ಅನುಮತಿ ಇಲ್ಲದ ಮದ್ಯದಂಗಡಿಯನ್ನು ಮುಚ್ಚಿಸಿದ ಮಹಿಳೆಯರು

ಮಡಿಕೇರಿ ಜು.1: ಜನವಸತಿ ಪ್ರದೇಶದಲ್ಲಿ ದಿಢೀರಾಗಿ ತಲೆ ಎತ್ತಿದ ಮದ್ಯದಂಗಡಿಯನ್ನು ಮಹಿಳೆಯರೇ ಮುಚ್ಚಿಸಿದ ಪ್ರಸಂಗ ಸಿದ್ದಾಪುರ ಸಮೀಪ ಪಾಲಿಬೆಟ್ಟ ರಸ್ತೆಯ ಸುಣ್ಣದ ಗೂಡು ಎಂಬಲ್ಲಿ ನಡೆದಿದೆ.
ಸರ್ವೋಚ್ಛನ್ಯಾಯಾಲಯದ ಆದೇಶದನ್ವಯ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿ ಬದಿಯ ಮದ್ಯದಂಗಡಿಗಳಿಗೆ ಅಬಕಾರಿ ಇಲಾಖೆ ಬೀಗ ಜಡಿದ ಹಿನ್ನೆಲೆಯಲ್ಲಿ ಸಿದ್ದಾಪುರದ ಮುಖ್ಯ ರಸ್ತೆಯಲ್ಲಿದ್ದ ಮದ್ಯದಂಗಡಿಯೊಂದು ಶನಿವಾರ ಬೆಳಗ್ಗೆ ದಿಢೀರ್ ಆಗಿ ಸುಣ್ಣದ ಗೂಡು ಎಂಬಲ್ಲಿಗೆ ಸ್ಥಳಾಂತರಗೊಂಡಿತು.
ಆಕ್ರೋಶಗೊಂಡ ಸ್ಥಳೀಯ ಮಹಿಳೆಯರು ಸಿದ್ದಾಪುರ ಗ್ರಾಮ ಪಂಚಾಯತ್ಗೆ ದೂರು ಸಲ್ಲಿಸಿದ್ದಾರೆ. ಆದರೆ ಪಂಚಾಯತಿಯಂದ ಯಾರೂ ಬಾರದ ಹಿನ್ನೆಲೆಯಲ್ಲಿ ತಾವೇ ಅಂಗಡಿಯನ್ನು ಮುಚ್ಚಿಸಿದ್ದಾರೆ. ಸುಣ್ಣದ ಗೂಡಿನಲ್ಲಿ ಮದ್ಯದಂಗಡಿ ತೆರೆಯಲು ಯಾವುದೇ ಅನುಮತಿ ಪಡೆದುಕೊಂಡಿರಲಿಲ್ಲ.
ಸ್ಥಳೀಯರು ಹಾಗೂ ವಾರ್ಡ್ ಸದಸ್ಯರು ಮದ್ಯದಂಗಡಿ ತೆರೆಯಲು ವಿರೋಧ ವ್ಯಕ್ತಪಡಿಸಿದ್ದರಿಂದಾಗಿ ನಿರಾಪೇಕ್ಷಣಾ ಪತ್ರವನ್ನು ಸಹ ನೀಡಿರಲಿಲ್ಲವೆನ್ನಲಾಗಿದೆ.
ಆದರೆ ಶನಿವಾರ ದಿಢೀರ್ ಆಗಿ ಮದ್ಯದಂಗಡಿ ತೆರೆದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಯಿತು. ಸುಣ್ಣದಗೂಡಿನಲ್ಲಿ ಹೆಚ್ಚಾಗಿ ಕಾರ್ಮಿಕರೇ ವಾಸಿಸುತ್ತಿದ್ದು, ಅಷ್ಟೇ ಅಲ್ಲದೇ ಇದೀಗ ಆರಂಭವಾಗಿರುವ ಮದ್ಯದಂಗಡಿ ಸಮೀಪದಲ್ಲೇ ಕುಡಿಯುವ ನೀರಿನ ಬಾವಿಯೊಂದಿದೆ. ಮದ್ಯಪ್ರಿಯರು ಈ ಬಾವಿಯ ಸಮೀಪದಲ್ಲೇ ಅಶುಚಿತ್ವದ ವಾತಾವರಣವನ್ನು ಸೃಷ್ಟಿಸಲಿದ್ದಾರೆ. ಅಲ್ಲದೆ ಕಿರಿದಾದ ರಸ್ತೆಯಲ್ಲಿ ವಾಹನ ದಟ್ಟಣೆಯಿಂದ ಅಪಘಾತಗಳು ಹೆಚ್ಚಾಗುವುದರಿಂದ ಯಾವುದೇ ಕಾರಣಕ್ಕೂ ಇಲ್ಲಿ ಮದ್ಯದಂಗಡಿ ತೆರೆಯಲು ಅವಕಾಶ ನೀಡಬಾರದೆಂದು ಸ್ಥಳೀಯರು ಒತ್ತಾಯಿಸಿದರು.ಮತ್ತೆ ಮದ್ಯದಂಗಡಿಯನ್ನು ತೆರೆದರೆ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದರು.







