ಬಸ್ ಢಿಕ್ಕಿ: ವ್ಯಕ್ತಿ ಮೃತ್ಯು
ಬೆಂಗಳೂರು, ಜು.9: ಶರವೇಗವಾಗಿ ಸಾಗುತ್ತಿದ್ದ ಬಿಎಂಟಿಸಿ ಬಸ್ವೊಂದು ಮುಂದೆ ಸಾಗುತ್ತಿದ್ದ ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಸಾವನ್ನಪ್ಪಿರುವ ದುರ್ಘಟನೆ ಇಲ್ಲಿನ ಯಲಹಂಕ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನಗರದ ಸಿಂಗನಾಯಕನಹಳ್ಳಿಯ ನಿವಾಸಿ ಶಂಕರ್(38) ಎಂಬುವರು ಮೃತಪಟ್ಟ ವ್ಯಕ್ತಿ ಎಂದು ಪೊಲೀಸರು ತಿಳಿಸಿದ್ದಾರೆ.
ನಿಟ್ಟೆ ಕಾಲೇಜಿನಲ್ಲಿ ಕಚೇರಿ ಸಹಾಯಕನಾಗಿದ್ದ ಶಂಕರ್ ಅವರು ಶನಿವಾರ ಬೆಳಗ್ಗೆ 6:45ರ ವೇಳೆ ಮನೆಯಿಂದ ಕಾಲೇಜಿಗೆ ಬೈಕ್ನಲ್ಲಿ ಹೋಗುತ್ತಿದ್ದರು. ಮಾರ್ಗ ಮಧ್ಯೆ ಮದರ್ ಡೈರಿ ಬಳಿ ಎಂಎಸ್ ಪಾಳ್ಯ ಕಡೆ ಹೋಗುತ್ತಿದ್ದ ಬಿಎಂಟಿಸಿ ಬಸ್ ಢಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದರು.
ಸ್ಥಳೀಯರ ಸಹಾಯದಿಂದಾಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪ್ರಕರಣ ಸಂಬಂಧ ಬಸ್ ಚಾಲಕನನ್ನು ಬಂಧಿಸಿರುವ ಯಲಹಂಕ ಸಂಚಾರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
Next Story





