ಉಳ್ಳಾಲದ ಜಕಣಿ ಭೂತ
ಜೀವನ ಕಥನ
ಭಾಗ 3
ಉಳ್ಳಾಲದ ಬಳಿ ಜಕಣಿ ಭೂತವೊಂದು ಗಂಡಸ ರನ್ನು ಹಿಡಿದು ತೊಂದರೆ ಕೊಡುತ್ತಿದೆ ಎಂಬ ಸುದ್ದಿ ದಟ್ಟವಾಗಿತ್ತು. ನಾವು ಅಲ್ಲಿಗೆ ಹೋದೆವು. ರಾತ್ರಿಯೆಲ್ಲಾ ಅಲ್ಲೇ ಬೀಚ್ನಲ್ಲಿದ್ದು, ಜಕಣಿ ಭೂತವನ್ನು ಕಾದೆವು. ಆದರೆ ಜಕಣಿ ಭೂತ ಮಾತ್ರ ನಮಗೆ ಕಾಣ ಸಿಗಲಿಲ್ಲ. ಅದೆಷ್ಟು ಮಟ್ಟ ದಲ್ಲಿ ಜಕಣಿ ಭೂತ ಸುದ್ದಿಯಾಗಿತ್ತೆಂದರೆ, ರಾತ್ರಿ ಹೊತ್ತಿನಲ್ಲಿ ಮಾತ್ರವೇ ಆ ಭೂತ ಅವಿವಾಹಿತ ಗಂಡಸರನ್ನು ಆಕರ್ಷಿಸಿ ಹಿಡಿಯುತ್ತದೆ ಎಂಬುದು. ಆದರೆ ನಮಗೆ ಮಾತ್ರ ಆ ಭೂತ ಕಾಣ ಸಿಗಲಿಲ್ಲ. ನಾವು ಕಾದು ಮರುದಿನ ಬೆಳಗ್ಗೆ ವಾಪಸ್ ಬರುವಾಗ ಸ್ಥಳೀಯರೊಬ್ಬರು
‘ನೀವ್ಯಾಕೆ ಇಲ್ಲಿ ಬಂದಿದ್ದು’ ಎಂದು ತುಳುವಿನಲ್ಲಿ ವಿಚಾರಿ ಸಿದರು.
ಇಲ್ಲಿ ಜಕಣಿ ಭೂತ ಉಂಟಲ್ಲಾ ಅದನ್ನು ನೋಡಲು ಬಂದಿದ್ದು ಎಂದಾಗ, ಆ ವ್ಯಕ್ತಿ ‘‘ನಿಮಗೆ ತಲೆ ಸರಿ ಇಲ್ಲ. ಅದೆಲ್ಲಾ ಸ್ಮಗ್ಲರ್ಗಳಕಟ್ಟು ಕತೆ. ಜನರು ಆ ಜಾಗದಲ್ಲಿ ಓಡಾಡಬಾರದೆಂದು ಈ ಕಟ್ಟು ಕತೆ ಯನ್ನು ಸೃಷ್ಟಿಸಿದ್ದಾರೆ ಅಷ್ಟೆ’’ ಎಂದಾಗ ನಮಗೂ ಆ ಬಗ್ಗೆ ಅರಿವಾಗಿತ್ತು. ಹಾಗಾಗಿ ನಮ್ಮ ಮೊದಲ ಪವಾಡ ರಹಸ್ಯ ನಾವೇನೂ ಪ್ರಯೋಗ ಮಾಡದೆಯೇ ಬಯಲಾಗಿತ್ತು.
ಪ್ರೇಮಾನಂದರ ಜತೆ ಒಡನಾಟ...
