ಪತ್ರಕರ್ತರು ಪತ್ರಿಕಾ ಧರ್ಮದ ಇತಿಮಿತಿಯೊಳಗೆ ಕಾರ್ಯನಿರ್ವಹಿಸಲಿ : ಎ.ಕೆ.ಸುಬ್ಬಯ್ಯ ಸಲಹೆ

ಮಡಿಕೇರಿ ಜು.1: ಪತ್ರಿಕಾ ಸ್ವಾತಂತ್ರ್ಯವಿದೆ ಎನ್ನುವ ಕಾರಣಕ್ಕಾಗಿ ಏನನ್ನಾದರು ಮಾಡಿಬಿಡಬಹುದು, ಬರೆದು ಬಿಡಬಹುದು ಎಂದು ಕೊಂಡರೆ ಅದು ತಪ್ಪಾಗಿ ಬಿಡುತ್ತದೆ. ಆದ್ದರಿಂದ ಪತ್ರಕರ್ತರು ಪತ್ರಿಕಾ ಧರ್ಮದ ಇತಿಮಿತಿಯೊಳಗೆ ಪತ್ರಿಕಾ ಕ್ಷೇತ್ರದ ಹಕ್ಕನ್ನು ಚಲಾಯಿಸಬೇಕೆಂದು ವಿಧಾನ ಪರಿಷತ್ ಮಾಜಿ ಸದಸ್ಯರಾದ ಎ.ಕೆ.ಸುಬ್ಬಯ್ಯ ಸಲಹೆ ನೀಡಿದ್ದಾರೆ.
ಕೊಡಗು ಪತ್ರಕರ್ತರ ವೇದಿಕೆ, ಕೊಡಗು ಪತ್ರಿಕಾ ಭವನ ಟ್ರಸ್ಟ್, ಕೊಡಗು ಪ್ರೆಸ್ ಕ್ಲಬ್ ಮತ್ತು ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಕಾಲೇಜಿನ ಸಭಾಂಗಣದಲ್ಲಿ ನಡೆದ ಪತ್ರಿಕಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಂವಿಧಾನದ ಮೂಲಕ ಪ್ರತಿಯೊಬ್ಬ ಪ್ರಜೆಗೆ ಮೂಲಭೂತ ಹಕ್ಕುಗಳನ್ನು ನೀಡಲಾಗಿದೆ. ಅಭಿವ್ಯಕ್ತಿ ಮತ್ತು ವಾಕ್ ಸ್ವಾತಂತ್ರ್ಯದಲ್ಲಿ ಪತ್ರಿಕಾ ಸ್ವಾತಂತ್ರ್ಯ ಕೂಡ ಅಡಕವಾಗಿದ್ದು, ಮತ್ತೊಬ್ಬರ ಮಾನಹರಣವಾಗದ ರೀತಿಯಲ್ಲಿ ತಮ್ಮ ಅಭಿಪ್ರಾಯಗಳನ್ನು ಸಮಾಜಮುಖಿಯಾಗಿ ವ್ಯಕ್ತಪಡಿಸುವ ಹಕ್ಕು ಪತ್ರಿಕೆಗಳಿಗೆ ಇದೆ ಎಂದು ಸುಬ್ಬಯ್ಯ ತಿಳಿಸಿದರು.
ಸಂವಿಧಾನದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯ ಪ್ರಮುಖ ಆಧಾರ ಸ್ತಂಭಗಳನ್ನಾಗಿ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳನ್ನು ಗುರುತಿಸಲಾಗಿದೆ. ನಾಲ್ಕನೇ ಸ್ತಂಭವಾಗಿ ಪತ್ರಿಕಾ ಕ್ಷೇತ್ರವನ್ನು ಪರಿಗಣಿಸಲಾಗಿದೆ ಮತ್ತು ಮೂಲಭೂತ ಹಕ್ಕುಗಳ ಅಭಿವ್ಯಕ್ತಿ ಮತ್ತು ವಾಕ್ ಸ್ವಾತಂತ್ರ್ಯದಲ್ಲಿ ಅದು ಸೇರ್ಪಡೆಗೊಳಿಸಲಾಗಿದೆ ಎಂದರು.
ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡು ಮಾತನಾಡಿದ ಹಿರಿಯ ಪತ್ರಕರ್ತ ಹಾಗೂ ರೇಷ್ಮೆ ಮಾರಾಟ ಮಂಡಳಿಯ ಅಧ್ಯಕ್ಷರಾದ ಟಿ.ಪಿ.ರಮೇಶ್, 1884ರಲ್ಲಿ ಮೈಸೂರಿನ ರಂಗರಾವ್ ಅವರು ಶನಿವಾರಸಂತೆಯಲ್ಲಿ ಕೊಡಗಿನ ಪ್ರಪ್ರಥಮ ಪತ್ರಿಕೆ ಕೊಡಗು ಚಂದ್ರಿಕೆ ಪತ್ರಿಕೆಯನ್ನು ಆರಂಭಿಸಿ ಇಂದಿಗೆ 133 ವರ್ಷಗಳು ಸಂದಿದೆಯೆಂದು ಜಿಲ್ಲೆಯ ಪತ್ರಿಕಾ ಕ್ಷೇತ್ರದತ್ತ ಬೆಳಕು ಚೆಲ್ಲಿದರು.
