ಸರಗಳ್ಳನ ಬೆನ್ನಟ್ಟಿ ಹಿಡಿದು ಪೊಲೀಸರಿಗೆ ಒಪ್ಪಿಸಿದ ಮಹಿಳೆ
ಮಂಡ್ಯ, ಜು.1: ಸರ ಕಸಿದುಕೊಂಡು ಪರಾರಿಯಾಗುತ್ತಿದ್ದ ಕಳ್ಳನನ್ನು ಮಹಿಳೆಯೇ ಬೆನ್ನಟ್ಟಿ ಪೊಲೀಸರಿಗೆ ಒಪ್ಪಿಸಿದ ಘಟನೆ ಶ್ರೀರಂಗಪಟ್ಟಣದ ನಿಮಿಷಾಂಭ ದೇವಾಲಯದ ಬಳಿ ಶನಿವಾರ ಮಧ್ಯಾಹ್ನ ನಡೆದಿದೆ. ಬೆಂಗಳೂರಿನ ಮಹಾಲಕ್ಷ್ಮಿಪುರಂನ ನಿವಾಸಿ ನವ್ಯ ಈ ದಿಟ್ಟತನ ತೋರಿದ ಮಹಿಳೆಯಾಗಿದ್ದು, ಕಳ್ಳತನ ಮಾಡಲು ಯತ್ನಿಸಿದ ಪಾಂಡವಪುರ ತಾಲೂಕಿನ ಸೆಣಬ ಗ್ರಾಮದ ರಾಜು ಅವರ ಪುತ್ರ ನವೀನ್ಕುಮಾರ್ ಪೊಲೀಸರ ಅತಿಥಿಯಾಗಿದ್ದಾನೆ.
ನವ್ಯ ಮತ್ತು ಸುರೇಶ್ ದಂಪತಿ ಸೇರಿದಂತೆ 4 ಮಂದಿ ಬೆಂಗಳೂರಿನಿಂದ ನಿಮಿಷಾಂಭ ದೇವಾಲಯಕ್ಕೆ ಆಗಮಿಸಿದ್ದರು. ನವ್ಯ ದೇವಾಲಯದ ಒಳ ಪ್ರವೇಶ ಮಾಡದೇ ಕಾರಿನಲ್ಲೆ ಉಳಿದು ಕೊಂಡಿದ್ದರು ಎನ್ನಲಾಗಿದೆ.
ಈ ಸಂದರ್ಭದಲ್ಲಿ ನವೀನ್ ಕುಮಾರ್ ಕಾರಿನಲ್ಲಿದ್ದ ಸಾಕು ನಾಯಿಯನ್ನು ನೋಡುವ ನೆಪಮಾಡಿಕೊಂಡು ಕಾರಿನಲ್ಲಿದ್ದ ನವ್ಯ ಅವರ ಬಳಿ ಮಾತನಾಡುತ್ತಾ, ಆಕೆಯ ಗುತ್ತಿಗೆಗೆ ಕೈಹಾಕಿ 80 ಗ್ರಾಂ ತೂಗುವ ಮಾಂಗಲ್ಯಸರ ಹಾಗೂ ಮತ್ತೊಂದು ಸಣ್ಣ ಸರವನ್ನು ಕಿತ್ತು ಪರಾರಿಯಾಗಲು ಯತ್ನಿಸಿದ್ದಾನೆ.
ಈ ವೇಳೆ ಸಮಯ ಪ್ರಜ್ಞೆ ಮೆರೆದ ನವ್ಯ ಕೂಡಲೇ ಕಾರಿನಿಂದ ಇಳಿದು ಕಳ್ಳನನ್ನು ಹಿಡಿದು, ಸಹಾಯಕ್ಕಾಗಿ ಜೋರಾಗಿ ಕಿರುಚಿಕೊಂಡಿದ್ದಾರೆ. ಅಲ್ಲಿ ನೆರೆದಿದ್ದ ಸ್ಥಳೀಯರು ಮಹಿಳೆಯ ಸಹಾಯಕ್ಕೆ ಬಂದು ಕಳ್ಳನನ್ನು ವಶಕ್ಕೆ ಪಡೆದು ಪೊಲೀಸರಿಗೆ ಒಪ್ಪಿಸಿದರು.
ಈ ಸಂಬಂಧ ಶ್ರೀರಂಗಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.