1978ರಲ್ಲಿ ನನಗೆ ಕೆಎಂಸಿಯಲ್ಲಿ ಟೆಕ್ನಿಶಿಯನ್ ಆಗಿ ಕೆಲಸ ದೊರಕಿತ್ತು. ಇದೇ ವೇಳೆ ಬಿ.ಎನ್. ಲ್ಯಾಬೊರೇಟರಿ ಎಂಬ ಸಂಸ್ಥೆಯನ್ನು ಪಾಲುದಾರಿಕೆಯಲ್ಲಿ ಆರಂಭಿಸಿದೆ. ಇದೇ ವೇಳೆ ನನ್ನ ಮದುವೆಗೂ ಮನೆಯಲ್ಲಿ ಒತ್ತಡ ಬರುತ್ತಿತ್ತು. ಆದರೆ, ಜಾತಕವನ್ನು ನಂಬದ, ನಾಸ್ತಿಕನಾಗಿದ್ದ ನನಗೆ ಮದುವೆಯ ಬಗ್ಗೆಯೂ ಆಸಕ್ತಿ ಇರಲಿಲ್ಲ. ಮಾತ್ರವಲ್ಲದೆ, ನನ್ನ ಜೀವನ ಸಂಗಾತಿಯಾಗುವ ಹೆಣ್ಣು ಕೂಡಾ ನನ್ನ ತರ್ಕ, ವಿಚಾರಗಳನ್ನು ಒಪ್ಪುವಂತಿಲ್ಲವಾದರೆ ಎಂಬ ಅಳುಕೂ ನನ್ನಲ್ಲಿತ್ತು. ಆದರೂ ಕೊನೆಗೂ ಮನಸ್ಸು ಮಾಡಿ ತಾಳಿ ಇಲ್ಲದೆ, ಪೂಜಾರಿ ಇಲ್ಲದೆ, ಅಗ್ನಿಸಾಕ್ಷಿಯೂ ಇಲ್ಲದೆ ವಿವಾಹ ಕಾಯ್ದೆಯಡಿ ಮದುವೆಗೆ ಒಪ್ಪುವ ಹುಡುಗಿಯನ್ನು ನಾನು ಆಯ್ದುಕೊಂಡೆ. 1980ರಲ್ಲಿ ಯಾವುದೇ ರೀತಿಯ ವಿಧಿ ವಿಧಾನಗಳಿಲ್ಲದೆ ಆಶಾರನ್ನು(ಪ್ರಸ್ತುತ ಮಂಗಳೂರಿನ ಪ್ರಸಿದ್ಧ ವಕೀಲರು) ವಿವಾಹವಾದೆ. ಬಳಿಕ 1981- 82ರ ಅವಧಿಯಲ್ಲಿ ಪವಾಡ ಬಯಲು ನಡೆಸುತ್ತಿದ್ದ ಪ್ರೇಮಾನಂದರ ಭೇಟಿಯಾಯಿತು. ಆ ಭೇಟಿ ಮಾಡಿಸಿದವರು ಜಾದೂಗಾರ ಶಂಕರ್.
ವಿಚಾರವಾದಿ ಆಗುವುದಕ್ಕೆ ಮೊದಲು ಅವರು ಯೋಗಿಯಾಗಲು ಹಿಮಾಲಯಕ್ಕೆ ತೆರಳಿ ಅಲ್ಲಿ ಖ್ಯಾತ ಯೋಗಿ ರಾಮ ಅವರ ಅಡಿ ತರಬೇತಿ ಪಡೆದವರು. ಒಂದು ದಿನ ಗುರು ಶಿಷ್ಯರು ಸುಮಾರುಮೂರು ಮೈಲು ದೂರದ ಗಂಗಾ ಸ್ನಾನಕ್ಕೆ ತೆರಳಿದ್ದರು.ಅಲ್ಲಿ ಇವರ ಗುರುವಿನ ವರ್ತನೆ ಕಂಡು ಭ್ರಮನಿರಸನಗೊಂಡು ವಾಪಸ್ ಊರಿಗೆ ಬಂದು ಪುಟ್ಟಪರ್ತಿಯ ಸಾಯಿಬಾಬಾನ ಭಕ್ತರಾದರು. ಅಲ್ಲಿಯೂ ಬಾಬಾ ಪವಾಡಗಳ ಮೂಲಕ ಮೋಸ ಮಾಡುತ್ತಾನೆಂದು ತಿಳಿದು, ಮುಂದೆ ಆ ಪವಾಡಗಳನ್ನು ಕಲಿತು ಜನರಿಗೆಆ ಬಗ್ಗೆ ತಿಳುವಳಿಕೆ ನೀಡಲು ಮುಂದಾದವರು ಪ್ರೇಮಾನಂದರು. ಅವರ ಭೇಟಿ ನನ್ನ ಜೀವನದಲ್ಲಿ ಮತ್ತಷ್ಟು ವೈಚಾರಿಕ ಸಂಗತಿಗಳನ್ನು ತುಂಬಲು, ನನ್ನ ವೈಜ್ಞಾನಿಕ ಪ್ರಯೋಗಗಳಿಗೆ ಅವರು ಗುರುವಿನ ಸ್ಥಾನ ತುಂಬಿದವರು.
