ಚಿತ್ರನಿರ್ದೇಶಕ ಮದನ್ಗೆ ಜಾಮೀನು ನಿರಾಕರಿಸಿದ ಹೈಕೋರ್ಟ್
ಪ್ರಚಾರಕ ಪರಮೇಶ್ ಅಪಹರಣ ಪ್ರಕರಣ
.jpg)
ಬೆಂಗಳೂರು, ಜು.10: ವಿಜಯ್ ರಾಘವೇಂದ್ರ ನಟನೆಯ ಎರಡು ಕನಸು ಚಿತ್ರದ ಪ್ರಮೋಶನ್ ಸರಿಯಾಗಿ ಮಾಡಿಲ್ಲ ಎಂಬ ಕಾರಣಕ್ಕೆ ಪ್ರಚಾರಕ ಪರಮೇಶ್ ಎಂಬುವರನ್ನು ಅಪಹರಣ ಮಾಡಿದ್ದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಿರ್ದೇಶಕ ಎ.ಮದನ್ ಜಾಮೀನು ಕೋರಿ ಹೈಕೋರ್ಟ್ ಮೊರೆ ಹೋಗಿದ್ದಾರೆ.
ಅಧೀನ ನ್ಯಾಯಾಲಯ ಜಾಮೀನು ನಿರಾಕರಿಸಿದ ಹಿನ್ನೆಲೆಯಲ್ಲಿ ನಿರ್ದೇಶಕ ಮದನ್ ಸೇರಿ ಪ್ರಕರಣದ ಐವರು ಆರೋಪಿಗಳು ಹೈಕೋರ್ಟ್ಗೆ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಆರೋಪಿಗಳ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರತ್ನಕಲಾ ಅವರಿದ್ದ ಏಕಸದಸ್ಯ ಪೀಠ, ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಸರಕಾರಿ ಅಭಿಯೋಜಕರಿಗೆ ನಿರ್ದೇಶಿಸಿ ವಿಚಾರಣೆಯನ್ನು ಜುಲೈ 14ಕ್ಕೆ ಮುಂದೂಡಿದೆ.
ಪ್ರಕರಣವೇನು: ಎರಡು ಕನಸು ಚಿತ್ರದ ಪ್ರಚಾರಕ್ಕಾಗಿ ಸಿನಿಮಾ ಜಾಹೀರಾತು ಪ್ರಚಾರಕ ಪರಮೇಶ್ಗೆ ನಿರ್ದೇಶಕ ಮದನ್ 33.33 ಲಕ್ಷ ರೂ. ನೀಡಿದ್ದರು ಎನ್ನಲಾಗಿದೆ. ಆದರೆ, ಚಿತ್ರದ ಪ್ರಮೋಶನ್ ಸರಿಯಾಗಿ ಮಾಡದ ಕಾರಣಕ್ಕೆ ಹಣ ವಾಪಸ್ ಕೇಳಲಾಗಿತ್ತು. ಒಪ್ಪಂದದಂತೆ 8 ಲಕ್ಷ ರೂ. ಹಿಂದಿರುಗಿಸಿದ್ದ ಪರಮೇಶ್, ಉಳಿದ ಹಣ ವಾಪಸ್ ನೀಡಲು ಸತಾಯಿಸಿದ್ದರು. ಇದರಿಂದ ಮದನ್ ಹಾಗೂ ಆತನ ನಾಲ್ವರು ಪರಮೇಶ್ ಅವರನ್ನು ಬಸವೇಶ್ವರ ಮನೆಯಿಂದ ಅಪಹರಿಸಿದ್ದರು. ತನಿಖೆ ನಡೆಸಿದ್ದ ಮಾಗಡಿ ರಸ್ತೆ ಪೊಲೀಸರು ಮದನ್ ಹಾಗೂ ಇತರೆ ಆರೋಪಿಗಳನ್ನು ಬಂಧಿಸಿದ್ದರು. ಅಧೀನ ನ್ಯಾಯಾಲಯವು ಜೂನ್ 12ರಂದು ಆರೋಪಿಗಳಿಗೆ ಜಾಮೀನು ನಿರಾಕರಿಸಿತ್ತು.