ಪತ್ರಿಕಾ ದಿನಾಚರಣೆ ಎನ್ನುವುದು ಮಾಧ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವವರು ತಮ್ಮಲ್ಲಿನ ತಪ್ಪು ಒಪ್ಪುಗಳನ್ನು ವಿಮರ್ಶಿಸಿಕೊಳ್ಳುವ ದಿನವಾಗಿದೆ. ಬದಲಾಗುತ್ತಿರುವ ಸಾಮಾಜಿಕ ಪರಿಸ್ಥಿತಿಗಳ ನಡುವೆ ಪತ್ರಿಕಾ ಕ್ಷೇತ್ರ ಸಾಕಷ್ಟು ಬೆಳೆದಿದ್ದು, ಇಂದಿನ ಸ್ಪರ್ಧಾತ್ಮಕ ವಾತಾವರಣದಲ್ಲಿ ವೇಗವಾಗಿ ಸುದ್ದಿ ಮುಟ್ಟಿಸುವ ತರಾತುರಿಯಲ್ಲಿ ತಮ್ಮ ತನವನ್ನು ಕಳೆದುಕೊಳ್ಳದಿರಿ ಎಂದು ಕಿವಿಮಾತು ಹೇಳಿದರು.
ಒತ್ತಡ ಮತ್ತು ಆಮಿಷಗಳಿಗೆ ಪತ್ರಕರ್ತರು ಬಲಿಯಾಗದೆ, ಸಮಾಜದಲ್ಲಿ ಸಂಘರ್ಷಕ್ಕೆ ಎಡೆಮಾಡಿಕೊಡುವ ವರದಿಗಳನ್ನು ಬಿಟ್ಟು ಸತ್ಯಕ್ಕೆ ಸಮೀಪವಾದ ವರದಿಗಳನ್ನು ನೀಡುವುದು ಅಗತ್ಯವಾಗಿದೆ. ಪತ್ರಿಕೆಗಳು ಸಮಾಜದ ಕನ್ನಡಿಯಂತೆ ಕಾರ್ಯನಿರ್ವಹಿಸುವಂತಾಗಬೇಕು ಎಂದು ರಮೇಶ್ ಹೇಳಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕಾಲೇಜಿನ ಪ್ರಾಂಶುಪಾಲರಾದ ಪಾರ್ವತಿ ಅಪ್ಪಯ್ಯ ಮಾತನಾಡಿ, ಪತ್ರಿಕಾ ಸ್ವಾತಂತ್ರ್ಯಕ್ಕೆ ಧಕ್ಕೆ ಬಂದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟಾದಂತೆ. ಸಮಾಜದ ಲೋಪ ದೋಷಗಳನ್ನು ತೋರಿಸಿಕೊಟ್ಟು ಅದನ್ನು ಸರಿಪಡಿಸುವ ನಿಟ್ಟಿನಲ್ಲಿ ಪತ್ರಿಕೆಗಳು ಪ್ರಜಾಪ್ರಭುತ್ವ ವ್ಯವಸ್ಥೆಗೆ ಅತ್ಯಂತ ಅನಿವಾರ್ಯವೆಂದರು.
ಭಾಷಣದಲ್ಲಿ ವರ್ಷಾ ಪ್ರಥಮ
ಪತ್ರಿಕಾ ದಿನಾಚರಣೆಯ ಅಂಗವಾಗಿ ನೋಟಿನ ಅಪಮೌಲ್ಯೀಕರಣದಿಂದ ದೇಶದ ಮೇಲೆ ಉಂಟಾದ ಪರಿಣಾಮ ವಿಷಯದ ಕುರಿತು ಆಯೋಜಿತ ಭಾಷಣ ಸ್ಪರ್ಧೆಯಲ್ಲಿ ಮಡಿಕೇರಿ ಎಫ್ಎಂಕೆಂಸಿ ಕಾಲೇಜಿನ ವರ್ಷಾ ಟಿ.ಆರ್. ಪ್ರಥಮ, ವೀರಾಜಪೆೇಟೆ ಕಾವೇರಿ ಕಾಳೇಜಿನ ಗಗನ್ ಎಂ.ಜಿ. ದ್ವಿತೀಯ ಮತ್ತು ಅದೇ ಕಾಲೇಜಿನ ತಪ್ಸೀನ ತೃತೀಯ ಸ್ಥಾನವನ್ನು ಪಡೆದುಕೊಂಡರು.
ಕೊಡಗು ಪತ್ರಿಕಾ ಭವನ ಟ್ರಸ್ಟ್ನ ಮ್ಯಾನೇಜಿಂಗ್ ಟ್ರಸ್ಟಿ ಬಿ.ಎನ್. ಮನುಶೆಣೈ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೊಡಗು ಪ್ರೆಸ್ಕ್ಲಬ್ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್ ಉಪಸ್ಥಿತರಿದ್ದರು. ಕೊಡಗು ಪತ್ರಕರ್ತರ ವೇದಿಕೆ ಅಧ್ಯಕ್ಷ ಶ್ರೀಧರ ನೆಲ್ಲಿತ್ತಾಯ ಸ್ವಾಗತಿಸಿ, ಮಧೋಷ್ ಪೂವಯ್ಯ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿ ಶ್ವೇತ ವಂದಿಸಿದರು.







