ಶಿಕ್ಷಣ ಪಡೆಯಲು ಸಮಾಜ ಕಲ್ಯಾಣ ಸಚಿವರ ಸಲಹೆ

ಚಾಮರಾಜನಗರ ಜು.8: ರಾಜ್ಯ ಸರ್ಕಾರ ಶಿಕ್ಷಣಕ್ಕಾಗಿ ಹೆಚ್ಚು ಉತ್ತೇಜನ ನೀಡುತ್ತಿದ್ದು, ಪ್ರತಿಯೊಬ್ಬರು ಶಿಕ್ಷಣ ಪಡೆದು ಸಮಾಜದಲ್ಲಿ ಮೇಲೆ ಬರಬೇಕೆಂದು ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಹೆಚ್. ಆಂಜನೇಯ ಸಲಹೆ ಮಾಡಿದರು. ಹನೂರು ಪಟ್ಟಣದಲ್ಲಿಂದು ಸಮಾಜ ಕಲ್ಯಾಣ ಇಲಾಖಾ ವತಿಯಿಂದ ನಿರ್ಮಾಣ ಮಾಡಲಾಗಿರುವ ಬಾಬು ಜಗಜೀವನ್ ರಾಂ ಸಮುದಾಯ ಭವನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಎಲ್ಲಾ ವರ್ಗಗಳ ವಿದ್ಯಾರ್ಥಿಗಳು ವ್ಯಾಸಂಗ ಮಾಡಲು ಅನುಕೂಲವಾಗುವಂತೆ ಮೊರಾರ್ಜಿ ದೇಸಾಯಿ ಇತರೆ ವಸತಿ ಶಾಲೆಗಳನ್ನು ತೆರೆಯಲಾಗಿದೆ. ಎಲ್ಲಾ ಬಡ ವರ್ಗದವರಿಗೂ ಈ ಶಾಲೆಗಳು ಉಪಯೋಗ ವಾಗಲಿದೆ. ಶಿಕ್ಷಣ ಕ್ಷೇತ್ರಕ್ಕೆ ನೀಡಿರುವ ಸೌಲಭ್ಯಗಳನ್ನು ಪಡೆದುಕೊಂಡು ಉನ್ನತ ಸ್ಥಾನಕ್ಕೆ ಏರಬೇಕೆಂದು ಸಚಿವರು ತಿಳಿಸಿದರು.
ಸರ್ಕಾರ ರಾಜ್ಯವನ್ನು ಹಸಿವು ಮುಕ್ತ ಗೊಳಿಸಬೇಕೆಂಬ ಉದ್ದೇಶದಿಂದ ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತಂದಿದೆ. ಇದರಿಂದ ಬರಗಾಲ ಸಂದರ್ಭದಲ್ಲೂ ಜನರಿಗೆ ನೆರವಾಗಿದೆ. ಸ್ವಾಭಿಮಾನ ಬದುಕು ಕಟ್ಟಿಕೊಳ್ಳಲು ಅನುಕೂಲವಾಗಿರುವ ಯೋಜನೆಯನ್ನು ಸರ್ಕಾರ ಅನುಷ್ಠಾನಕ್ಕೆ ತಂದಿದೆ ಎಂದು ಸಚಿವರು ತಿಳಿಸಿದರು.
ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ ಮಾತನಾಡಿ ರಾಜ್ಯ ಸರ್ಕಾರ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಗಳ ಕಲ್ಯಾಣಕ್ಕೆ ಹೆಚ್ಚಿನ ಅನುದಾನವನ್ನು ಬಜೆಟ್ನಲ್ಲಿ ಮೀಸಲಿಡುತ್ತಾ ಬಂದಿದೆ. ಇದರ ಫಲವಾಗಿ ಪರಿಶಿಷ್ಟರ ಕಾಲೋನಿಗಳಲ್ಲಿ ಸಿಮೆಂಟ್ ಕಾಂಕ್ರೀಟ್ ರಸ್ತೆ, ಚರಂಡಿ ಇನ್ನಿತರ ಸೌಲಭ್ಯಗಳನ್ನು ಕಾಣಬಹುದಾಗಿದೆ ಎಂದರು.
ರಾಜ್ಯ ಸರ್ಕಾರದ ವತಿಯಿಂದ ನಿರ್ಮಾಣವಾಗಿರುವ ಬಾಬು ಜಗಜೀವನ್ ರಾಂ ಸಮುದಾಯ ಭವನ ಗುಣಮಟ್ಟದಿಂದ ಕೂಡಿದೆ. ಈ ಭವನವನ್ನು ಶಿಕ್ಷಣ ಕೇಂದ್ರವನ್ನಾಗಿ ರೂಪಿಸಿಕೊಂಡು ಸಹ ಬಳಕೆ ಮಾಡಿಕೊಳ್ಳಬೇಕು. ಸ್ಥಳೀಯರ ಬೇಡಿಕೆಯಂತೆ ಭವನಕ್ಕೆ ಬೇಕಿರುವ ಪೀಠೋಪಕರಣಗಳನ್ನು ತಮ್ಮ ಸಂಸದ ಅನುದಾನದಿಂದ ಬಿಡುಗಡೆ ಮಾಡಿಕೊಡುವುದಾಗಿ ಧ್ರುವನಾರಾಯಣ ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತಾನಾಡಿದ ಶಾಸಕರಾದ ಆರ್. ನರೇಂದ್ರ ಅವರು ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲೇ 112 ಸಮುದಾಯ ಭವನಗಳು ನಿರ್ಮಾಣವಾಗುತ್ತಿವೆ. ಈ ಎಲ್ಲಾ ಭವನಗಳಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ನೆರವು ಲಭಿಸುತ್ತಿದೆ. ಪ್ರಸ್ತುತ ಉದ್ಘಾಟನೆಯಾಗಿರುವ ಜಗಜೀವನ್ ರಾಂ ಭವನಕ್ಕೆ ಕಾಂಫೌಡ್ ನಿರ್ಮಿಸಲು ನೆರವು ದೊರೆಯುತ್ತಿದೆ. ಎಂದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ, ಉಪಾಧಕ್ಷರಾದ ಎಸ್. ಬಸವರಾಜು, ಶಾಸಕರಾದ ಆರ್. ಧರ್ಮಸೇನ, ಜಿಲ್ಲಾ ಪಂಚಾಯತ್ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಬಿ.ಕೆ. ಬೊಮ್ಮಯ್ಯ ಸದಸ್ಯರಾದ ಶಿವಮ್ಮ, ಮರಗದಮಣಿ, ತಾಲ್ಲೂಕು ಪಂಚಾಯತ್ ಅಧ್ಯಕ್ಷರಾದ ರಾಜು, ಉಪಾಧ್ಯಕ್ಷರಾದ ಲತಾರಾಜಣ್ಣ, ಪಟ್ಟಣ ಪಂಚಾಯತಿ ಅಧ್ಯಕ್ಷರಾದ ಮಮತ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಕೆ.ಹೆಚ್. ಸತೀಶ್, ತಾಲ್ಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ಎಲ್. ಗಂಗಾಧರ್ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಬಳಿಕ ಸಚಿವರು ಹೂಗ್ಯಂಗೆ ತೆರಳಿ ಅಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖಾವತಿಯಿಂದ ನಿರ್ಮಾಣಮಾಡಲಾಗಿರುವ ಮೊರಾರ್ಜಿ ದೇಸಾಯಿ ವಸತಿ ಕಟ್ಟಡವನ್ನು ಉದ್ಘಾಟಿಸಿದರು.







