ಅತ್ಯಾಚಾರ ಸಂತ್ರಸ್ತೆ ಮಹಿಳೆಯ ಮೇಲೆ ಆ್ಯಸಿಡ್ ದಾಳಿ : ನ್ಯಾಷನಲ್ ವಿಮೆನ್ಸ್ ಫ್ರಂಟ್ ಖಂಡನೆ
ಮಂಗಳೂರು,ಜು.6: ಆ್ಯಸಿಡ್ ದಾಳಿಯಿಂದ ಮಹಿಳೆಯರನ್ನು ರಕ್ಷಿಸಲು ತುರ್ತು ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಎನ್ಡಬ್ಲೂಎಫ್ ಅಧ್ಯಕ್ಷೆ ಎ.ಎಸ್.ಝೈನಬಾ ಆಗ್ರಹಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಆ್ಯಸಿಡ್ ದಾಳಿಯ ಸಂತ್ರಸ್ತ ಮಹಿಳೆಯ ಮೇಲೆ ಮತ್ತೆ ಆ್ಯಸಿಡ್ ದಾಳಿ ಮಾಡಿದ ಹೀನ ಕತ್ಯವನ್ನು ಅವರು ಖಂಡಿಸಿದ್ದಾರೆ.
ವರದಿಯ ಪ್ರಕಾರ, ಇದು ಆಕೆಯ ಮೇಲೆ ಐದನೇ ಬಾರಿ ನಡೆದ ದಾಳಿಯಾಗಿದ್ದು, ಇಂತಹ ಘಟನೆಯು ಪ್ರಜಾಪ್ರಭುತ್ವ ಮತ್ತು ಸಭ್ಯ ನಾಗರಿಕ ಸಮಾಜಕ್ಕೆ ಬಹಳ ದೊಡ್ಡ ಅವಮಾನವಾಗಿದೆ. ಸಂತ್ರಸ್ತರು ಮಹಿಳೆಯರಾಗಿದ್ದರೆ, ಅದರಲ್ಲೂ ಬಡ ಮತ್ತು ಕೆಳವರ್ಗದಿಂದ ಬಂದ ಮಹಿಳೆಯರಾಗಿದ್ದರೆ ಈ ಅಪರಾಧಿಗಳು ಯಾವಾಗಲೂ ತಮ್ಮ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವ ಸನ್ನಿವೇಶ ನಮ್ಮ ದೇಶದಲ್ಲಿದೆ. ಇಂತಹ ಅಪರಾಧಗಳ ಪುನರಾವರ್ತಿತ ಘಟನೆಗಳ ಕುರಿತು ಅಧಿಕಾರಿಗಳು ನೀಡುವ ಸಮಾಧಾನ ಚಿತ್ತದ ಪ್ರತಿಕ್ರಿಯೆಯು ಅಪರಾಧಿಗಳಿಗೆ ಉತ್ತೇಜನ ನೀಡುತ್ತದೆ ಎಂದು ಅವರು ಹೇಳಿದ್ದಾರೆ.
ಈ ದಾಳಿಯ ಸಂತ್ರಸ್ತ ಮಹಿಳೆಗೆ ಶೀಘ್ರ ನ್ಯಾಯ ಒದಗಿಸಬೇಕು ಹಾಗೂ ಅಪರಾಧಿಗಳ ವಿರುದ್ಧ ಜಾಮೀನು ರಹಿತ ಪ್ರಕರಣ ದಾಖಲಿಸ ಬೇಕು ಎಂದು ಅವರು ಆಗ್ರಹಿಸಿದ್ದಾರೆ.





