ ಬಿಜೆಪಿ ಆಡಳಿತವಿದ್ದ ರಾಜ್ಯಗಳಲ್ಲಿ ನಡೆದಿದ್ದರೆ, ಕಾಂಗ್ರೆಸ ಆಡಳಿತವಿದ್ದ ರಾಜ್ಯಗಳಲ್ಲಿ ಎಂಟು ಪ್ರಕರಣಗಳು ನಡೆದಿವೆ.ಉಳಿದ ಪ್ರಕರಣಗಳು ಇತರ ಪಕ್ಷಗಳ ಆಡಳಿತದ ರಾಜ್ಯಗಳಿಂದ ವರದಿಯಾಗಿವೆ.
ಪ್ರತಿ ಐದರಲ್ಲೊಂದು ಅಂದರೆ 13 ಪ್ರಕರಣಗಳಲ್ಲಿ ಪೊಲೀಸರು ಬಲಿಪಶುಗಳು/ಬದುಕುಳಿದವರ ವಿರುದ್ಧವೇ ದೂರುಗಳನ್ನು ದಾಖಲಿಸಿದ್ದಾರೆ.
ಎಂಟು ವರ್ಷಗಳಲ್ಲಿ 63 ಪ್ರಕರಣಗಳ ಪೈಕಿ 61(ಶೇ.96.8) ಕೇಂದ್ರದಲ್ಲಿ ಮೋದಿ ಸರಕಾರ ಅಧಿಕಾರಕ್ಕೆ ಬಂದ ನಂತರ ನಡೆದಿವೆ.
ಶೇ.5ರಷ್ಟು ಪ್ರಕರಣಗಳಲ್ಲಿ ಯಾವುದೇ ದಾಳಿಕೋರರನ್ನು ಬಂಧಿಸಿರುವುದು ವರದಿಯಾಗಿಲ್ಲ.
23 ಪ್ರಕರಣಗಳಲ್ಲಿ ವಿಹಿಂಪ,ಬಜರಂಗ ದಳ ಮತ್ತು ಸ್ಥಳೀಯ ಗೋರಕ್ಷಾ ಸಮಿತಿಗಳಂತಹ ಹಿಂದು ಸಂಘಟನೆಗಳ ಕಾರ್ಯಕರ್ತರನ್ನೊಳಗೊಂಡ ಗುಂಪುಗಳು ದಾಳಿಗಳನ್ನು ನಡೆಸಿದ್ದವು.
2010-2017ರ ಅವಧಿಯಲ್ಲಿ ಮೊದಲ ಗೋಸಂಬಂಧಿ ಹಿಂಸಾಚಾರ 2012, ಜೂ.10ರಂದು ಪಂಜಾಬಿನ ಮಾನ್ಸಾ ಜಿಲ್ಲೆಯ ಜೋಗಾ ಪಟ್ಟಣದಲ್ಲಿ ನಡೆದಿತ್ತು.
ಒಟ್ಟು 63 ಪ್ರಕರಣಗಳ ಪೈಕಿ 33ರಲ್ಲಿ (ಶೇ.52) ಕೇವಲ ವದಂತಿಗಳನ್ನು ಆಧರಿಸಿ ದಾಳಿಗಳು ನಡೆದಿದ್ದವು. ಶೇ.8ರಷ್ಟು ಪ್ರಕರಣಗಳಲ್ಲಿ ದಾಳಿಗೊಳಗಾದವರು ದಲಿತರಾಗಿದ್ದರು. ಈ ಪೈಕಿ ಹೆಚ್ಚಿನವರು ಮೃತದನಗಳ ಕಳೇಬರಗಳನ್ನು ವಿಲೇವಾರಿಗೊಳಿಸಿ, ಅವುಗಳ ಚರ್ಮವನ್ನು ಸುಲಿಯುವ ಜೊತೆಗೆ ಗೋಮಾಂಸ ಭಕ್ಷಕರೂ ಆಗಿದ್ದರಿಂದ ದಾಳಿಗಳಿಗೆ ಗುರಿಯಾಗಿದ್ದರು. ಸಿಖ್ (ಶೇ.4.8), ಕ್ರೈಸ್ತರು(ಶೇ.1.6) ಕೂಡ ಹಿಂಸಾಚಾರದ ಗುರಿಯಾಗಿದ್ದರು. ಶೇ.20.6 ಪ್ರಕರಣಗಳಲ್ಲಿ ಬಲಿಪಶುಗಳ ಧರ್ಮ ವರದಿಯಾಗಿಲ್ಲ. ಶೇ.14.3(9)ಪ್ರಕರಣಗಳಲ್ಲಿ ಹಿಂದುಗಳು ಗುರಿಯಾಗಿದ್ದರಾದರೂ ಅವರ ಜಾತಿಗಳು ಸ್ಪಷ್ಟವಾಗಿಲ್ಲ.







