ಶರತ್ ಮೇಲಿನ ಹಲ್ಲೆಗೆ ಖಂಡನೆ
ಮಂಗಳೂರು, ಜು. 6:: ಬಿ.ಸಿ. ರೋಡ್ ನಲ್ಲಿ ಶರತ್ ಎಂಬ ಯುವಕನ ಮೇಲೆ ನಡೆದಿರುವ ಮಾರಣಾಂತಿಕ ಹಲ್ಲೆಯು ಈಗಾಗಲೇ ಜಿಲ್ಲೆಯಲ್ಲಿರುವ ಬಿಗುವಿನ ವಾತಾವರಣವನ್ನು ಇನ್ನಷ್ಟು ಆತಂಕಕ್ಕೆ ತಳ್ಳುವಂತಾಗಿದೆ. ಈ ಹಲ್ಲೆ ಅತ್ಯಂತ ಖಂಡನೀಯ ಎಂದು ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ಅಧ್ಯಕ್ಷ ಮುಹಮ್ಮದ್ ಕುಂಞಿ ಹೇಳಿದ್ದಾರೆ.
ಈಗಾಗಲೇ ಜಿಲ್ಲೆಯ ಪೋಲೀಸ್ ವ್ಯವಸ್ಥೆಯಲ್ಲಿ ಕೆಲವೊಂದು ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ. ಇನ್ನು ಸೆಕ್ಷನ್ನಿಂದ ಜಿಲ್ಲೆ ಮುಕ್ತವಾಗಿಲ್ಲ. ಶಿವಮೊಗ್ಗ ಎಸ್ಪಿ ಅಣ್ಣಾ ಮಲೈಯವರ ನಿಗಾಕ್ಕೂ ಜಿಲ್ಲೆಯನ್ನು ಒಪ್ಪಿಸಲಾಗಿದೆ. ಇವೆಲ್ಲ ಇದ್ದೂ ಯುವಕನನ್ನು ಇರಿಯಲಾಗಿರುವುದು ವ್ಯವಸ್ಥೆಯ ವೈಫಲ್ಯವನ್ನು ಎತ್ತಿ ತೋರಿಸಿದೆ. ಒಂದೋ ಜಿಲ್ಲೆಯ ಪೋಲೀಸ್ ವ್ಯವಸ್ಥೆಗೆ ಒಟ್ಟು ಪರಿಸ್ಥಿತಿಯೇ ಅರ್ಥವಾಗಿಲ್ಲ ಅಥವಾ ಈ ವ್ಯವಸ್ಥೆಗೆ ಜಿಲ್ಲೆ ಶಾಂತಿಯಿಂದಿರುವುದು ಇಷ್ಟವಿಲ್ಲ ಎಂದು ಹೇಳುವ ಸಂದರ್ಭ ಸಾರ್ವಜನಿಕ ವಲಯದಲ್ಲಿ ಕೇಳಿ ಬರುವಂತಾಗಿದೆ. ಈ ಸ್ಥಿತಿ ಅತ್ಯಂತ ಅಪಾಯಕಾರಿ. ಆದ್ದರಿಂದ ಅತ್ಯಂತ ತುರ್ತಾಗಿ ಒಟ್ಟು ಪರಿಸ್ಥಿತಿಯ ಬಗ್ಗೆ ಗಂಭೀರ ಅವಲೋಕ ನಡೆಯಬೇಕು ಮತ್ತು ಸಮಾಜದ ಎಲ್ಲ ಸಮುದಾಯದ ಪ್ರಮುಖರನ್ನು ಒಟ್ಟು ಸೇರಿಸಿ ಸಮಿತಿ ರಚಿಸಿ ಅವರ ಮೂಲಕ ಪಥ ಸಂಚಲನ ಏರ್ಪಾಡು ಮಾಡಬೇಕು ಮತ್ತು ಸಾರ್ವಜನಿಕರಲ್ಲಿ ಭರವಸೆ ಮೂಡಿಸುವ ಶ್ರಮ ನಡೆಸಬೇಕು. ಹಾಗೆಯೇ ಹಲ್ಲೆಗೀಡಾದ ಶರತ್ಗೆ ಸೂಕ್ತ ಪರಿಹಾರ ಒದಗಿಸುವುದರ ಜೊತೆಗೆ ದುಷ್ಕರ್ಮಿಗಳನ್ನು ಶೀಘ್ರ ಬಂಧಿಸಿ ಕಠಿಣ ಕಾನೂನಿಗೆ ಒಳಪಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.





