ಜು.8ರಿಂದ ಸಾವಯವ-ಸಿರಿಧಾನ್ಯ ಮೇಳ
ಬೆಂಗಳೂರು, ಜು. 5: ಬಿಬಿಎಂಪಿ ವ್ಯಾಪ್ತಿಯಲ್ಲಿ ಸಾವಯವ ಉತ್ಪನ್ನಗಳ ಹಾಗೂ ಸಿರಿಧಾನ್ಯಗಳ ಬಗ್ಗೆ ಗ್ರಾಹಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಕೃಷಿ ಇಲಾಖೆ ಜೈವಿಕ್ ಕೃಷಿಕ್ ಸೋಸೈಟಿ ಆಶ್ರಯದಲ್ಲಿ ಜು.8 ಮತ್ತು 9ರಂದು ನಾಗರಬಾವಿ ಮೈದಾನದಲ್ಲಿ ಸಾವಯವ-ಸಿರಿಧಾನ್ಯ ಮೇಳವನ್ನು ಆಯೋಜಿಸಲಾಗಿದೆ.
ರೈತರು ಬೆಳೆದ ಗುಣಮಟ್ಟದ ಸಾವಯವ ಮತ್ತು ಸಿರಿಧಾನ್ಯ ಉತ್ಪನ್ನಗಳನ್ನು ತಮ್ಮ ನೋಂದಾಯಿತ ಸಂಘಗಳ ಮೂಲಕ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಲು ಈ ಮೇಳ ಅನುವು ಮಾಡಿಕೊಡಲಿದೆ. ಗ್ರಾಹಕರು ವಿವಿದ ರೀತಿಯ ಸಾವಯವ ಮತ್ತು ಸಿರಿಧಾನ್ಯ ಪದಾರ್ಥಗಳನ್ನು ಒಂದೆ ಸ್ಥಳದಲ್ಲಿ ಖರೀದಿಸಬಹುದು.
ಸಾವಯವ ಮತ್ತು ಸಿರಿಧಾನ್ಯ ಪದಾರ್ಥಗಳ ಗುಣಮಟ್ಟದ ಬಗ್ಗೆ ನೇರವಾಗಿ ಉತ್ಪಾದಕರು ಹಾಗೂ ಸರಬರಾಜುದಾರರೊಂದಿಗೆ ವಿಚಾರ ವಿನಿಮಯಕ್ಕೂ ಇಲ್ಲಿ ಅವಕಾಶವಿದೆ. ಈ ಮೇಳವನ್ನು ಕೃಷಿ ಸಚಿವ ಕೃಷ್ಣ ಭೈರೇಗೌಡ ಉದ್ಘಾಟಿಸಲಿದ್ದು, ವಸತಿ ಸಚಿವ ಎಂ.ಕೃಷ್ಣಪ್ಪ ಮಾರಾಟ ಮಳಿಗೆಗಳನ್ನು ಉದ್ಘಾಟಿಸಲಿದ್ದಾರೆ.
ಶಾಸಕ ಪ್ರಿಯಾಕೃಷ್ಣ ಅಧ್ಯಕ್ಷತೆ ವಹಿಸಲಿದ್ದು, ರಾಜ್ಯ ಸಾವಯವ ಕೃಷಿ ಉನ್ನತ ಮಟ್ಟದ ಸಮಿತಿ ಅಧ್ಯಕ್ಷ ಸೋಮಶೇಖರ್ ಪಾಲ್ಗೊಳ್ಳಲಿದ್ದಾರೆ. ಮೇಳದಲ್ಲಿ ಊದಲು ಪಿಜ್ಜಾ, ರಾಗಿ ಕೇಕ್, ಬರಗು ಸಮೋಸ, ಸಾಮೆ ಅಣಬೆ ಬಿರಿಯಾನಿ, ನವಣೆ ಕಟ್ಲೆಟ್, ನವಣೆ ಬ್ರೆಡ್, ಜೋಳದ ಜೀರಾ ಲಸ್ಸಿ, ನವಣೆ ಪೊಂಗಲ್, ಹಾರಕ ಬಿಸಿಬೇಳೆಬಾತ್, ಸಾಮೆ ಪಾಯಸ, ಸಜ್ಜೆ ರೊಟ್ಟಿ, ಸಾಮೆ ಚೌಚೌಬಾತ್ ಸೇರಿದಂತೆ ಹಲವು ಖಾದ್ಯಗಳನ್ನು ಸವಿಯಬಹುದು.
ಸಿರಿಧಾನ್ಯಗಳ ಖಾದ್ಯ ತಯಾರಿಕಾ ಪ್ರಾತ್ಯಕ್ಷಿಕೆ, ಸಿರಿಧಾನ್ಯಗಳಿಂದ ತಯಾರಾದ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ, ಹೈಡ್ರೋಫೋನಿಕ್ಸ್ ಮತ್ತು ಟೆರೇಸ್ ಗಾರ್ಡನಿಂಗ್ ಬಗ್ಗೆ ಪ್ರಾತ್ಯಕ್ಷಿಕೆ, ಮಕ್ಕಳಿಗಾಗಿ ಚಿತ್ರಕಲಾ ಸ್ಪರ್ಧೆ ಮೇಳದ ಪ್ರಮುಖ ಆಕರ್ಷಣೆಗಳಾಗಿರಲಿವೆ. ಪ್ರವೇಶ ಉಚಿತವಾಗಿದ್ದು ಎರಡೂ ದಿನಗಳ ಕಾಲ ಬೆಳಗ್ಗೆ 9 ಗಂಟೆಯಿಂದ ಸಂಜೆ 6:30ರ ವರೆಗೆ ಮೇಳ ನಡೆಯಲಿದೆ.
ನೋಂದಣಿ ಮತ್ತು ಹೆಚ್ಚಿನ ಮಾಹಿತಿಗಾಗಿ ಕಾರ್ಯನಿರ್ವಹಣಾ ಅಧಿಕಾರಿ ಜೈವಿಕ್ ಕೃಷಿ ಸೊಸೈಟಿ ಎಚ್.ಆರ್.ಗುರುದತ್-94481 82516 ಅಥವಾ ಕೃಷಿ ಸಹಾಯಕ ನಿರ್ದೇಶಕ ಮಂಜಪ್ಪ- ಮೊಬೈಲ್-82779 29921 ಅನ್ನು ಸಂಪರ್ಕಿಸಲು ಪ್ರಕಟಣೆ ಕೋರಿದೆ.