ಪ್ರೇಮಾನಂದರ ಪವಾಡ ಬಯಲು ಕಾರ್ಯಕ್ರಮವನ್ನು ಉಡುಪಿಯಲ್ಲಿ ನಡೆಸಲು ನಿರ್ಧರಿಸಿದ್ದೆವು. ಅಲ್ಲಿ ಜ್ಯೂನಿಯರ್ ಶಂಕರ್ ಮ್ಯಾಜಿಕ್ ಮತ್ತು ಪ್ರೇಮಾನಂದರ ಕಾರ್ಯಕ್ರಮ ಒಟ್ಟಿಗೆ ಆಯೋಜಿಸಲಾ ಗಿತ್ತು. ಆದರೆ ಪ್ರೇಮಾನಂದರು ಉಪನ್ಯಾಸ ನೀಡಲು ಆರಂಭಿಸಿದ ಎರಡು ನಿಮಿಷಗಳಲ್ಲೇ ಅಲ್ಲಿ ಸೇರಿದ್ದ ಕೆಲವರಿಂದ ಆಕ್ಷೇಪ ವ್ಯಕ್ತವಾ ಯಿತು. ‘ನಾವಿಲ್ಲಿ ನಿಮ್ಮ ನಾನ್ಸೆನ್ಸ್ ಕೇಳಲು ಬಂದಿದ್ದಲ್ಲ. ನಾವು ಮ್ಯಾಜಿಕ್ ನೋಡಬೇಕು’ ಎಂದು ಒತ್ತಡ ಹೇರಿದಾಗ ಪವಾಡ ಬಯಲಿನ ಉಪನ್ಯಾಸವನ್ನು ಮೊಟಕುಗೊಳಿಸಿ ವಿಧಿಯಿಲ್ಲದೆ ಮ್ಯಾಜಿಕ್ ಕಾರ್ಯಕ್ರಮ ನೀಡಲಾಯಿತು.
ಆ ಬಳಿಕ ವಿಚಾರವಾದಿಗಳ ಸಂಘದ ಮೂಲಕಪ್ರೇಮಾನಂದರ ಕಾರ್ಯಕ್ರಮಗಳನ್ನು ನಡೆಸಿ ದೆವು. ಪ್ರೇಮಾನಂದರು ಪವಾಡ ಮಾಡುತ್ತಾ ಇಂಗ್ಲಿಷ್ನಲ್ಲಿ ವಿವರಣೆ ನೀಡುತ್ತಿದ್ದರೆ ನಾನು ಕನ್ನಡದಲ್ಲಿ ಅನುವಾದಿಸಿ ಹೇಳುತ್ತಿದ್ದೆ. ಅದೊಂದು ದಿನ ಪ್ರೇಮಾನಂದರು, ‘ನಾನೇನು ಮಾಡು ತ್ತೇನೋ ಅದು ನಿನಗೆ ಗೊತ್ತು. ನೀನು ಕನ್ನಡದಲ್ಲಿ ವಿವರಣೆನೀಡು. ನಂತರ ನಾನೇನು ಮಾಡಬೇಕು ಅದನ್ನು ಇಂಗ್ಲಿಷ್ನಲ್ಲಿ ಹೇಳು. ನಾನು ಆ ಪವಾಡವನ್ನು ಮಾಡಿ ತೋರಿಸುತ್ತೇನೆ’’ ಎಂದು. ಈ ರೀತಿ ನಮ್ಮ ಕಾರ್ಯಕ್ರಮ ಮುಂದುವರಿಯಿತು. ಹೀಗೆ ನಾಲ್ಕೈದು ಕಾರ್ಯಕ್ರಮಗಳ ಬಳಿಕ ಪ್ರೇಮಾನಂದರು, ನಾನು ಮಾಡುವುದು ನಿನಗೆ ಗೊತ್ತು. ನಾನು ಏನು ಮಾಡಿ ತೋರಿಸುತ್ತೇನೋ ಅದನ್ನು ಕಲಿ ಎಂದಾಗ ಪವಾಡಗಳನ್ನು ಮಾಡುವುದನ್ನು ನಾನು ಕಲಿತು ಆ ಪವಾಡಗಳ ರಹಸ್ಯ ಬಯಲು ಮಾಡುವ ಕಾರ್ಯಕ್ರಮ ನೀಡಲಾರಂಭಿಸಿದೆ.
ಅಡ್ಯನಡ್ಕದ ಕುಟ್ಟಿಚಾತನ್....!
