ಶಾಲೆಗೆ ಹೆಸರು ತರುವ ಹೊಣೆ ವಿದ್ಯಾರ್ಥಿಗಳದ್ದು: ಪ್ರಮೋದ್
ಉಡುಪಿ, ಜೂ.29: ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಪಿಯುಸಿ ಪರೀಕ್ಷೆಯಲ್ಲಿ ಗರಿಷ್ಟ ಅಂಕ ಪಡೆದ ವಿದ್ಯಾರ್ಥಿಗಳಿಗೆ ಆಯೋಜಿಸಿದ ಸನ್ಮಾನ ಹಾಗೂ ವಿದ್ಯಾರ್ಥಿ ಸಂಘ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಶಾಲೆಗೆ ಹೆಸರು ತರುವ ಹೊಣೆ ವಿದ್ಯಾರ್ಥಿಗಳದ್ದು. ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಪಡೆಯುವ ಮೂಲಕ ಸಂಸ್ಥೆಯ ರಾಯಭಾರಿಗಳಾಗುತ್ತಾರೆ. ಅಮೂಲ್ಯವಾದ ವಿದ್ಯಾರ್ಥಿ ಜೀವನವನ್ನು ವಾಟ್ಸಾಪ್, ಫೇಸ್ಬುಕ್ನಲ್ಲಿ ಕಳೆಯದೆ ಮೌಲ್ಯಯುತ ಶಿಕ್ಷಣ ಪಡೆಯಲು ಕಷ್ಟಪಡಿ. ಕಷ್ಟಪಟ್ಟರೆ ಮುಂದೆ ಸುಖವಿದೆ. ಸಮಯದ ಬೆಲೆ ಅರಿತು ವರ್ತಿಸಿ, ವಿದ್ಯಾರ್ಥಿ ಜೀವನವನ್ನು ಓದುವುದಕ್ಕಾಗಿಯೇ ಮುಡಿಪಿಡಿ. ಯೌವ್ವನಕ್ಕೆ ಅಡಿ ಇಡುವ ಈ ಕಾಲಘಟ್ಟದಲ್ಲಿ ಶಿಕ್ಷಣದಿಂದ ದೂರ ಒಯ್ಯುವ ಯಾವುದೇ ಸೆಳೆತಗಳಿಗೆ ಒಳಗಾಗದೆ ಕಲಿಕೆಯೊಂದೆ ನಿಮ್ಮ ಗುರಿಯಾಗಲಿ ಎಂದು ಸಚಿವರು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಸರಕಾರಿ ಶಾಲೆಗಳಲ್ಲಿ ದುಡಿಯುತ್ತಿರುವ ಶಿಕ್ಷಕರೆಲ್ಲರೂ ಪ್ರತಿಭಾನ್ವಿತರು, ಮೆರಿಟ್ ಆಧಾರದಲ್ಲಿಯೇ ಆಯ್ಕೆಯಾದವರು. ಶಿಕ್ಷಕರು ಅರ್ಪಣಾಭಾವದಿಂದ ಸೇವೆ ನೀಡುವಂತಾಗಬೇಕು ಹಾಗಾದಾಗ ಮಾತ್ರ ಸರಕಾರಿ ಶಾಲೆಗಳು ಉತ್ತಮವಾಗಿರುತ್ತವೆ ಎಂದರು.
ಕಾರ್ಯಕ್ರಮದಲ್ಲಿ ನಗರಸಭಾ ಸದಸ್ಯ ಯಶಪಾಲ್ ಸುವರ್ಣ, ವಿಶ್ವನಾಥ ಬಾಯರಿ, ನಕ್ರೆ ಸುರೇಂದ್ರ ಶೆಟ್ಟಿ, ಪ್ರಕಾಶ್ ಅಂದ್ರಾದೆ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.