ಉಡುಪಿ ನಗರಸಭೆ ಘಟನೆ ಖಂಡಿಸಿ ಬಿಜೆಪಿ ಪ್ರತಿಭಟನೆ

ಉಡುಪಿ, ಜೂ.30: ಉಡುಪಿ ನಗರಸಭೆ ಸಾಮಾನ್ಯ ಸಭೆಯಲ್ಲಿ ವ್ಯಕ್ತಿಯೊಬ್ಬರನ್ನು ಹೊರದಬ್ಬಿದ ಘಟನೆಯನ್ನು ಖಂಡಿಸಿ ಬಿಜೆಪಿ ಉಡುಪಿ ನಗರ ಹಾಗೂ ಅಲ್ಪಸಂಖ್ಯಾತ ಮೋರ್ಚದ ವತಿಯಿಂದ ಶುಕ್ರವಾರ ಉಡುಪಿ ಸರ್ವಿಸ್ ಬಸ್ ನಿಲ್ದಾಣದ ಕ್ಲಾಕ್ ಟವರ್ ಎದುರು ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ, ಮಾಜಿ ಶಾಸಕ ರಘುಪತಿ ಭಟ್, ನಗರಸಭೆ ಸಾಮಾನ್ಯಸಭೆಗೆ ಪ್ರವೇಶಿಸಿದ ವ್ಯಕ್ತಿಯ ಮೇಲೆ ಒಮ್ಮೆಲೆ ದಾಳಿ ನಡೆಸಿರುವುದು ಅಮಾನವೀಯ. ಅಲ್ಪಸಂಖ್ಯಾತರ ರಕ್ಷಣೆ ಎಂದು ಅಧಿಕಾರಕ್ಕೆ ಬಂದ ಸರಕಾರ ಈಗ ಅಲ್ಪಸಂಖ್ಯಾತರ ಮೇಲೆಯೆ ದಾಳಿ ಮಾಡಿ ತಮ್ಮ ನೈಜ ಮುಖವನ್ನು ತೋರಿಸಿಕೊಟ್ಟಿದೆ.ಜಿಲ್ಲಾ ಉಸ್ತುವಾರಿ ಸಚಿವರ ಕುಮ್ಮಕ್ಕಿನಿಂದಲೇ ಈ ರೀತಿ ಘಟನೆಗಳು ನಡೆಯುತ್ತಿವೆ ಎಂದು ಅವರು ಆರೋಪಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಮಾತನಾಡಿ, ನಗರಸಭೆಯ ಇತಿಹಾಸದಲ್ಲಿಯೇ ಇದೊಂದು ಕೆಟ್ಟ ಘಟನೆಯಾಗಿದೆ. ಇಂಥ ಗೂಂಡಾ ಸದಸ್ಯರು ಉಡುಪಿ ಪ್ರಜ್ಞಾವಂತ ನಾಗರಿಕರ ಜನಪ್ರತಿನಿಧಿಗಳು ಎಂದು ಎನಿಸಿ ಕೊಳ್ಳಲು ಯೋಗ್ಯರಲ್ಲ ಎಂದು ಟೀಕಿಸಿದರು.