ಶೋಭಾ ಕಂದ್ಲಾಜೆ ಕೋಮು ರಾಜಕಾರಣ ಬಿಡಲಿ: ಎಸ್ಡಿಪಿಐ
ಉಡುಪಿ, ಜು.10: ಉಡುಪಿ ಲೋಕಸಭಾ ಕ್ಷೇತ್ರದ ಜನತೆ ಸರ್ವತೋಮುಖ ಅಭಿವೃಧ್ದಿಯನ್ನು ಗಮನದಲ್ಲಿಟ್ಟುಕೊಂಡು ಆಯ್ಕೆ ಮಾಡಿ ಕಳುಹಿಸಿದ ಸಂಸದೆ ಶೋಭಾ ಕರಂದ್ಲಾಜೆ ತನ್ನ ಕ್ಷೇತ್ರದ ಬಗ್ಗೆ ಕಾಳಜಿ ವಹಿಸದೆ ಜನರ ಭಾವನೆಗಳೊಂದಿಗೆ ಆಟವಾಡುತ್ತಿದ್ದಾರೆ. ತಾವು ಆಯ್ಕೆಯಾಗಿ ಬಂದಂತಹ ಕ್ಷೇತ್ರದ ಜನರ ಕಷ್ಟಗಳಿಗೆ ಸ್ಪಂದಿಸಿ ಜನಪರ ರಾಜಕಾರಣವನ್ನು ಮಾಡಬೇಕು ಹಾಗೂ ಕೋಮು ರಾಜಕಾರಣವನ್ನು ಬಿಡಬೇಕು ಎಂದು ಉಡುಪಿ ಜಿಲ್ಲಾ ಎಸ್ಡಿಪಿಐ ಆಗ್ರಹಿಸಿದೆ.
ಹಿಂದೂ ಧರ್ಮದ ರಕ್ಷಕಿ ಎಂದು ಗುರುತಿಸಿಕೊಳ್ಳಲು ಪ್ರಯತ್ನಿಸುತ್ತಿರುವಂತಹ ಸಂಸದೆ ತಮ್ಮದೇ ಪಕ್ಷದ ನಿಷ್ಟಾವಂತ ಕಾರ್ಯಕರ್ತ ಪ್ರವೀಣ್ ಪೂಜಾರಿಯ ಕೊಲೆಯ ಬಗ್ಗೆ ಚಕಾರವೆತ್ತದಿರುವುದು ಮಾತ್ರವಲ್ಲ ಸೌಜನ್ಯಕ್ಕಾದರೂ ಅವರ ಮನೆಗೆ ಭೇಟಿ ನೀಡದಿರುವುದು ಯಾವ ರಾಜಕಾರಣ ಎನ್ನುವುದನ್ನು ಜನತೆಗೆ ತಿಳಿಯಪಡಿಸಬೇಕು ಎಂದು ಎಸ್ಡಿಪಿಐ ಟೀಕಿಸಿದೆ.
ಇನ್ನಾದರೂ ಇವರು ಹಿಂದೂಗಳ ರಕ್ಷಕರೆನ್ನುವ ಡೋಂಗಿ ಸ್ವಾರ್ಥ ರಾಜ ಕಾರಣವನ್ನು ಬಿಟ್ಟು ಹಿಂದೂ ಹಾಗೂ ಮುಸ್ಲಿಂ ಯುವಕರ ಹತ್ಯೆಗಳ ಮಾತ್ರವಲ್ಲ ಕೋಮು ವಿಷಬೀಜವನ್ನು ಬಿತ್ತುತ್ತಿದ್ದಾರೋ ಅವರ ವಿರುದ್ಧ ಹೋರಾಟವನ್ನು ಮಾಡಲಿ ಎಂದು ಎಸ್ಡಿಪಿಎ ಜಿಲ್ಲಾಧ್ಯಕ್ಷ ಆಸೀಫ್ ಕೋಟೇಶ್ವರ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.





