ಆಸ್ಪತ್ರೆಯ ಸಮಸ್ಯೆಗಳನ್ನು ಸರಿಪಡಿಸಿ
ಮಾನ್ಯರೆ,
ಸರಕಾರಿ ಆಸ್ಪತ್ರೆಗಳು ಬಡ ರೋಗಿಗಳ ದೇವಾಲಯ ಎಂಬ ಮಾತಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಆ ಮಾತು ಹುಸಿಗೊಳ್ಳುತ್ತಿದೆ. ವಿಜಯಪುರ ಜಿಲ್ಲಾ ಸರಕಾರಿ ಆಸ್ಪತ್ರೆ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ಮತ್ತು ಆರೈಕೆಯಲ್ಲಿ ರಾಜ್ಯಕ್ಕೆ ಅಗ್ರಸ್ಥಾನದಲ್ಲಿದ್ದು ಭಾರತ ಸರಕಾರ ಕೊಡಮಾಡುವ ಕಾಯಕಲ್ಪಪ್ರಶಸ್ತಿಗಳನ್ನು ಸತತ ಎರಡು ಬಾರಿ ಪಡೆದುಕೊಂಡು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿತ್ತು. ಆದರೆ ಇಂದು ಈ ಆಸ್ಪತ್ರೆ ಹಲವು ಸಮಸ್ಯೆಗಳ ಆಗರವಾಗಿದ್ದು ಬಡ ರೋಗಿಗಳು ನಿತ್ಯ ಪರದಾಡುವಂತಾಗಿದೆ.
ಇಲ್ಲಿ ರೋಗಿಗಳಿಗೆ ಸರಿಯಾದ ಚಿಕಿತ್ಸೆ ಮತ್ತು ಆರೈಕೆ ಸಿಗುತ್ತಿಲ್ಲ. ರೋಗಿಗಳ ಸಂಬಂಧಿಕರೇ ಅಲ್ಲಿ ಆಳಾಗಿ ಕೆಲಸ ಮಾಡಬೇಕು. ಇನ್ನು ರೋಗಿಗಳಿಗೆ ಎಕ್ಸ್ ರೇ, ಸ್ಕ್ಯಾನಿಂಗ್, ಶಸ್ತ್ರಚಿಕಿತ್ಸೆ ಮತ್ತು ಡಿಸ್ಚಾರ್ಜ್ ಆಗಬೇಕಾದರೆ ಸಿಬ್ಬಂದಿಗೆ ಲಂಚ ನೀಡಲೇಬೇಕು ಇಲ್ಲದಿದ್ದರೆ ರೋಗಿಗಳು ನಿರ್ಲಕ್ಷಿಸಲ್ಪಡುತ್ತಾರೆ. ಅಲ್ಲದೆ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ, ಒಳ ರೋಗಿಗಳಿಗೆ ಹಾಸಿಗೆ ಕೊರತೆಯಲ್ಲದೆ, ಆಸ್ಪತ್ರೆಯಲ್ಲಿ ಸ್ವಚ್ಛತೆಯ ಕೊರತೆಯೂ ಇರುವುದರಿಂದ ರಾತ್ರಿ ಸೊಳ್ಳೆಗಳ ಕಾಟ ವಿಪರೀತವಾಗಿದೆ. ಆದ್ದರಿಂದ ಈ ಎಲ್ಲ್ಲ ಜ್ವಲಂತ ಸಮಸ್ಯೆಗಳನ್ನು ಇನ್ನಾದರೂ ಸಂಬಂಧಿಸಿದವರು ಸರಿಪಡಿಸಬೇಕು. ಈಗ ಮಳೆಗಾಲ ವಾಗಿರುವುದರಿಂದ ಕಾಯಿಲೆಗಳು ಹೆಚ್ಚುತ್ತಿದ್ದು ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಅಧಿಕವಾಗುತ್ತಿದೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಆರೋಗ್ಯ ಇಲಾಖೆ ಗಂಭೀರವಾಗಿ ತೆಗೆದುಕೊಂಡು ರೋಗಿಗಳ ಆರೋಗ್ಯ ಕಾಪಾಡಬೇಕಾಗಿದೆ.