ಆ್ಯಂಬುಲೆನ್ಸ್ ಸೇವೆ ಅಲಭ್ಯ: ಸೈಕಲ್ ರಿಕ್ಷಾದಲ್ಲಿ ಶವ ಸಾಗಾಟ

ಲಕ್ನೋ, ಜು.9: ರೈಲ್ವೆ ಹಳಿ ಪಕ್ಕದಲ್ಲಿ ಪತ್ತೆಯಾದ ವ್ಯಕ್ತಿಯ ಶವವನ್ನು ಆಸ್ಪತ್ರೆಗೆ ಸಾಗಿಸಲು ಆ್ಯಂಬುಲೆನ್ಸ್ ಸೇವೆ ಸಿಗದ ಹಿನ್ನೆಲೆಯಲ್ಲಿ ವ್ಯಕ್ತಿಯ ಶವವನ್ನು ಸೈಕಲ್ ರಿಕ್ಷಾದಲ್ಲಿ ಸಾಗಿಸಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
ಅಟ್ರಾ ಸ್ಟೇಶನ್ನ ಸಮೀಪ ಶವ ಪತ್ತೆಯಾಗಿತ್ತು. ಮೃತ ವ್ಯಕ್ತಿಯನ್ನು ರಾಮಾಸಾರೆ ಎಂದು ಗುರುತಿಸಲಾಗಿದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.
ಸರಕಾರಿ ರೈಲ್ವೆ ಪೊಲೀಸರು(ಜಿಆರ್ಪಿ) ಆ್ಯಂಬುಲೆನ್ಸ್ ಸೇವೆಗಾಗಿ ಕೆಲವು ಆಸ್ಪತ್ರೆಗಳನ್ನು ಸಂಪರ್ಕಿಸಿದ್ದರು. ಯಾರೂ ಕೂಡ ಶವವನ್ನು ಆಸ್ಪತ್ರೆಗೆ ಸಾಗಿಸಲು ಮುಂದೆ ಬರಲಿಲ್ಲ. ಆಗ ಮೃತ ವ್ಯಕ್ತಿಯ ಸಂಬಂಧಿಕರು ಶವದ ಪೋಸ್ಟ್ಮಾರ್ಟಂಗಾಗಿ ಸೈಕಲ್ ರಿಕ್ಷಾದಲ್ಲಿ ಹೆಣ ಸಾಗಿಸಿದ್ದಾರೆ.
ಮೃತ ವ್ಯಕ್ತಿಯ ಶವವನ್ನು ಸೈಕಲ್ ರಿಕ್ಷಾದಲ್ಲಿ ಸಾಗಿಸುವ ಮಾರ್ಗದಲ್ಲಿ ಎಸ್ಪಿಯವರ ಮನೆ, ಡಿಐಜಿ ಕಚೇರಿ, ಕಮಿಶನರ್ ಹೌಸ್, ಪೊಲೀಸ್ ಲೈನ್, ಕಮಿಶನರ್ ಹಾಗೂ ಹಲವು ವಿಐಪಿಗಳ ಪ್ರದೇಶ ಸಿಗುತ್ತದೆ. ಆದರೆ, ಮೃತದೇಹವನ್ನು ಸೈಕಲ್ ರಿಕ್ಷಾದಲ್ಲಿ ಸಾಗಿಸುತ್ತಿರುವ ದೃಶ್ಯ ಯಾರ ಗಮನಕ್ಕೂ ಬಂದಿಲ್ಲ.





