ಶ್ರೀಕಾಂತ್, ಗೋಪಿಚಂದ್ಗೆ ಕ್ರೀಡಾ ಸಚಿವರಿಂದ ಗೌರವ

ಹೊಸದಿಲ್ಲಿ, ಜು.1: ಇತ್ತೀಚೆಗಿನ ದಿನಗಳಲ್ಲಿ ಭಾರತೀಯ ಬ್ಯಾಡ್ಮಿಂಟನ್ ಆಟಗಾರರು ಶ್ರೇಷ್ಠ ಪ್ರದರ್ಶನ ನೀಡುತ್ತಿದ್ದು, ಈ ಹಿನ್ನೆಲೆಯಲ್ಲಿ ಕ್ರೀಡಾ ಸಚಿವರಾದ ವಿಜಯ್ ಗೊಯೆಲ್ ಶನಿವಾರ ಮುಖ್ಯ ಕೋಚ್ ಗೋಪಿಚಂದ್ ಹಾಗೂ ಸ್ಟಾರ್ ಶಟ್ಲರ್ ಕೆ. ಶ್ರೀಕಾಂತ್ರನ್ನು ಗೌರವಿಸಿದ್ದಾರೆ.
ಇಂಡೋನೇಷ್ಯ ಹಾಗೂ ಆಸ್ಟ್ರೇಲಿಯನ್ ಓಪನ್ನಲ್ಲಿ ಸತತ ಟ್ರೋಫಿಗಳನ್ನು ಜಯಿಸಿದ್ದ ಶ್ರೀಕಾಂತ್ ಹಾಗೂ ಕೋಚ್ ಗೋಪಿಚಂದ್ರನ್ನು ಕ್ರೀಡಾ ಸಚಿವರು ತನ್ನ ನಿವಾಸದಲ್ಲಿ ಭೇಟಿಯಾದರು.
ಶ್ರೀಕಾಂತ್ ಇತ್ತೀಚೆಗೆ ಎರಡು ದೊಡ್ಡ ಟೂರ್ನಿಗಳಲ್ಲಿ ಚಾಂಪಿಯನ್ ಆಗಿದ್ದಾರೆ. ಈ ಗೆಲುವಿನ ಶ್ರೇಯಸ್ಸು ಗೋಪಿಚಂದ್ಗೆ ಸಲ್ಲಬೇಕಾಗಿದೆ. ನಾನು ಅವರ ಅಕಾಡೆಮಿಯನ್ನು ನೋಡಿದ್ದು, ಶ್ರೀಕಾಂತ್ರಂತಹ ಹಲವು ಪ್ರತಿಭೆಗಳು ಅಲ್ಲಿ ತರಬೇತಿ ನಡೆಸುತ್ತಿದ್ದಾರೆ. ಶ್ರೀಕಾಂತ್ ಬಾಲ್ಯದಲ್ಲೇ ಬ್ಯಾಡ್ಮಿಂಟನ್ ಆಡಲು ಆರಂಭಿಸಿದ್ದು ಅವರ ಹೆತ್ತವರು ಅವರನ್ನು ಗೋಪಿಚಂದ್ ಅಕಾಡಮಿಗೆ ಸೇರಿಸಿದ್ದರು. ಅವರ ಯಶಸ್ಸು ಕಠಿಣ ಪರಿಶ್ರಮದ ಪ್ರತಿಫಲವಾಗಿದೆ ಎಂದು ಸುದ್ದಿಗಾರರಿಗೆ ಗೊಯೆಲ್ ತಿಳಿಸಿದ್ದಾರೆ.
Next Story