ನಮಗೆ ಎದುರಾದ ಎರಡನೆ ಪವಾಡ ಅಡ್ಯನಡ್ಕದ ಕುಟ್ಟಿಚಾತನ್. ಉಳ್ಳಾಲದ ಜಕಣಿ ಭೂತದ ರಹಸ್ಯವನ್ನು ನಾವು ಭೇದಿಸಬೇಕಾದ ಅಗತ್ಯವೇ ಇರಲಿಲ್ಲ. ಆದರೆ ಅಡ್ಯನಡ್ಕದ ಕುಟ್ಟಿಚಾತನ್ ಬಗ್ಗೆ ಮಾತ್ರ ವಿಚಾರವಾದಿಗಳಿಗೆ ಸವಾಲಾಗಿ ಎದುರಾಗಿತ್ತು.
ಆ ಅವಧಿಯಲ್ಲಿ ಪತ್ರಿಕೆಯೊಂದರಲ್ಲಿ ಅಡ್ಯನಡ್ಕದಲ್ಲಿ ಮನೆಯೊಂದಕ್ಕೆರಾತ್ರಿ ಹೊತ್ತು ಕಲ್ಲು ಬೀಳುವುದು. ಕಲ್ಲಿನೇಟಿನಿಂದ ಕೆಲವರಿಗೆ ಗಾಯಗಳಾಗಿರುವುದು. ಈ ವಿಸ್ಮಯ ವಿಚಾರವಾದಿಗಳಿಗೆ ಸವಾಲು ಎಂಬ ಒಕ್ಕಣೆಯಲ್ಲಿ ಲೇಖನ ಪ್ರಕಟವಾಗಿತ್ತು. ಅದನ್ನು ನಾವು ಸವಾಲಾಗಿಯೇ ಸ್ವೀಕರಿಸಿದೆವು.
ಅದೊಂದು ರವಿವಾರ ಶಿವರಾಯ ನಾಯಕ್, ಅಶೋಕ್ವರ್ಧನ್, ನಾರಾಯಣಮೂರ್ತಿ, ಸುಂದರ್ ರಾವ್ ಬಿಸಿ ರೋಡ್, ಅರವಿಂದ ರಾವ್ ಹಾಗೂ ನಾನು ರಹಸ್ಯ ಭೇದಿಸಲು ಹೊರಟೆವು. ಭೂತದ ಉಪದ್ರವವೆಂದು ಹೇಳಲಾದ ಸ್ಥಳದಲ್ಲಿ ಮಾತಾಡಿಸಿದೆವು. ಕಲ್ಲು ಬೀಳುವ ಜಾಗದ ಮೇಲುಗಡೆ ಅಂಗಡಿ ಮತ್ತು ಮನೆಗಳು. ಅದರಿಂದ ಆರಡಿ ತಗ್ಗಿನಲ್ಲಿ ಒಂದು ಮನೆ.
ನಾನು ಅಲ್ಲಿ ಗಾಳಿಯಲ್ಲಿ ಕೈಯಾಡಿಸಿ ಬೂದಿ ನೀಡುವುದು, ಕರ್ಪೂರ ಉರಿಸಿ ನಾಲಗೆ ಮೇಲಿಟ್ಟು ಪವಾಡ ಪ್ರದರ್ಶಿಸಿದೆ. ಅದ್ಯಾರೋಭೂತ ಬಿಡಿಸಲು ಮಂತ್ರವಾದಿಗಳು ಬಂದಿದ್ದಾರೆಂದು ಅಲ್ಲಿನ ಜನ ತಿಳಿದಿದ್ದರು. ಇದೇ ವೇಳೆ ನಮ್ಮವರು ಅಲ್ಲಿ ಕಲ್ಲುಗಳು ಹೇಗೆ, ಎಲ್ಲಿಂದ ಯಾವ ಸಮಯದಲ್ಲಿ ಬೀಳುತ್ತದೆ ಎಂಬುದನ್ನು ತಿಳಿಯಲು ಪ್ರಯತ್ನಿಸುತ್ತಿದ್ದರು. ಜನರಲ್ಲಿ ಮಾತನಾಡಿಸಿದರು.
