ಸಾಂಕ್ರಾಮಿಕ ರೋಗ: ಜಾಗೃತಿ ಮೂಡಿಸಲು ಜಿಲ್ಲಾಧಿಕಾರಿ ಸೂಚನೆ

ಮಡಿಕೇರಿ, ಜೂ.29: ನೀರಿನಿಂದ ಹರಡುವ ಸಾಂಕ್ರಾಮಿಕ ರೋಗಗಳ ಬಗ್ಗೆ ಜಾಗೃತಿ ಮೂಡಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಅವರು ಸೂಚನೆ ನೀಡಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುರಕ್ಷಿತ ಕುಡಿಯುವ ನೀರು ಪೂರೈಕೆ ಮತ್ತು ನೀರಿನಿಂದ ಹರಡುವ ಸಾಂಕ್ರಾಮಿಕ ರೋಗಗಳ ಕುರಿತು ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಅಶುದ್ದ ನೀರು ಕುಡಿಯುವುದರಿಂದ ಕಾಲರಾ, ಕರುಳುಬೇನೆ, ವಿಷಮಶೀತ ಜ್ವರ, ಹೈಪಾಟೈಪಿಸ್, ಜಂತುಹುಳು ಸೋಂಕು ಇತರೆ ರೋಗಗಳು ಹರಡುವ ಸಾಧ್ಯತೆ ಇದೆ. ಆದ್ದರಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯ ಎಂದು ತಿಳಿಸಿದರು.
ರೋಗ ಹರಡಲು ಕಾರಣವಾದ ನೀರಿನ ಮೂಲವನ್ನು ಪತ್ತೆ ಹಚ್ಚುವುದು, ಶುದ್ಧ ಕುಡಿಯುವ ನೀರು ಒದಗಿಸುವುದು, ಕುದಿಸಿ, ಆರಿಸಿದ ನೀರು ಮತ್ತು ಬಿಸಿಯಾದ ಆಹಾರ ಸೇವಿಸಲು ಸಾರ್ವಜನಿಕರಿಗೆ ಮಾಹಿತಿ ನೀಡುವುದು, ಶುದ್ದ ಆಹಾರ ತಯಾರಿಕೆ ಮತ್ತು ವೈಯಕ್ತಿಕ ಸ್ವಚ್ಛತಾ ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸಲು ಮಾಹಿತಿ ಶಿಕ್ಷಣ ಚಟುವಟಿಕೆ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಶಿವಕುಮಾರ್ ಅವರು ನೀರಿನ ಸುರಕ್ಷತೆ ಕಾಪಾಡಲು ಮುಂಜಾಗ್ರತಾ ಕ್ರಮ ವಹಿಸಬೇಕಿದೆ. ಕುಡಿಯುವ ನೀರಿನ ಮೂಲಗಳ ಹತ್ತಿರ ಬಳಸಿದ ನೀರು ನಿಲ್ಲದಂತೆ ವ್ಯವಸ್ಥೆ ಮಾಡುವುದು, ಬಟ್ಟೆ ಪಾತ್ರೆ ತೊಳೆದನೀರು, ಕುಡಿಯುವ ನೀರಿನ ಮೂಲಗಳಿಂದ ದೂರ ಇರುವ ಹಾಗೆ ವ್ಯವಸ್ಥೆಗೊಳಿಸುವುದು. ನೀರಿನ ಪೈಪುಗಳು ಸೋರಿಕೆಯಿದ್ದಲ್ಲಿ ತ್ವರಿತವಾಗಿ ದುರಸ್ತಿಗೊಳಿಸುವುದು, ನಿಯಮಿತವಾಗಿ ಪ್ರತೀ ಹತ್ತು ದಿನಗಳಿಗೊಮ್ಮೆ ನೀರಿನ ಟ್ಯಾಂಕ್ಗಳನ್ನು ಸ್ವಚ್ಛಗೊಳಿಸುವುದು ಹಾಗೂ ನೀರು ತುಂಬಿದ ಮೇಲೆ ಕ್ಲೋರಿನೇಷನ್ ಮಾಡುವುದು. ನೀರು ಪೂರೈಕೆ ನಲ್ಲಿಗಳು ಎತ್ತರದ ಸ್ಥಳದಲ್ಲಿ ಇರುವಂತೆ ಹಾಗೂ ಮುಚ್ಚಳವಿರುವ ನಲ್ಲಿಗಳನ್ನು ಉಪಯೋಗಿಸುವಂತೆ ಕ್ರಮ ಕೈಗೊಳ್ಳುವುದು. ಮನೆಯಲ್ಲಿ ಸಂಗ್ರಹಿಸಿದ ನೀರು ಮಕ್ಕಳಕೈಗೆ ಮತ್ತು ಸಾಕು ಪ್ರಾಣಿಗಳಿಗೆ ಎಟುಕದಂತೆ ಎತ್ತರದಲ್ಲಿರಿಸಿ, ನೀರು ತೆಗೆದುಕೊಳ್ಳಲು ಹಿಡಿಕೆ ಇರುವ ಬಟ್ಟಲನ್ನು ಉಪಯೋಗಿಸುವಂತಾಗಬೇಕು ಎಂದರು.







