ತನಿ ಒರುವನ್ ಬಾಲಿವುಡ್ ರಿಮೇಕ್ನಲ್ಲಿ ಅರ್ಜುನ್-ರಣವೀರ್
ಎರಡು ವರ್ಷಗಳ ಹಿಂದೆ ತಮಿಳಿನಲ್ಲಿ ದಾಖಲೆ ಯಶಸ್ಸು ಕಂಡ ಪಾಲಿಟಿಕಲ್ ಥ್ರಿಲ್ಲರ್ ಕಥಾವಸ್ತುವುಳ್ಳ ‘ತನಿ ಒರುವನ್’ ಬಾಲಿವುಡ್ ಮಂದಿಯನ್ನೂ ಆಕರ್ಷಿಸಿದೆ. ಹೌದು.ಈ ಚಿತ್ರ ಬಾಲಿವುಡ್ ರಿಮೇಕ್ ಆಗಲು ಇದೀಗ ಸಜ್ಜಾಗಿದೆ. ಯುವ ನಿರ್ದೇಶಕ ಶಬ್ಬೀರ್ ಖಾನ್ ಆ್ಯಕ್ಷನ್ ಕಟ್ ಹೇಳಲಿದ್ದು, ಜನಪ್ರಿಯ ಯುವತಾರೆಯರಾದ ರಣವೀರ್ಸಿಂಗ್ ಹಾಗೂ ಅರ್ಜುನ್ ಕಪೂರ್ ಮುಖ್ಯ ಪಾತ್ರಗಳಲ್ಲಿ ನಟಿಸಲಿದ್ದಾರೆ. ಇವರಿಬ್ಬರ ಪೈಕಿ ಒಬ್ಬರು ನಾಯಕನಾಗಿ ಅಭಿನಯಿಸಲಿದ್ದರೆ, ಇನ್ನೋರ್ವ ಖಳನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಇಷ್ಟಕ್ಕೂ ಇವರಿಬ್ಬರಲ್ಲಿ ಯಾರಿಗೆ ಯಾವ ಪಾತ್ರ ದೊರೆಯಲಿದೆಯೆಂಬುದೇ ಸದ್ಯದ ಕುತೂಹಲವಾಗಿದೆ.
ರೋಜಾ, ಬಾಂಬೆ, ದಳಪತಿ ಚಿತ್ರಗಳ ಮೂಲಕ ತಮಿಳು ಪ್ರೇಕ್ಷಕರ ಮನಸೂರೆಗೊಂಡಿದ್ದ ಅರವಿಂದ್ ಸ್ವಾಮಿ, ಕೆಲವು ಸಮಯದ ಬಳಿಕ ಚಿತ್ರರಂಗದಿಂದ ದೂರವಾಗಿದ್ದರು. 2015ರಲ್ಲಿ ತೆರೆಕಂಡ ‘ತನಿಒರುವನ್’ನಲ್ಲಿ ನೆಗೆಟೀವ್ಶೇಡ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಅವರ ಅಭಿನಯ ಭಾರೀ ಮೆಚ್ಚುಗೆಗೆ ಪಾತ್ರವಾಗಿತ್ತು.
ಆದಾಗ್ಯೂ ಬಾಲಿವುಡ್ ಪ್ರೇಕ್ಷಕರ ಅಭಿರುಚಿ ಭಿನ್ನವಾಗಿದ್ದು, ಅವರಿಗೆ ತನಿಒರುವನ್ನಂತಹ ಕಥಾವಸ್ತುವು ಇಷ್ಟವಾಗುವುದೇ ಎಂಬ ಜಿಜ್ಞಾಸೆಯೂ ಕೇಳಿಬರುತ್ತಿದೆ. ನಿರ್ದೇಶಕ ಶಬ್ಬೀರ್ ಖಾನ್ ಈ ಮೊದಲು ಭಾಗಿ (ತೆಲುಗಿನ ವರ್ಷಂ ಚಿತ್ರದ ರಿಮೇಕ್), ಹೀರೋಪಂತಿ (ತೆಲುಗಿನ ಪರುಗು ಚಿತ್ರದ ಸ್ಫೂರ್ತಿ) ನಿರ್ದೇಶಿಸಿ, ಬಾಲಿವುಡ್ ಮಂದಿಯಿಂದ ಪರವಾಗಿಲ್ಲ ಅನಿಸಿಕೊಂಡಿದ್ದರು. ಅವರ ನಿರ್ದೇಶನದ ಮುನ್ನಾ ಮೈಕಲ್ ಬಿಡುಗಡೆಗೆ ಕಾದು ನಿಂತಿದೆ. ಟೈಗರ್ ಶ್ರಾಫ್ ಆ ಚಿತ್ರದ ನಾಯಕ. ಹೀಗೆ ಟೈಗರ್ ಶ್ರಾಫ್ ಜೊತೆಗೆ ಸಾಲುಸಾಲು ಮೂರು ಚಿತ್ರಗಳನ್ನು ನೀಡಿರುವ ಶಬ್ಬೀರ್ ತನಿ ಒರುವ್ ರಿಮೇಕ್ ಮೂಲಕ ಹೊಸ ನಾಯಕ ಜೋಡಿಯ ಕಾಂಬಿನೇಶನ್ ಅನ್ನು ಪರಿಚಯಿಸಲು ಹೊರಟಿದ್ದಾರೆ. ಅವರ ಈ ಪ್ರಯತ್ನ ಕ್ಲಿಕ್ ಆಗುವುದೇ ಎಂಬುದನ್ನು ಕಾದುನೋಡಬೇಕಾಗಿದೆ.