ಆರಡಿ ಕೆಳಗಿರುವ ಮನೆಯಲ್ಲಿ ಸುಮಾರು 13 ವರ್ಷದಬಾಲಕಿ. ಹಾಗೂ ಅವಳಿಗಿಂತ ಚಿಕ್ಕವನಾದ ತಮ್ಮ. ನಾವು ಅಲ್ಲಿ ನಮ್ಮ ಚಟುವಟಿಕೆಗಳನ್ನು ನಡೆಸುತ್ತಿರುವಾಗಲೇ ಕಲ್ಲೊಂದು ಬಂದು ಬಿತ್ತು. ರಾತ್ರಿಯಾಗುತ್ತಿದ್ದಂತೆಯೇ ನಾನು ಮತ್ತು ತಂಡದ ಇನ್ನೊಬ್ಬರು ಕಲ್ಲು ಬಿದ್ದ ಸ್ಥಳದಲ್ಲಿ ಮತ್ತೆ ಉಳಿದವರು ಟಾರ್ಚ್ ಹಿಡಿದು ಗುಪ್ತ ಸ್ಥಳದಲ್ಲಿ ಭೂತವನ್ನು ಹಿಡಿಯಲು ಸಿದ್ಧರಾದೆವು. ಅಷ್ಟು ಹೊತ್ತಿಗೆ ಕೆಳಗಿನ ಮನೆಯ ಮಕ್ಕಳ ತಂದೆ ಶರಾಬು ಅಂಗಡಿಯತ್ತ ಹೊರಟ. ಆವಾಗ ನಮಗೆ ರಾತ್ರಿ ಹಗಲಿನಲ್ಲಿ ಕುಟ್ಟಿಚಾತನ್ ಉಪದ್ರವ ಸ್ಪಷ್ಟವಾಯಿತು. ಹಗಲು ಹೊತ್ತಿನಲ್ಲಿ ಮನೆಯ ಹೆಣ್ಣು ಮಗಳು ಸಣ್ಣ ಕಲ್ಲು ಬಿಸಾಕುತ್ತಿದ್ದರೆ, ರಾತ್ರಿ ಹೊತ್ತುಶರಾಬು ಕುಡಿದು ಬಂದು ಆ ಮಕ್ಕಳ ತಂದೆ ದೊಡ್ಡ ಕಲ್ಲು ಬಿಸಾಕಿ ಸ್ಥಳೀಯರಲ್ಲಿ ಭೀತಿ ಹುಟ್ಟಿಸುವಕಾರ್ಯ ನಡೆಸುತ್ತಿದ್ದ. ಇವೆಲ್ಲವನ್ನೂ ನಾವು ಆ ಸಂದ ರ್ಭ ಜನರಿಗೆ ಹೇಳುವಂತೆ ಇರಲಿಲ್ಲ. ಹಾಗಾಗಿ ಆ ಮನೆಯವರನ್ನೂ ಸೇರಿಸಿ ಸ್ಥಳೀಯರನ್ನು ಕರೆಸಿ, ‘‘ಮಂಗಳೂರಿನಲ್ಲಿ ಹೊಸ ಪೊಲೀಸ್ ಸ್ಕ್ವಾಡ್ ಆರಂಭವಾಗಿದೆ. ಅದರಲ್ಲಿ ಪೊಲೀಸ್ ನಾಯಿಯೂ ಇದೆ.ಅದು ಕಲ್ಲು ಬಿಸಾಡುವವರನ್ನು ಕಚ್ಚಿ ಹಿಡಿಯುತ್ತದೆ. ಆ ಮೇಲೆ ಜೈಲುಶಿಕ್ಷೆಯನ್ನೂ ಅನುಭವಿಸಬೇಕಾಗುತ್ತದೆ’’ ಎಂದು ಹೇಳಿ ಬಂದೆವು.
ಇದಾದ ಬಳಿಕ ಅಲ್ಲಿ ಒಂದೇ ಒಂದು ಕಲ್ಲು ಬೀಳಲಿಲ್ಲ. ಕುಟ್ಟಿಚಾ ತನ್ ಪ್ರೇತ ಬಾಧೆ ನಿಂತೇ ಹೋಯಿತು. ಮೇಲೆ ಬಾಡಿಗೆಗೆ ಇದ್ದ ಅಂಗಡಿಯವರನ್ನು ಅಲ್ಲಿಂದ ತೆರವುಗೊಳಿಸುವ ಉದ್ದೇಶದಿಂದ ಈ ಕುಟ್ಟಿಚಾತನ್ ಭೂತ ಅಲ್ಲಿ ಪ್ರತ್ಯಕ್ಷವಾಗಿದ್ದ ಅಷ್ಟೇ.
(ಮುಂದುವರಿಯುವುದು)
ನಿರೂಪಣೆ: ಸತ್ಯಾ ಕೆ.